ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಸಮಾಜಕ್ಕೆ ಸುವಾರ್ತೆಯ ಪ್ರಾಯೋಗಿಕ ಮೌಲ್ಯ

ನಿಮ್ಮ ಸಮಾಜಕ್ಕೆ ಸುವಾರ್ತೆಯ ಪ್ರಾಯೋಗಿಕ ಮೌಲ್ಯ

ನಿಮ್ಮ ಸಮಾಜಕ್ಕೆ ಸುವಾರ್ತೆಯ ಪ್ರಾಯೋಗಿಕ ಮೌಲ್ಯ

“ಕ್ರೈಸ್ತತ್ವದ ಮೂಲತತ್ತ್ವಗಳು ಪ್ರಾಯೋಗಿಕವಲ್ಲ. ಇಂದಿನ ಜಟಿಲ ಮಾನವ ಸಮಾಜದಲ್ಲಿ ಅವು ನಡೆಯುವುದಿಲ್ಲ” ಎಂಬ ಅಭಿಪ್ರಾಯವು ಇಂದಿನ ಲೋಕದಲ್ಲಿ ವ್ಯಕ್ತಪಡಿಸಲ್ಪಡುವುದನ್ನು ನಾವು ಅನೇಕಾವರ್ತಿ ಕೇಳಿಸಿಕೊಳ್ಳುತ್ತೇವೆ. ಆದರೆ ಮೋಹನ್‌ದಾಸ್‌ ಕೆ. ಗಾಂಧಿ ಮತ್ತು ಭಾರತದ ಮಾಜಿ ಬ್ರಿಟಿಷ್‌ ವೈಸ್‌ರಾಯ್‌ ಲಾರ್ಡ್‌ ಇರ್ವಿನ್‌ ಇವರ ನಡುವೆ ವರದಿಯಾದ ಒಂದು ಸಂಭಾಷಣೆಯಲ್ಲಿ, ತೀರ ಭಿನ್ನವಾದ ಒಂದು ಅಭಿಪ್ರಾಯವು ವ್ಯಕ್ತಪಡಿಸಲ್ಪಟ್ಟಿತ್ತು. ಗ್ರೇಟ್‌ ಬ್ರಿಟನ್‌ ಮತ್ತು ಭಾರತದ ನಡುವಣ ಸಮಸ್ಯೆಗಳನ್ನು ಯಾವುದು ಬಗೆಹರಿಸೀತೆಂದು ನೀವು ನೆನಸುತ್ತೀರಿ ಎಂದು ಲಾರ್ಡ್‌ ಇರ್ವಿನ್‌ ಗಾಂಧಿಯವರನ್ನು ಕೇಳಿದರಂತೆ. ಆಗ ಗಾಂಧಿಯವರು ಒಂದು ಬೈಬಲನ್ನೆತ್ತಿಕೊಂಡು, ಮತ್ತಾಯ ಪುಸ್ತಕದ ಐದನೆಯ ಅಧ್ಯಾಯಕ್ಕೆ ತೆರೆದು ಹೇಳಿದ್ದು: “ಈ ಪರ್ವತ ಪ್ರಸಂಗದಲ್ಲಿ ಕ್ರಿಸ್ತನು ತಿಳಿಸಿದ ಬೋಧನೆಗಳನ್ನು ನಿಮ್ಮ ಮತ್ತು ನನ್ನ ದೇಶವು ಪಾಲಿಸುವುದಾದರೆ, ನಮ್ಮ ದೇಶಗಳದ್ದು ಮಾತ್ರವಲ್ಲ ಇಡೀ ಲೋಕದ ಸಮಸ್ಯೆಗಳೇ ಬಗೆಹರಿಸಲ್ಪಡುವವು.”

