ಆದಿಕಾಂಡ 42:1-38

  • ಯೋಸೇಫನ ಅಣ್ಣಂದಿರು ಈಜಿಪ್ಟಿಗೆ (1-4)

  • ಅಣ್ಣಂದಿರ ಭೇಟಿ, ಅವರ ಪರೀಕ್ಷೆ (5-25)

  • ಅಣ್ಣಂದಿರು ತಂದೆ ಹತ್ರ ವಾಪಸ್‌ (26-38)

42  ಈಜಿಪ್ಟಲ್ಲಿ ದವಸಧಾನ್ಯ ಸಿಗುತ್ತೆ+ ಅಂತ ಯಾಕೋಬನಿಗೆ ಗೊತ್ತಾಯ್ತು. ಆಗ ಅವನು ಗಂಡುಮಕ್ಕಳಿಗೆ “ನೀವು ಮುಖಮುಖ ನೋಡ್ಕೊಂಡು ಸುಮ್ನೆ ಯಾಕೆ ಕೂತಿದ್ದೀರಾ? ಏನಾದ್ರೂ ಮಾಡಿ” ಅಂದ.  “ಈಜಿಪ್ಟಲ್ಲಿ ದವಸಧಾನ್ಯ ಸಿಗ್ತಿದೆ ಅಂತ ಕೇಳಿಸ್ಕೊಂಡೆ. ಅಲ್ಲಿಗೆ ಹೋಗಿ ನಮಗೆ ಬೇಕಾದ ದವಸಧಾನ್ಯ ತಗೊಂಡು ಬನ್ನಿ. ಇಲ್ಲದಿದ್ರೆ ನಾವು ಹಸಿವೆಯಿಂದ ಸಾಯಬೇಕಾಗುತ್ತೆ”+ ಅಂದ.  ಹಾಗಾಗಿ ಯೋಸೇಫನ ಹತ್ತು ಅಣ್ಣಂದಿರು+ ಧಾನ್ಯ ಖರೀದಿಸೋಕೆ ಈಜಿಪ್ಟಿಗೆ ಹೋದ್ರು.  ಆದ್ರೆ ಯಾಕೋಬ ಯೋಸೇಫನ ತಮ್ಮನಾದ ಬೆನ್ಯಾಮೀನನನ್ನ+ ಅವರ ಜೊತೆ ಕಳಿಸಲಿಲ್ಲ. ಯಾಕಂದ್ರೆ ಅವನ ಜೀವಕ್ಕೆ ಏನಾದ್ರೂ ಅಪಾಯ ಆಗಬಹುದು ಅಂತ ಯಾಕೋಬ ಭಯಪಟ್ಟ.+  ಕಾನಾನ್‌ ದೇಶದಲ್ಲೂ ಬರಗಾಲ ಬಂದಿದ್ರಿಂದ ಅಲ್ಲಿನ ಜನ್ರ ಜೊತೆ ಇಸ್ರಾಯೇಲನ ಗಂಡುಮಕ್ಕಳು ಕೂಡ ದವಸಧಾನ್ಯ ಖರೀದಿಸೋಕೆ ಈಜಿಪ್ಟ್‌ ದೇಶಕ್ಕೆ ಹೋದ್ರು.+  ಯೋಸೇಫನೇ ಈಜಿಪ್ಟಲ್ಲಿ ಅಧಿಕಾರ ನಡೆಸ್ತಿದ್ದ.+ ಭೂಮಿಯ ಎಲ್ಲ ಜನರಿಗೆ+ ಅವನೇ ದವಸಧಾನ್ಯ ಮಾರ್ತಿದ್ದ. ಹಾಗಾಗಿ ಯೋಸೇಫನ ಅಣ್ಣಂದಿರು ಅವನ ಹತ್ರ ಬಂದು ನೆಲದ ತನಕ ಬಗ್ಗಿ ನಮಸ್ಕಾರ ಮಾಡಿದ್ರು.