ಆದಿಕಾಂಡ 44:1-34

  • ಬೆನ್ಯಾಮೀನನ ಚೀಲದಲ್ಲಿ ಬೆಳ್ಳಿ ಲೋಟ (1-17)

  • ಬೆನ್ಯಾಮೀನನನ್ನ ಬಿಡಲು ಯೆಹೂದನ ಕೋರಿಕೆ (18-34)

44  ಆಮೇಲೆ ಯೋಸೇಫ ತನ್ನ ಮನೆಯನ್ನ ನೋಡ್ಕೊಳ್ತಿದ್ದ ಸೇವಕನಿಗೆ “ಆ ಮನುಷ್ಯರು ಎಷ್ಟು ಧಾನ್ಯ ತಗೊಂಡು ಹೋಗೋಕೆ ಆಗುತ್ತೋ ಅಷ್ಟೂ ಧಾನ್ಯ ಅವರ ಚೀಲಗಳಲ್ಲಿ ತುಂಬು. ಪ್ರತಿಯೊಬ್ಬರ ಹಣವನ್ನ ಅವರ ಚೀಲದಲ್ಲೇ ಇಟ್ಟುಬಿಡು.+  ಆದ್ರೆ ಅವರ ಕೊನೇ ತಮ್ಮನ ಚೀಲದಲ್ಲಿ ಅವನ ಹಣದ ಜೊತೆ ನನ್ನ ಬೆಳ್ಳಿ ಲೋಟ ಕೂಡ ಇಡು” ಅಂದ. ಅವನು ಯೋಸೇಫ ಹೇಳಿದ ಹಾಗೇ ಮಾಡಿದ.  ಬೆಳಿಗ್ಗೆ ಸೂರ್ಯ ಹುಟ್ಟಿದಾಗ ಅವರನ್ನ ಕಳಿಸಿಕೊಟ್ರು. ಅವರು ತಮ್ಮ ಕತ್ತೆಗಳ ಜೊತೆ ಹೊರಟು  ಪಟ್ಟಣದಿಂದ ಸ್ವಲ್ಪ ದೂರ ಬಂದ್ರು. ಅಷ್ಟರಲ್ಲಿ ಯೋಸೇಫ ತನ್ನ ಸೇವಕನಿಗೆ “ನೀನು ಬೇಗ ಆ ಮನುಷ್ಯರ ಹಿಂದೆನೇ ಹೋಗಿ ಹಿಡಿ! ಆಮೇಲೆ ಅವರಿಗೆ ‘ಉಪಕಾರ ಮಾಡಿದವರಿಗೆ ಅಪಕಾರ ಮಾಡೋದಾ?  ನೀವು ನನ್ನ ಧಣಿಯ ಲೋಟ ಯಾಕೆ ಕದ್ರಿ? ನನ್ನ ಧಣಿ ಅದ್ರಲ್ಲೇ ಕುಡಿತಾನೆ. ಅದನ್ನೇ ನೋಡಿ ಭವಿಷ್ಯ ಹೇಳ್ತಾನೆ. ನೀವು ಅದನ್ನೇ ಕದ್ದಿದ್ದೀರಲ್ಲಾ! ದೊಡ್ಡ ತಪ್ಪು ಮಾಡಿದ್ದೀರ’ ಅಂತೇಳು” ಅಂದ.  ಹಾಗಾಗಿ ಆ ಸೇವಕ ಅವರನ್ನ ಅಟ್ಟಿಸ್ಕೊಂಡು ಹೋಗಿ ಅವರನ್ನ ನಿಲ್ಲಿಸಿ ಆ ಮಾತನ್ನ ಹೇಳಿದ.  ಅದಕ್ಕೆ ಅವರು “ಸ್ವಾಮಿ, ದಯವಿಟ್ಟು ಹಾಗೆ ಹೇಳಬೇಡಿ. ನಿನ್ನ ಸೇವಕರಾದ ನಾವು ಅಂಥ ಕೆಲಸ ಯಾವತ್ತೂ ಮಾಡಲ್ಲ.  ನಮ್ಮ ಚೀಲದಲ್ಲಿ ಹಣ ಸಿಕ್ಕಿದಾಗ ನಾವು ಆ ಹಣನ ನಿನಗೆ ಕೊಡಕ್ಕಂತಾನೇ ಕಾನಾನ್‌ ದೇಶದಿಂದ ಬಂದ್ವಿ ತಾನೇ?+ ಅಂದ್ಮೇಲೆ ನಿನ್ನ ಧಣಿ ಮನೆಯಿಂದ ನಾವು ಚಿನ್ನ ಬೆಳ್ಳಿ ಕದಿತೀವಾ?  