ಆ ಪ್ರಸಂಗವು ಆತ್ಮಿಕತೆಯನ್ನು ಹುಡುಕುವುದರ ಕುರಿತು ಮತ್ತು ದೀನರು, ಶಾಂತಚಿತ್ತರು, ಕರುಣೆಯುಳ್ಳವರು, ನೀತಿಪ್ರಿಯರು ಆಗಿರುವುದರ ಕುರಿತು ತಿಳಿಸುತ್ತದೆ. ಅದು ನರಹತ್ಯೆಯನ್ನು ಮಾತ್ರವಲ್ಲ ಬೇರೆಯವರ ಮೇಲೆ ಸಿಟ್ಟುಗೊಳ್ಳುವುದನ್ನೂ ಹಾಗೂ ಕೇವಲ ವ್ಯಭಿಚಾರವನ್ನಲ್ಲ ಬದಲಾಗಿ ಕಾಮಾತುರವಾದ ಯೋಚನೆಗಳನ್ನೂ ಖಂಡಿಸುತ್ತದೆ. ಕುಟುಂಬಗಳನ್ನು ವಿಭಾಗಿಸುವ ಮತ್ತು ಮಕ್ಕಳನ್ನು ನಿರ್ಗತಿಕರನ್ನಾಗಿ ಮಾಡುವ ಬೇಜವಾಬ್ದಾರಿ ವಿಚ್ಛೇದಗಳನ್ನು ಅದು ವಿರೋಧಿಸುತ್ತದೆ. ಅದು ನಮಗೆ ಹೇಳುವುದು: ‘ನಿಮ್ಮನ್ನು ಇಷ್ಟಪಡದವರನ್ನೂ ಪ್ರೀತಿಸಿರಿ, ಬಡವರಿಗೆ ಕೊಡಿರಿ, ನಿಷ್ಕರುಣೆಯಿಂದ ಇತರರ ತೀರ್ಪುಮಾಡುವುದನ್ನು ನಿಲ್ಲಿಸಿರಿ, ನೀವು ಹೇಗೆ ಉಪಚರಿಸಲ್ಪಡಬೇಕೆಂದು ಅಪೇಕ್ಷಿಸುತ್ತೀರೋ ಹಾಗೆಯೆ ಬೇರೆಯವರನ್ನೂ ಉಪಚರಿಸಿರಿ.’ ಈ ಎಲ್ಲ ಬುದ್ಧಿವಾದವನ್ನು ಅನ್ವಯಿಸುವುದಾದರೆ ಮಹತ್ತಾದ ಪ್ರಯೋಜನಗಳು ಲಭಿಸುವವು ಎಂಬುದಂತೂ ನಿಶ್ಚಯ. ನಿಮ್ಮ ಸಮಾಜದಲ್ಲಿನ ಜನರು ಎಷ್ಟು ಹೆಚ್ಚಾಗಿ ಅದನ್ನು ಪಾಲಿಸುತ್ತಾರೋ ಅಷ್ಟು ಹೆಚ್ಚಾಗಿ ನಿಮ್ಮ ಸಮಾಜವು ಸುಧಾರಣೆ ಹೊಂದುವುದು!

ಈ ನಿಟ್ಟಿನಲ್ಲಿ ಯೆಹೋವನ ಸಾಕ್ಷಿಗಳು ಒಳ್ಳೇ ಪ್ರಭಾವ ಬೀರುತ್ತಾರೆ. ಮದುವೆಯನ್ನು ಗೌರವಿಸುವಂತೆ ಬೈಬಲು ಅವರಿಗೆ ಕಲಿಸುತ್ತದೆ. ಅವರ ಮಕ್ಕಳು ಯೋಗ್ಯ ಮೂಲತತ್ತ್ವಗಳ ವಿಷಯದಲ್ಲಿ ತರಬೇತಿ ಹೊಂದುತ್ತಾರೆ. ಕುಟುಂಬದ ಮಹತ್ವವನ್ನು ಅವರಿಗೆ ಒತ್ತಿಹೇಳಲಾಗುತ್ತದೆ. ಐಕ್ಯ ಕುಟುಂಬಗಳು ನಿಮ್ಮ ಸಮಾಜಕ್ಕೆ ಮಾತ್ರವಲ್ಲದೆ ನಿಮ್ಮ ರಾಷ್ಟ್ರಕ್ಕೂ ಒಂದು ವರವಾಗಿವೆ. ಏಕೆಂದರೆ ಕುಟುಂಬ ಬಂಧಗಳು ದುರ್ಬಲಗೊಂಡಾಗ ಮತ್ತು ಅನೈತಿಕತೆಯು ಅಧಿಕವಾದಾಗ, ಲೋಕಶಕ್ತಿಗಳು ಸಹ ಅವನತಿಹೊಂದಿದಂಥ ಅನೇಕ ಉದಾಹರಣೆಗಳಿಂದ ಇತಿಹಾಸವು ತುಂಬಿತುಳುಕುತ್ತಿದೆ. ಕ್ರಿಸ್ತೀಯ ಮೂಲತತ್ತ್ವಗಳಿಗನುಸಾರ ಜೀವಿಸುವಂತೆ ಯೆಹೋವನ ಸಾಕ್ಷಿಗಳು ಎಷ್ಟು ಹೆಚ್ಚು ವ್ಯಕ್ತಿಗಳು ಮತ್ತು ಕುಟುಂಬಗಳನ್ನು ಪ್ರಭಾವಿಸುತ್ತಾರೋ, ನಿಮ್ಮ ಸಮಾಜದಲ್ಲಿ ದುಷ್ಕೃತ್ಯ, ಅನೈತಿಕತೆ ಮತ್ತು ಅಪರಾಧವು ಅಷ್ಟೇ ಕಡಿಮೆಯಾಗುವುದು.