+  ಯೋಸೇಫ ತನ್ನ ಅಣ್ಣಂದಿರನ್ನ ನೋಡಿದ ತಕ್ಷಣ ಗುರುತು ಹಿಡಿದ. ಆದ್ರೆ ತಾನು ಯಾರಂತ ಅವರಿಗೆ ಗೊತ್ತಾಗಬಾರದು+ ಅಂತ ಅವರ ಜೊತೆ ಒರಟಾಗಿ ಮಾತಾಡ್ತಾ “ಎಲ್ಲಿಂದ ಬಂದಿದ್ದೀರಾ?” ಅಂತ ಕೇಳಿದ. ಅವರು “ನಾವು ಕಾನಾನ್‌ ದೇಶದಿಂದ ಧಾನ್ಯ ಖರೀದಿಸೋಕೆ ಬಂದಿದ್ದೀವಿ”+ ಅಂದ್ರು.  ಯೋಸೇಫ ಅಣ್ಣಂದಿರ ಗುರುತು ಹಿಡಿದ್ರೂ ಅವರು ಅವನ ಗುರುತು ಹಿಡಿಲಿಲ್ಲ.  ಕೂಡಲೇ ಯೋಸೇಫನಿಗೆ ತಾನು ಅವರ ಬಗ್ಗೆ ಕಂಡಿದ್ದ ಕನಸುಗಳು ನೆನಪಾದವು.+ ಅವನು ಅವರಿಗೆ “ನೀವು ಗೂಢಚಾರರು! ಈ ದೇಶವನ್ನ ಯಾವ ಸ್ಥಳಗಳಿಂದ ಸುಲಭವಾಗಿ ದಾಳಿ ಮಾಡಬಹುದು ಅಂತ ನೋಡೋಕೆ ಬಂದಿದ್ದೀರಿ” ಅಂದ. 10  ಅವರು “ಇಲ್ಲ ಸ್ವಾಮಿ, ನಿನ್ನ ಸೇವಕರಾದ ನಾವು ಧಾನ್ಯ ಖರೀದಿಸೋಕೆ ಬಂದಿದ್ದೀವಿ. 11  ನಾವೆಲ್ಲ ಒಂದೇ ತಂದೆ ಮಕ್ಕಳು. ನಾವು ಪ್ರಾಮಾಣಿಕರು. ನಿನ್ನ ಸೇವಕರಾದ ನಾವು ಗೂಢಚಾರಿಕೆ ಮಾಡೋಕೆ ಬಂದಿಲ್ಲ” ಅಂದ್ರು. 12  ಆದ್ರೆ ಅವನು “ನಾ ಇದನ್ನ ನಂಬಲ್ಲ! ನಂಗೊತ್ತು, ನೀವು ಈ ದೇಶವನ್ನ ಯಾವ ಸ್ಥಳಗಳಿಂದ ಸುಲಭವಾಗಿ ದಾಳಿ ಮಾಡಬಹುದು ಅಂತ ನೋಡೋದಕ್ಕೇ ಬಂದಿದ್ದೀರಿ” ಅಂದ. 13  ಅವರು “ನಿನ್ನ ಸೇವಕರಾದ ನಾವು ಒಂದೇ ತಂದೆ ಮಕ್ಕಳು.+ ನಮ್ಮ ತಂದೆ ಕಾನಾನ್‌ ದೇಶದಲ್ಲಿದ್ದಾನೆ. ನಾವು ಒಟ್ಟು 12 ಜನ ಅಣ್ಣತಮ್ಮಂದಿರು.+ ಕೊನೇ ತಮ್ಮ ತಂದೆ ಹತ್ರ ಇದ್ದಾನೆ.+ ಆದ್ರೆ ಇನ್ನೊಬ್ಬ ತಮ್ಮ ಇಲ್ಲ”+ ಅಂದ್ರು. 14  ಆದ್ರೆ ಯೋಸೇಫ “ಇಲ್ಲ, ನಾನು ಹೇಳಿದ್ದೇ ನಿಜ. ನೀವು ಗೂಢಚಾರರು! 