ಜೆಕರ್ಯ 1:1-21

  • ಯೆಹೋವನ ಹತ್ರ ವಾಪಸ್‌ ಬರೋಕೆ ಆಮಂತ್ರಣ (1-6)

    • ‘ನನ್ನ ಹತ್ರ ವಾಪಸ್‌ ಬನ್ನಿ, ನಾನೂ ನಿಮ್ಮ ಹತ್ರ ವಾಪಸ್‌ ಬರ್ತಿನಿ’ (3)

  • ದರ್ಶನ 1: ಮರ್ಟಲ್‌ ಮರಗಳ ಮಧ್ಯ ನಿಂತಿದ್ದ ಕುದುರೆಸವಾರರು (7-17)

    • “ಯೆಹೋವ ಮತ್ತೆ ಚೀಯೋನನ್ನ ಸಾಂತ್ವನಗೊಳಿಸ್ತಾನೆ” (17)

  • ದರ್ಶನ 2: ನಾಲ್ಕು ಕೊಂಬುಗಳು ಮತ್ತು ನಾಲ್ಕು ಕರಕುಶಲಗಾರರು (18-21)

1  ದಾರ್ಯಾವೆಷ ಆಳ್ತಿದ್ದ ಎರಡ್ನೇ ವರ್ಷದ ಎಂಟನೇ ತಿಂಗಳಲ್ಲಿ+ ಇದ್ದೋವನ ಮೊಮ್ಮಗನೂ ಬೆರೆಕ್ಯನ ಮಗನೂ ಆದ ಪ್ರವಾದಿ ಜೆಕರ್ಯನಿಗೆ*+ ಯೆಹೋವನ ಸಂದೇಶ ಸಿಕ್ತು. ಅದೇನಂದ್ರೆ:  “ನಿಮ್ಮ ಪೂರ್ವಜರ ಮೇಲೆ ಯೆಹೋವನಿಗೆ ತುಂಬ ಕೋಪ ಬಂದಿತ್ತು.+  ಹಾಗಾಗಿ ಅವ್ರಿಗೆ ಹೀಗೆ ಹೇಳು: ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: “‘ನನ್ನ ಹತ್ರ ವಾಪಸ್‌ ಬನ್ನಿ’ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ. ‘ಆಗ ನಾನು ನಿಮ್ಮ ಹತ್ರ ವಾಪಸ್‌ ಬರ್ತಿನಿ’+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.”’  ‘ನೀವು ನಿಮ್ಮ ಪೂರ್ವಜರ ತರ ಆಗಬೇಡಿ. ಆಗಿನ ಪ್ರವಾದಿಗಳು ಅವ್ರಿಗೆ “ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ನಿಮ್ಮ ಕೆಟ್ಟ ದಾರಿಗಳನ್ನ, ಕೆಟ್ಟ ಕೆಲಸಗಳನ್ನ ಬಿಟ್ಟು ದಯವಿಟ್ಟು ವಾಪಸ್‌ ಬನ್ನಿ’ ಅಂತ ಹೇಳಿದ್ದರು.”’+ ‘ಆದ್ರೆ ಅವರು ನನ್ನ ಮಾತನ್ನ ಕೇಳಲಿಲ್ಲ. ನನ್ನ ಕಡೆ ಗಮನಕೊಡಲಿಲ್ಲ’+ ಅಂತ ಯೆಹೋವ ಹೇಳ್ತಿದ್ದಾನೆ.  ‘ಈಗ ನಿಮ್ಮ ಪೂರ್ವಜರು ಎಲ್ಲಿದ್ದಾರೆ? ಆವಾಗಿದ್ದ ಪ್ರವಾದಿಗಳು ಇವತ್ತು ಬದುಕಿದ್ದಾರಾ?  ಯಾವ ನಿಯಮಗಳನ್ನ ಪಾಲಿಸಬೇಕಂತ ನಾನು ನಿಮ್ಮ ಪೂರ್ವಜರಿಗೆ ಹೇಳಿದ್ನೋ ಆ ನಿಯಮಗಳನ್ನ ಪಾಲಿಸದೇ ಇದ್ರೆ ಏನಾಗುತ್ತೆ ಅಂತ ಎಚ್ಚರಿಸೋಕೆ ನಾನು ನನ್ನ ಸೇವಕರನ್ನ, ಪ್ರವಾದಿಗಳನ್ನ ಅವ್ರ ಹತ್ರ ಕಳಿಸಿದ್ದೆ. ನಾನು ಹೇಳಿದ ಎಲ್ಲ ವಿಷ್ಯಗಳನ್ನ ಅವರು ಅನುಭವಿಸಿದ್ರಲ್ವಾ?’