ಆ ಲೋಟ ನಮ್ಮಲ್ಲಿ ಯಾರ ಹತ್ರ ಸಿಗುತ್ತೋ ಅವನಿಗೆ ಮರಣಶಿಕ್ಷೆ ಆಗ್ಲಿ. ಅಷ್ಟೇ ಅಲ್ಲ ನಾವೆಲ್ಲ ನಮ್ಮ ಧಣಿಗೆ ಗುಲಾಮರಾಗ್ತೀವಿ” ಅಂದ್ರು. 10  ಆಗ ಆ ಸೇವಕ “ಸರಿ, ನೀವು ಹೇಳಿದ ಹಾಗೇ ಆಗ್ಲಿ. ಆದ್ರೆ ಆ ಲೋಟ ಯಾರ ಹತ್ರ ಸಿಗುತ್ತೋ ಅವನು ಮಾತ್ರ ನನ್ನ ಗುಲಾಮ ಆಗಬೇಕು. ಉಳಿದವರು ಹೋಗಬಹುದು” ಅಂದ. 11  ಕೂಡಲೇ ಅವರೆಲ್ಲ ತಮ್ಮತಮ್ಮ ಚೀಲ ಕೆಳಗಿಳಿಸಿ ಬಿಚ್ಚಿದ್ರು. 12  ಆ ಸೇವಕ ಅವರಲ್ಲಿ ದೊಡ್ಡವನಿಂದ ಹಿಡಿದು ಎಲ್ಲರ ಚೀಲನಾ ಚೆನ್ನಾಗಿ ಹುಡುಕ್ತಾ ಬಂದ. ಕೊನೆಗೆ ಚಿಕ್ಕವನಾಗಿದ್ದ ಬೆನ್ಯಾಮೀನನ ಚೀಲದಲ್ಲಿ ಆ ಲೋಟ ಸಿಕ್ತು.+ 13  ಆಗ ಅವರು ದುಃಖದಿಂದ ತಮ್ಮ ಬಟ್ಟೆ ಹರ್ಕೊಂಡು ತಮ್ಮ ತಮ್ಮ ಚೀಲಗಳನ್ನ ಕತ್ತೆಗಳ ಮೇಲೆ ಇಟ್ಟು ಪಟ್ಟಣಕ್ಕೆ ವಾಪಸ್‌ ಹೋದ್ರು. 14  ಯೆಹೂದ+ ಮತ್ತು ಅವನ ಅಣ್ಣತಮ್ಮಂದಿರು ಯೋಸೇಫನ ಮನೆಯೊಳಗೆ ಬಂದಾಗ ಅವನು ಇನ್ನೂ ಅಲ್ಲೇ ಇದ್ದ. ಅವರು ಅವನ ಮುಂದೆ ಅಡ್ಡಬಿದ್ರು.+ 15  ಯೋಸೇಫ ಅವರಿಗೆ “ನೀವು ಎಂಥ ಕೆಲಸ ಮಾಡಿದ್ರಿ? ನಾನು ಭವಿಷ್ಯ ನೋಡಿ ಎಲ್ಲ ಕಂಡುಹಿಡಿತೀನಿ ಅಂತ ನಿಮಗೆ ಗೊತ್ತಿಲ್ವಾ?”+ ಅಂತ ಕೇಳಿದ. 16  ಅದಕ್ಕೆ ಯೆಹೂದ “ಸ್ವಾಮಿ, ನಮಗೆ ಏನು ಹೇಳಬೇಕು ಅಂತಾನೇ ಗೊತ್ತಾಗ್ತಿಲ್ಲ. ನಾವು ತಪ್ಪು ಮಾಡಿಲ್ಲ ಅಂತ ಸಾಬೀತು ಮಾಡೋದು ಹೇಗೆ? ನಾವು ಹಿಂದೆ ಮಾಡಿದ ತಪ್ಪಿಗೆ ಈಗ ಸತ್ಯದೇವರು ನಮ್ಮಿಂದ ಲೆಕ್ಕ ಕೇಳ್ತಿದ್ದಾನೆ.+ ಆ ಲೋಟ ಯಾರ ಹತ್ರ ಸಿಗುತ್ತೋ ಅವನು ಮಾತ್ರ ಅಲ್ಲ ನಾವೆಲ್ರೂ ನಿನಗೆ ಈಗ ಗುಲಾಮರು!” ಅಂದ. 17  ಅದಕ್ಕೆ ಯೋಸೇಫ “ಇಲ್ಲ! ನಿಮ್ಮೆಲ್ಲರನ್ನೂ ನಾನು ಗುಲಾಮರನ್ನಾಗಿ ಮಾಡ್ಕೊಳ್ಳಲ್ಲ. ಯಾರ ಹತ್ರ ಲೋಟ ಸಿಕ್ತೋ ಅವನು ಮಾತ್ರ ನನಗೆ ಗುಲಾಮ ಆಗಬೇಕು.