ಸಮಾಜಗಳನ್ನು ಮತ್ತು ಜನಾಂಗಗಳನ್ನು ಬಾಧಿಸುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಒಂದು, ಜಾತೀಯ ದುರಭಿಮಾನವೇ. ಇದಕ್ಕೆ ಪ್ರತಿಯಾಗಿ, ಅಪೊಸ್ತಲ ಪೇತ್ರನಂದದ್ದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.” ಮತ್ತು ಪೌಲನು ಬರೆದದ್ದು: “ನೀವೆಲ್ಲರು ಕ್ರಿಸ್ತಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ, ಆಳು ಒಡೆಯ ಎಂದೂ, ಗಂಡು ಹೆಣ್ಣು ಎಂದೂ ಭೇದವಿಲ್ಲ.” (ಅ. ಕೃತ್ಯಗಳು 10:​34, 35; ಗಲಾತ್ಯ 3:28) ಯೆಹೋವನ ಸಾಕ್ಷಿಗಳು ಇದನ್ನು ಅಂಗೀಕರಿಸುತ್ತಾರೆ. ಅವರ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ, ಬ್ರಾಂಚ್‌ ಆಫೀಸುಗಳಲ್ಲಿ ಮತ್ತು ಸಭೆಗಳಲ್ಲಿ, ಎಲ್ಲ ಜಾತಿಗಳ ಮತ್ತು ವರ್ಣಗಳ ಜನರು ಐಕ್ಯವಾಗಿ ಜೀವಿಸುತ್ತಾರೆ ಮತ್ತು ಕೆಲಸಮಾಡುತ್ತಾರೆ.

ಆಫ್ರಿಕದಲ್ಲಿ ಕೆಲವು ಕುಲಗಳು ಒಟ್ಟಿಗೆ ಬೆರೆಯಲಾರವು, ಯಾವಾಗಲೂ ಅವರ ನಡುವೆ ಜಗಳಗಳು ಇದ್ದೇ ಇರುತ್ತವೆ. ಆದರೂ ಅಲ್ಲಿ ನಡೆಯುವ ಯೆಹೋವನ ಸಾಕ್ಷಿಗಳ ಸಮ್ಮೇಳನಗಳಲ್ಲಿ, ಅನೇಕ ಭಿನ್ನ ಭಿನ್ನ ಕುಲಗಳ ಜನರು ಪೂರ್ಣ ಸಾಮರಸ್ಯ ಮತ್ತು ಹಾರ್ದಿಕ ಒಡನಾಟದಲ್ಲಿ ಊಟ, ನಿದ್ರೆ ಮತ್ತು ಆರಾಧನೆಯಲ್ಲಿ ಜೊತೆಗೂಡುತ್ತಾರೆ. ಇದನ್ನು ನೋಡುವಾಗ ಸರಕಾರಿ ಅಧಿಕಾರಿಗಳಿಗೆ ಅಚ್ಚರಿಯಾಗುತ್ತದೆ. ನಿಜ ಕ್ರೈಸ್ತತ್ವದ ಈ ಐಕ್ಯಭಾವದ ಪರಿಣಾಮದ ಒಂದು ಉದಾಹರಣೆಯು, ಆಗಸ್ಟ್‌ 2, 1958ರ ನ್ಯೂ ಯಾರ್ಕ್‌ನ ಆ್ಯಮ್‌ಸ್ಟರ್‌ಡ್ಯಾಮ್‌ ನ್ಯೂಸ್‌ ಪತ್ರಿಕೆಯಲ್ಲಿ ಹೇಳಲ್ಪಟ್ಟಿತ್ತು. ಈ ಹೇಳಿಕೆಯು, ಈ ಮುಂಚೆ ತಿಳಿಸಲ್ಪಟ್ಟಂತೆ ಎಲ್ಲಿ ಎರಡೂವರೆ ಲಕ್ಷಕ್ಕಿಂತಲೂ ಹೆಚ್ಚು ಮಂದಿ ಸಾಕ್ಷಿಗಳು ಕೂಡಿಬಂದಿದ್ದರೋ ಆ ನ್ಯೂ ಯಾರ್ಕ್‌ ಸಿಟಿಯ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಗಮನಿಸಿದ್ದರಿಂದ ಪ್ರೇರಿಸಲ್ಪಟ್ಟಿತ್ತು.