+ ಹಾಗಾಗಿ ಅವರು ನನ್ನ ಹತ್ರ ವಾಪಸ್‌ ಬಂದು, ನನಗೆ ಹೀಗಂದ್ರು: ‘ಸೈನ್ಯಗಳ ದೇವರಾದ ಯೆಹೋವ ತನ್ನ ಮನಸ್ಸಲ್ಲಿ ಅಂದ್ಕೊಂಡ ತರಾನೇ ಮಾಡಿದ್ದಾನೆ. ನಾವು ಹಿಡಿದ ದಾರಿಗಳಿಗೆ, ನಾವು ಮಾಡಿದ ಕೆಲಸಗಳಿಗೆ ತಕ್ಕಂತೆ ನಮ್ಮ ಜೊತೆ ನಡ್ಕೊಂಡಿದ್ದಾನೆ.’”+  ದಾರ್ಯಾವೆಷ ಆಳ್ತಿದ್ದ ಎರಡ್ನೇ ವರ್ಷದ+ 11ನೇ ತಿಂಗಳಿನ ಅಂದ್ರೆ ಶೆಬಾಟ್‌* ತಿಂಗಳಿನ 24ನೇ ದಿನ ಇದ್ದೋವನ ಮೊಮ್ಮಗನೂ ಬೆರೆಕ್ಯನ ಮಗನೂ ಆದ ಪ್ರವಾದಿ ಜೆಕರ್ಯನಿಗೆ ಯೆಹೋವನ ಸಂದೇಶ ಸಿಕ್ತು. ಅದೇನಂದ್ರೆ:  “ರಾತ್ರಿ ಹೊತ್ತಲ್ಲಿ ನಾನು ಒಂದು ದರ್ಶನ ನೋಡಿದೆ. ವ್ಯಕ್ತಿಯೊಬ್ಬ ಕೆಂಪು ಕುದುರೆ ಮೇಲೆ ಸವಾರಿ ಮಾಡ್ತಿದ್ದ. ಅವನು ಕಂದರದಲ್ಲಿ ಮರ್ಟಲ್‌ ಮರಗಳ* ಮಧ್ಯ ಬಂದು ನಿಂತ್ಕೊಂಡ. ಅವನ ಹಿಂದೆ ಕೆಂಪು, ಕಂದು ಮತ್ತು ಬಿಳಿ ಬಣ್ಣದ ಕುದುರೆಗಳಿದ್ದವು.”  ಆಗ ನಾನು “ಒಡೆಯ, ಇವರು ಯಾರು?” ಅಂತ ಕೇಳಿದೆ. ಅದಕ್ಕೆ ನನ್ನ ಜೊತೆ ಮಾತಾಡ್ತಿದ್ದ ದೇವದೂತ “ಇವರು ಯಾರಂತ ನಿನಗೆ ತೋರಿಸ್ತೀನಿ” ಅಂದ. 10  ಆಗ ಮರ್ಟಲ್‌ ಮರಗಳ ಮಧ್ಯ ನಿಂತಿದ್ದ ಆ ವ್ಯಕ್ತಿ “ಯೆಹೋವ ಇವ್ರನ್ನ ಭೂಮಿಯಲ್ಲೆಲ್ಲ ಸಂಚರಿಸ್ಕೊಂಡು ಬರೋಕೆ ಕಳಿಸಿದ್ದಾನೆ” ಅಂದ. 11  ಮರ್ಟಲ್‌ ಮರಗಳ ಮಧ್ಯ ನಿಂತಿದ್ದ ಯೆಹೋವನ ದೂತನಿಗೆ ಆ ಕುದುರೆಸವಾರರು “ನಾವು ಇಡೀ ಭೂಮಿಯನ್ನ ಸಂಚರಿಸಿದ್ವಿ. ಭೂಮೀಲಿ ಸ್ವಲ್ಪನೂ ಗಲಿಬಿಲಿ ಇಲ್ಲ, ಪ್ರಶಾಂತವಾಗಿದೆ”+ ಅಂದ್ರು. 12  ಆಗ ಯೆಹೋವನ ದೂತ “ಸೈನ್ಯಗಳ ದೇವರಾದ ಯೆಹೋವನೇ, 70 ವರ್ಷಗಳಿಂದ ಯೆಹೂದದ ಪಟ್ಟಣಗಳ ಮೇಲೆ, ಯೆರೂಸಲೇಮಿನ ಮೇಲೆ ನಿನ್ನ ಕೋಪ ಹೊತ್ತಿ ಉರಿತಿದೆ.+ ಇನ್ನೂ ಎಷ್ಟು ದಿನ ಕರುಣೆ ತೋರಿಸದೆ ಹೀಗೇ ಇರ್ತಿಯ?”