15  ನೀವು ಹೇಳಿದ್ದು ಸತ್ಯ ಅಂತ ನಾನು ನಂಬಬೇಕಾದ್ರೆ ನಿಮ್ಮ ಕೊನೇ ತಮ್ಮ ಇಲ್ಲಿಗೆ ಬರಬೇಕು. ಫರೋಹನ ಜೀವದಾಣೆ, ಅವನು ಇಲ್ಲಿಗೆ ಬರೋ ತನಕ ನೀವು ಇಲ್ಲಿಂದ ಹೋಗೋ ಹಾಗಿಲ್ಲ.+ 16  ನೀವೆಲ್ಲ ಇಲ್ಲೇ ಜೈಲಲ್ಲಿ ಇರಬೇಕು. ನಿಮ್ಮಲ್ಲಿ ಒಬ್ಬ ಮಾತ್ರ ಹೋಗಿ ನಿಮ್ಮ ತಮ್ಮನನ್ನ ಕರ್ಕೊಂಡು ಬರಲಿ. ಆಗ ನೀವು ಎಷ್ಟು ಸತ್ಯ ಹೇಳ್ತಿದ್ದೀರ ಅಂತ ಗೊತ್ತಾಗುತ್ತೆ. ನಿಮ್ಮ ತಮ್ಮನನ್ನ ಕರ್ಕೊಂಡು ಬರದಿದ್ರೆ ಫರೋಹನ ಜೀವದಾಣೆ ನೀವು ಗೂಢಚಾರರೇ” ಅಂದ. 17  ಆಮೇಲೆ ಅವನು ಮೂರು ದಿನ ಅವರನ್ನೆಲ್ಲ ಒಟ್ಟಿಗೆ ಜೈಲಲ್ಲಿಟ್ಟ. 18  ಮೂರನೇ ದಿನ ಯೋಸೇಫ ಅವರಿಗೆ “ನಾನು ದೇವರಿಗೆ ಭಯಪಡ್ತೀನಿ. ಹಾಗಾಗಿ ನೀವು ಬದುಕೋಕೆ ಒಂದು ದಾರಿ ಹೇಳ್ತೀನಿ. ನಾನು ಹೇಳೋ ಹಾಗೆ ಮಾಡಿ. 19  ನೀವು ನಿಜವಾಗ್ಲೂ ಪ್ರಾಮಾಣಿಕರಾಗಿದ್ರೆ ನಿಮ್ಮಲ್ಲಿ ಒಬ್ಬ ಮಾತ್ರ ಜೈಲಲ್ಲಿ ಇರಲಿ, ಉಳಿದವರೆಲ್ಲ ಹೋಗಬಹುದು. ನಿಮ್ಮ ಮನೆಯಲ್ಲಿ ಇರೋರು ಹಸಿವೆಯಿಂದ ಸಾಯದೇ ಇರೋಕೆ ಧಾನ್ಯ ತಗೊಂಡು ಹೋಗಿ.+ 20  ಆಮೇಲೆ ನಿಮ್ಮ ಕೊನೇ ತಮ್ಮನನ್ನ ಕರ್ಕೊಂಡು ಬನ್ನಿ. ಆಗ ನೀವು ಹೇಳಿದ್ದು ಸತ್ಯ ಅಂತ ಗೊತ್ತಾಗುತ್ತೆ, ನೀವು ಸಾಯಲ್ಲ” ಅಂದ. ಅವರು ಅವನ ಮಾತಿಗೆ ಒಪ್ಪಿದ್ರು. 21  ಅವರು ಒಬ್ರಿಗೊಬ್ರು “ನಾವು ನಮ್ಮ ತಮ್ಮನಿಗೆ ಅನ್ಯಾಯ ಮಾಡಿದ್ರಿಂದ ಈಗ ಶಿಕ್ಷೆ ಅನುಭವಿಸ್ತಾ ಇದ್ದೀವಿ.