+ ಉಳಿದವರೆಲ್ಲ ಅರಾಮಾಗಿ ನಿಮ್ಮ ತಂದೆ ಹತ್ರ ಹೋಗಬಹುದು” ಅಂದ. 18  ಆಗ ಯೆಹೂದ ಯೋಸೇಫನ ಹತ್ರ ಹೋಗಿ ಹೀಗಂದ: “ಸ್ವಾಮಿ, ನಿನ್ನ ದಾಸನಾದ ನಾನು ಹೇಳೋದನ್ನ ದಯವಿಟ್ಟು ಕೇಳು, ನನ್ನ ಮೇಲೆ ಕೋಪ ಮಾಡ್ಕೊಬೇಡ. ನೀನು ಫರೋಹನಿಗೆ ಸಮಾನನಾಗಿದ್ದೀಯ ಅಂತ ನಂಗೊತ್ತು.+ 19  ಒಡೆಯನಾದ ನೀನು ನಿನ್ನ ದಾಸರಾದ ನಮಗೆ ತಂದೆ, ತಮ್ಮ ಇದ್ದಾನಾ ಅಂತ ಕೇಳಿದೆ. 20  ಅದಕ್ಕೆ ನಾವು ‘ತಂದೆ ಇದ್ದಾನೆ, ಅವನಿಗೆ ವಯಸ್ಸಾಗಿದೆ. ನಮಗೊಬ್ಬ ಕೊನೇ ತಮ್ಮ ಇದ್ದಾನೆ.+ ಅವನು ತಂದೆಗೆ ವಯಸ್ಸಾದಾಗ ಹುಟ್ಟಿದವನು. ಅವನ ಒಡಹುಟ್ಟಿದವನು ತೀರಿಹೋದ.+ ಅವನ ತಾಯಿಗೆ ಹುಟ್ಟಿದವರಲ್ಲಿ ಈಗ ಉಳಿದವನು ಅವನೊಬ್ಬನೇ.+ ಹಾಗಾಗಿ ತಂದೆಗೆ ಅವನಂದ್ರೆ ತುಂಬ ಪ್ರೀತಿ’ ಅಂತ ಹೇಳಿದ್ವಿ. 21  ಅದಕ್ಕೆ ನೀನು ನಿನ್ನ ದಾಸರಾದ ನಮಗೆ ‘ಅವನನ್ನ ನೋಡ್ಬೇಕು, ಇಲ್ಲಿಗೆ ಕರ್ಕೊಂಡು ಬನ್ನಿ’+ ಅಂತ ಅಪ್ಪಣೆಕೊಟ್ಟೆ. 22  ಆಗ ನಾವು ನಮ್ಮ ಒಡೆಯನಾದ ನಿನಗೆ ‘ತಂದೆಯನ್ನ ಬಿಟ್ಟು ಬರೋಕೆ ಆ ಹುಡುಗನಿಗೆ ಆಗಲ್ಲ. ಒಂದುವೇಳೆ ಬಂದ್ರೂ ಖಂಡಿತ ತಂದೆ ಜೀವಂತ ಉಳಿಯಲ್ಲ’+ ಅಂದ್ವಿ. 23  ಅದಕ್ಕೆ ನೀನು ನಿನ್ನ ದಾಸರಿಗೆ ‘ನಿಮ್ಮ ತಮ್ಮನನ್ನ ಇಲ್ಲಿಗೆ ಕರ್ಕೊಂಡು ಬರದಿದ್ರೆ ಇನ್ನು ಯಾವತ್ತೂ ನನಗೆ ನಿಮ್ಮ ಮುಖ ತೋರಿಸಬಾರದು’ + ಅಂದೆ. 24  ಅದಕ್ಕೇ ನಾವು ಹೋಗಿ ಸ್ವಾಮಿಯಾದ ನೀನು ಹೇಳಿದ ಮಾತನ್ನ ನಿನ್ನ ದಾಸನಾದ ನಮ್ಮ ತಂದೆಗೆ ಹೇಳಿದ್ವಿ. 