“ಜೀವನದ ಎಲ್ಲಾ ವರ್ಗಗಳಿಂದ ಮತ್ತು ಲೋಕದ ಎಲ್ಲಾ ಭಾಗಗಳಿಂದ ಬಂದ ನೀಗ್ರೋಗಳು, ಬಿಳಿಯರು ಮತ್ತು ಪೌರಸ್ತ್ಯರು ಎಲ್ಲೆಲ್ಲಿಯೂ ಸಂತೋಷದಿಂದಲೂ ಮುಕ್ತವಾಗಿಯೂ ಬೆರೆತರು. . . 120 ದೇಶಗಳಿಂದ ಬಂದ ಈ ಆರಾಧಕ ಸಾಕ್ಷಿಗಳು ಶಾಂತಿಯಿಂದ ಜೀವಿಸಿದ್ದಾರೆ ಮತ್ತು ಆರಾಧಿಸಿದ್ದಾರೆ, ಮತ್ತು ಅದನ್ನು ಮಾಡುವುದೆಷ್ಟು ಸುಲಭವೆಂಬುದನ್ನು ಅಮೆರಿಕನರಿಗೆ ತೋರಿಸಿಕೊಟ್ಟಿದ್ದಾರೆ. . . . ಜನರು ಹೇಗೆ ಒಟ್ಟುಗೂಡಿ ಕೆಲಸಮಾಡಸಾಧ್ಯವಿದೆ ಮತ್ತು ಜೀವಿಸಸಾಧ್ಯವಿದೆ ಎಂಬುದಕ್ಕೆ ಇದೊಂದು ಹೊಳೆಯುತ್ತಿರುವ ಉದಾಹರಣೆಯಾಗಿದೆ.”

ಈ ಆಧುನಿಕ ಲೋಕಕ್ಕೆ ಕ್ರೈಸ್ತತ್ವದ ಮೂಲತತ್ತ್ವಗಳು ಪ್ರಾಯೋಗಿಕವಲ್ಲ ಎಂದು ಅನೇಕರು ಹೇಳಿಯಾರು. ಆದರೆ, ಬೇರೆ ಯಾವುದು ಕಾರ್ಯಸಾಧಕವಾಗಿ ಪರಿಣಮಿಸಿದೆ ಅಥವಾ ಮುಂದೆಂದಾದರೂ ಕಾರ್ಯಸಾಧಕವಾಗಿ ಪರಿಣಮಿಸಲಿದೆ? ಕ್ರೈಸ್ತ ಮೂಲತತ್ತ್ವಗಳನ್ನು ಈಗ ನಿಮ್ಮ ಸಮಾಜಕ್ಕೆ ಅನ್ವಯಿಸುವುದಾದರೆ, ಅವು ನಿಜವಾದ ಮೌಲ್ಯವುಳ್ಳವುಗಳಾಗಿರಬಲ್ಲವು. ಮತ್ತು ಅವು, ದೇವರ ರಾಜ್ಯವು ಮಾನವಕುಲದ ಮೇಲೆ ಆಳ್ವಿಕೆ ನಡಿಸುವಾಗ, ಭೂಮ್ಯಾದ್ಯಂತ ಸಕಲ ‘ಜನಾಂಗ ಕುಲ ಪ್ರಜೆಗಳವರನ್ನು’ ಐಕ್ಯಗೊಳಿಸುವುದಕ್ಕಾಗಿ ತಳಪಾಯವಾಗಿಯೂ ಇರುವವು.​—ಪ್ರಕಟನೆ 7:​9, 10.

[ಪುಟ 23ರಲ್ಲಿರುವ ಸಂಕ್ಷಿಪ್ತ ವಿವರಣೆ]

ಎಲ್ಲಾ ಜಾತಿಗಳು ಮತ್ತು ವರ್ಣಗಳ ಜನರು ಒಟ್ಟುಗೂಡಿ ಕೆಲಸಮಾಡುತ್ತಾರೆ

[ಪುಟ 24ರಲ್ಲಿರುವ ಸಂಕ್ಷಿಪ್ತ ವಿವರಣೆ]

ಕ್ರೈಸ್ತತ್ವವು ಪ್ರಾಯೋಗಿಕವಾಗಿದೆ. ಬೇರೆ ಯಾವುದು ಕಾರ್ಯಸಾಧಕವಾಗಿ ಪರಿಣಮಿಸಿದೆ?