+ ಅವನು ‘ಕರುಣೆ ತೋರಿಸಿ’ ಅಂತ ನಮ್ಮ ಹತ್ರ ಎಷ್ಟೋ ಸಾರಿ ಬೇಡ್ಕೊಂಡ. ಆದ್ರೆ ನಾವು ಅವನ ದುಃಖ ನೋಡಿದ್ರೂ ಕರುಣೆ ತೋರಿಸಲಿಲ್ಲ. ಅದಕ್ಕೇ ನಾವೀಗ ಇಂಥ ಕಷ್ಟ ಅನುಭವಿಸ್ತಾ ಇದ್ದೀವಿ” ಅಂತ ಮಾತಾಡ್ಕೊಂಡ್ರು. 22  ಆಗ ರೂಬೇನ “‘ಆ ಹುಡುಗನಿಗೆ ಏನೂ ಹಾನಿ* ಮಾಡಬೇಡಿ’ ಅಂತ ನಾನು ನಿಮಗೆ ಹೇಳ್ದೆ. ಆದ್ರೆ ನೀವು ನನ್ನ ಮಾತು ಕೇಳಲಿಲ್ಲ.+ ಅವನ ರಕ್ತ ಸುರಿಸಿದ್ದಕ್ಕೆ ಈಗ ನಾವು ದೇವರಿಗೆ ಉತ್ತರ ಕೊಡಬೇಕು”+ ಅಂದ. 23  ತಾವು ಮಾತಾಡಿದ್ದು ಯೋಸೇಫನಿಗೆ ಅರ್ಥವಾಗ್ತಿದೆ ಅಂತ ಅವರಿಗೆ ಗೊತ್ತಾಗಲಿಲ್ಲ. ಯಾಕಂದ್ರೆ ಯೋಸೇಫ ಅವರ ಜೊತೆ ಒಬ್ಬ ಅನುವಾದಕನ ಮೂಲಕ ಮಾತಾಡ್ತಿದ್ದ. 24  ಅವರ ಮಾತು ಕೇಳಿದಾಗ ಯೋಸೇಫ ಅವರಿಂದ ಸ್ವಲ್ಪ ದೂರ ಹೋಗಿ ಕಣ್ಣೀರು ಸುರಿಸಿದ.+ ಆಮೇಲೆ ವಾಪಸ್‌ ಬಂದು ಅವರ ಜೊತೆ ಮತ್ತೆ ಮಾತಾಡಿ ಸಿಮೆಯೋನನನ್ನ+ ಹಿಡಿದು ಅವರ ಕಣ್ಣೆದುರಲ್ಲೇ ಬಂಧಿಸಿದ.+ 25  ಆಮೇಲೆ ಪ್ರತಿಯೊಬ್ಬನ ಚೀಲದಲ್ಲಿ ಧಾನ್ಯ ತುಂಬಿಸೋಕೆ, ಅವರವರ ಹಣ ಅವರವರ ಚೀಲದಲ್ಲಿ ಇಡೋಕೆ, ಪ್ರಯಾಣಕ್ಕೆ ಅವರಿಗೆ ಬೇಕಾದ ಆಹಾರ ಕೊಡೋಕೆ ತನ್ನ ಸೇವಕರಿಗೆ ಅಪ್ಪಣೆಕೊಟ್ಟ. ಅವರು ಹಾಗೇ ಮಾಡಿದ್ರು. 26  ಯೋಸೇಫನ ಅಣ್ಣಂದಿರು ತಮ್ಮ ಧಾನ್ಯದ ಚೀಲಗಳನ್ನ ಕತ್ತೆಗಳ ಮೇಲೆ ಹೊರಿಸಿ ಅಲ್ಲಿಂದ ಹೊರಟ್ರು. 