25  ಸ್ವಲ್ಪ ದಿನ ಆದ್ಮೇಲೆ ತಂದೆ ನಮಗೆ ‘ನೀವು ಹೋಗಿ ಇನ್ನೂ ಸ್ವಲ್ಪ ಧಾನ್ಯ ತಗೊಂಡು ಬನ್ನಿ’+ ಅಂದ. 26  ಆದ್ರೆ ನಾವು ‘ಅಲ್ಲಿಗೆ ಹೋಗೋಕೆ ಸಾಧ್ಯ ಇಲ್ಲ. ನಮ್ಮ ಕೊನೇ ತಮ್ಮ ಬಂದ್ರೆ ಮಾತ್ರ ಹೋಗ್ತೀವಿ. ಇಲ್ಲಾಂದ್ರೆ ನಾವು ಆ ವ್ಯಕ್ತಿಗೆ ಮುಖ ತೋರಿಸೋಕೆ ಆಗಲ್ಲ’ ಅಂದ್ವಿ.+ 27  ಆಗ ತಂದೆ ‘ನನ್ನ ಹೆಂಡತಿಯಲ್ಲಿ ನನಗೆ ಇಬ್ರೇ ಗಂಡುಮಕ್ಕಳು ಹುಟ್ಟಿದ್ರು ಅಂತ ನಿಮಗೆ ಚೆನ್ನಾಗಿ ಗೊತ್ತು.+ 28  ಅವರಲ್ಲಿ ಒಬ್ಬ ನನ್ನಿಂದ ದೂರ ಆದ. “ಕಾಡುಪ್ರಾಣಿ ಅವನನ್ನ ತುಂಡು ತುಂಡು ಮಾಡಿರಬೇಕು”+ ಅಂದ್ಕೊಂಡೆ. ಅವತ್ತಿಂದ ನಾನು ಅವನನ್ನ ನೋಡಲೇ ಇಲ್ಲ. 29  ಈಗ ನೀವು ಇವನನ್ನ ಸಹ ಕರ್ಕೊಂಡು ಹೋಗಬೇಕಂತ ಇದ್ದೀರ. ಇವನ ಜೀವಕ್ಕೇನಾದ್ರೂ ಅಪಾಯ ಬಂದ್ರೆ ನಾನು ನಿಮ್ಮಿಂದಾಗಿ ಈ ಮುದಿಪ್ರಾಯದಲ್ಲೇ ದುಃಖದಿಂದ ಸಮಾಧಿ*+ ಸೇರಬೇಕಾಗುತ್ತೆ’ ಅಂದ.+ 30  ನನ್ನ ತಂದೆ ತನ್ನ ಜೀವಕ್ಕಿಂತ ಹೆಚ್ಚಾಗಿ ಈ ಹುಡುಗನನ್ನ ಪ್ರೀತಿಸ್ತಾನೆ. ನಾನೇನಾದ್ರೂ ಈ ಹುಡುಗ ಇಲ್ಲದೆ ತಂದೆ ಹತ್ರ ಹೋದ್ರೆ 31  ಅವನು ಬಂದಿಲ್ಲ ಅಂತ ನೋಡಿದ ತಕ್ಷಣ ತಂದೆ ಖಂಡಿತ ಸಾಯ್ತಾನೆ. ನಮ್ಮ ತಂದೆ ನಮ್ಮಿಂದಾಗಿ ಈ ಮುದಿಪ್ರಾಯದಲ್ಲಿ ದುಃಖದಿಂದ ಸಮಾಧಿ* ಸೇರ್ತಾನೆ. 32  ನಾನು ತಂದೆಗೆ ‘ಒಂದುವೇಳೆ ಅವನನ್ನ ಕರ್ಕೊಂಡು ಬರದಿದ್ರೆ ಆ ಪಾಪ ಜೀವನಪೂರ್ತಿ ನನ್ನ ಮೇಲೆನೇ ಇರಲಿ’ ಅಂತ ಹೇಳಿ ಈ ಹುಡುಗನ ಜವಾಬ್ದಾರಿ ತಗೊಂಡೆ.+ 33  ಹಾಗಾಗಿ ಸ್ವಾಮಿ, ದಯವಿಟ್ಟು ಈ ಹುಡುಗನಿಗೆ ಬದಲಾಗಿ ನನ್ನನ್ನ ನಿನ್ನ ಗುಲಾಮನಾಗಿ ಇಟ್ಕೊ. ಅವನು ಅವನ ಅಣ್ಣಂದಿರ ಜೊತೆ ಹೋಗ್ಲಿ. 34  ಈ ಹುಡುಗನಿಲ್ಲದೆ ನಾನು ತಂದೆ ಹತ್ರ ಹೇಗೆ ಹೋಗ್ಲಿ? ತಂದೆಗೆ ಆಗೋ ಅನಾಹುತ ನನ್ನಿಂದ ನೋಡೋಕೆ ಆಗಲ್ಲ!”

ಪಾದಟಿಪ್ಪಣಿ