27  ದಾರಿಯಲ್ಲಿ ಅವರು ಒಂದು ವಸತಿಗೃಹದಲ್ಲಿ ಉಳ್ಕೊಂಡ್ರು. ಅವರಲ್ಲಿ ಒಬ್ಬ ಕತ್ತೆಗೆ ಮೇವು ಕೊಡೋಕೆ ತನ್ನ ಚೀಲ ತೆರೆದಾಗ ಅವನ ಹಣದ ಚೀಲ ಮೇಲೆನೇ ಇತ್ತು. ಅದನ್ನ ನೋಡಿ 28  ಅವನು ತನ್ನ ಅಣ್ಣತಮ್ಮಂದಿರಿಗೆ “ನನ್ನ ಚೀಲದಲ್ಲಿ ಹಣ ಇದೆ! ನಾನು ಕೊಟ್ಟ ಹಣ ಹಿಂದಕ್ಕೆ ಕೊಟ್ಟಿದ್ದಾರೆ!” ಅಂದ. ಆಗ ಅವರ ಎದೆಬಡಿತ ಜಾಸ್ತಿ ಆಯ್ತು. ಅವರು ನಡುಗ್ತಾ ಒಬ್ಬರನ್ನೊಬ್ರು ನೋಡ್ತಾ “ದೇವರು ನಮಗೆ ಯಾಕೆ ಈ ರೀತಿ ಶಿಕ್ಷೆ ಕೊಡ್ತಿದ್ದಾನೆ?”ಅಂದ್ರು. 29  ಅವರು ಕಾನಾನ್‌ ದೇಶದಲ್ಲಿರೋ ತಮ್ಮ ತಂದೆ ಯಾಕೋಬನ ಹತ್ರ ಬಂದ ಮೇಲೆ ನಡೆದ ವಿಷ್ಯಗಳನ್ನ ಅವನಿಗೆ ತಿಳಿಸ್ತಾ 30  “ಆ ದೇಶದ ಅಧಿಕಾರಿ ನಮ್ಮ ಜೊತೆ ಒರಟಾಗಿ ಮಾತಾಡಿದ.+ ನಾವು ಆ ದೇಶ ನೋಡೋಕೆ ಬಂದಿರೋ ಗೂಢಚಾರರು ಅಂತ ಆರೋಪ ಹೊರಿಸಿದ. 31  ಅದಕ್ಕೆ ನಾವು ಅವನಿಗೆ ‘ನಾವು ಗೂಢಚಾರರಲ್ಲ.+ ಪ್ರಾಮಾಣಿಕ ಜನ್ರು. 32  ನಾವು ಒಂದೇ ತಂದೆ ಮಕ್ಕಳು. ನಾವು ಒಟ್ಟು 12 ಅಣ್ಣತಮ್ಮಂದಿರು.+ ಒಬ್ಬ ತಮ್ಮ ಇಲ್ಲ,+ ಕೊನೇ ತಮ್ಮ ಕಾನಾನ್‌ ದೇಶದಲ್ಲಿ ತಂದೆ ಜೊತೆ ಇದ್ದಾನೆ’ + ಅಂದ್ವಿ. 33  ಆದ್ರೆ ಆ ದೇಶದ ಅಧಿಕಾರಿ ‘ನೀವು ಪ್ರಾಮಾಣಿಕರು ಅಂತ ನಾನು ನಂಬಬೇಕಾದ್ರೆ ನಿಮ್ಮಲ್ಲಿ ಒಬ್ಬ ಇಲ್ಲೇ ಇರಬೇಕು.+ ಉಳಿದವರೆಲ್ಲ ಹೋಗಬಹುದು. ನಿಮ್ಮ ಮನೇಲಿ ಇರೋರು ಹಸಿವೆಯಿಂದ ಸಾಯದಿರೋಕೆ ಧಾನ್ಯ ತಗೊಂಡು ಹೋಗಿ.+ 34  ನಿಮ್ಮ ಕೊನೇ ತಮ್ಮನನ್ನ ಕರ್ಕೊಂಡು ಬನ್ನಿ. ಆಗ ನೀವು ಗೂಢಚಾರರಲ್ಲ, ಪ್ರಾಮಾಣಿಕ ಜನ್ರು ಅಂತ ನಂಬ್ತೀನಿ. ಈ ನಿಮ್ಮ ಸಹೋದರನನ್ನ ಸಹ ಬಿಟ್ಟುಬಿಡ್ತೀನಿ. ನೀವು ನಿಮಗೆ ಬೇಕಾದ ಧಾನ್ಯ ಕೂಡ ಈ ದೇಶದಲ್ಲಿ ಖರೀದಿಸಬಹುದು’ ಅಂತ ಹೇಳಿದ” ಅಂದ್ರು. 35  ಆಮೇಲೆ ಅವರು ಧಾನ್ಯದ ಚೀಲಗಳನ್ನ ಬಿಚ್ಚಿ ಖಾಲಿ ಮಾಡ್ತಿದ್ದಾಗ ಪ್ರತಿಯೊಬ್ಬನ ಚೀಲದಲ್ಲೂ ಅವನವನ ಹಣದ ಚೀಲ ಇತ್ತು. ಅವರು ಮತ್ತು ಅವರ ತಂದೆ ಅದನ್ನ ನೋಡಿದಾಗ ತುಂಬ ಭಯಪಟ್ರು. 36  ಅವರ ತಂದೆ ಯಾಕೋಬ “ನೀವು ನನ್ನಿಂದ ನನ್ನ ಮಕ್ಕಳನ್ನ ಯಾಕೆ ಕಿತ್ಕೊಳ್ತೀರಾ?+ ಮೊದ್ಲೇ ಯೋಸೇಫ ಇಲ್ಲ,+ ಈಗ ಸಿಮೆಯೋನನನ್ನ ಸಹ ಕಳ್ಕೊಂಡಿದ್ದೀನಿ.+ ಸಾಲದ್ದಕ್ಕೆ ಬೆನ್ಯಾಮೀನನನ್ನ ಕೂಡ ನನ್ನಿಂದ ದೂರ ಮಾಡಬೇಕು ಅಂತಿದ್ದೀರಾ? ಎಲ್ಲ ಕಷ್ಟಗಳು ನನಗೇ ಬರ್ತಿವೆ!” ಅಂತೇಳಿ ದುಃಖಿಸಿದ. 37  ಅದಕ್ಕೆ ರೂಬೇನ “ಅಪ್ಪಾ, ಈ ಹುಡುಗನನ್ನ ನನ್ನ ಕೈಗೆ ಒಪ್ಪಿಸು. ಅವನನ್ನ ಜೋಪಾನವಾಗಿ ಕರ್ಕೊಂಡು ಹೋಗಿ ಕರ್ಕೊಂಡು ಬರ್ತಿನಿ. ಅವನನ್ನ ತಿರುಗಿ ನಿನಗೆ ಒಪ್ಪಿಸೋ ಜವಾಬ್ದಾರಿ ನಂದು.+ ಒಂದುವೇಳೆ ಕರ್ಕೊಂಡು ಬರಲಿಲ್ಲ ಅಂದ್ರೆ ನೀನು ನನ್ನ ಇಬ್ರು ಗಂಡುಮಕ್ಕಳನ್ನ ಕೊಲ್ಲಬಹುದು”+ ಅಂದ. 38  ಆದ್ರೆ ಯಾಕೋಬ “ನಾನಂತೂ ನನ್ನ ಮಗನನ್ನ ನಿಮ್ಮ ಜೊತೆ ಕಳಿಸಲ್ಲ. ಅವನ ಒಡಹುಟ್ಟಿದವ ತೀರಿಹೋದ. ಈಗ ಇರುವವನು ಇವನೊಬ್ಬನೇ.+ ಹೋಗೋ ದಾರಿಯಲ್ಲಿ ಇವನ ಜೀವಕ್ಕೇನಾದ್ರೂ ಅಪಾಯ ಬಂದ್ರೆ ನಾನು ನಿಮ್ಮಿಂದಾಗಿ ಈ ಮುದಿಪ್ರಾಯದಲ್ಲೇ ದುಃಖದಿಂದ+ ಸಮಾಧಿ*+ ಸೇರ್ತೀನಿ” ಅಂದ.

ಪಾದಟಿಪ್ಪಣಿ

ಅಕ್ಷ. “ಹುಡುಗನ ವಿರುದ್ಧ ಪಾಪ.”