+ ಅಂತ ಕೇಳಿದ. 13  ನನ್ನ ಜೊತೆ ಮಾತಾಡ್ತಿದ್ದ ದೇವದೂತನಿಗೆ ಯೆಹೋವ ಸಾಂತ್ವನದ ಮಾತುಗಳನ್ನಾಡ್ತಾ ದಯೆಯಿಂದ ಉತ್ತರಿಸಿದ. 14  ನನ್ನ ಜೊತೆ ಮಾತಾಡ್ತಿದ್ದ ಆ ದೇವದೂತ ನನಗೆ ಹೀಗಂದ: “ನೀನು ಹೀಗೆ ಹೇಳು ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ: “ನನಗೆ ಯೆರೂಸಲೇಮಿನ ಮೇಲೆ ಮತ್ತು ಚೀಯೋನಿನ ಮೇಲೆ ನಿಜವಾಗ್ಲೂ ತುಂಬ ಪ್ರೀತಿ, ಕಾಳಜಿ ಇದೆ.+ 15  ಹಾಯಾಗಿರೋ ದೇಶಗಳ ಮೇಲೆ ನನಗೆ ತುಂಬ ಕೋಪ ಬಂದಿದೆ.+ ಯಾಕಂದ್ರೆ ನಾನು ನನ್ನ ಜನ್ರಿಗೆ ಸ್ವಲ್ಪ ಶಿಕ್ಷೆ ಕೊಡಬೇಕು ಅಂದ್ಕೊಂಡಿದ್ದೆ.+ ಆದ್ರೆ ಆ ದೇಶಗಳು ನನ್ನ ಜನ್ರಿಗೆ ತುಂಬಾನೇ ಹಾನಿ ಮಾಡಿದ್ವು.”’+ 16  ಹಾಗಾಗಿ ಯೆಹೋವ ಹೀಗೆ ಹೇಳ್ತಾನೆ: ‘“ನಾನು ಕರುಣೆಯಿಂದ ಯೆರೂಸಲೇಮಿಗೆ ವಾಪಸ್‌ ಹೋಗ್ತೀನಿ.+ ಅಲ್ಲಿ ನನ್ನ ಸ್ವಂತ ಮನೆಯನ್ನ ಕಟ್ಟಲಾಗುತ್ತೆ.+ ಯೆರೂಸಲೇಮನ್ನ ಮತ್ತೆ ಕಟ್ಟೋಕೆ ಅಳತೆಗಳನ್ನ ತಗೊಳ್ಳಲಾಗುತ್ತೆ”*+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.’ 17  ಇನ್ನೊಂದು ಸಲ ತಿಳಿಸ್ತಾ ಹೀಗೆ ಹೇಳು: ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: “ನನ್ನ ಪಟ್ಟಣಗಳಲ್ಲಿ ಒಳ್ಳೇತನ ಮತ್ತೊಮ್ಮೆ ತುಂಬಿತುಳುಕುತ್ತೆ. ಯೆಹೋವ ಮತ್ತೆ ಚೀಯೋನನ್ನ ಸಾಂತ್ವನಗೊಳಿಸ್ತಾನೆ,+ ಯೆರೂಸಲೇಮನ್ನ ಆರಿಸ್ಕೊಳ್ತಾನೆ.”’”+ 18  ಆಮೇಲೆ ನಾನು ತಲೆ ಎತ್ತಿ ನೋಡಿದಾಗ ನಾಲ್ಕು ಕೊಂಬುಗಳು ಕಾಣಿಸ್ತು.+ 19  ಆಗ ನನ್ನ ಜೊತೆ ಮಾತಾಡ್ತಿದ್ದ ದೇವದೂತನಿಗೆ “ಏನಿವು?” ಅಂದೆ. ಅದಕ್ಕೆ ಅವನು “ಯೆಹೂದವನ್ನ,+ ಇಸ್ರಾಯೇಲನ್ನ+ ಮತ್ತು ಯೆರೂಸಲೇಮನ್ನ+ ಚೆಲ್ಲಾಪಿಲ್ಲಿ ಮಾಡಿದ ಕೊಂಬುಗಳಿವು” ಅಂದ. 20  ಆಮೇಲೆ ಯೆಹೋವ ನನಗೆ ನಾಲ್ಕು ಕರಕುಶಲಗಾರರನ್ನ ತೋರಿಸಿದನು. 21  ಆಗ ನಾನು “ಇವರು ಏನು ಮಾಡೋಕೆ ಬಂದಿದ್ದಾರೆ?” ಅಂತ ಕೇಳಿದೆ. ಅದಕ್ಕೆ ದೇವದೂತ “ಯಾರೂ ತಲೆ ಎತ್ತೋಕೆ ಆಗದಷ್ಟರ ಮಟ್ಟಿಗೆ ಯೆಹೂದವನ್ನ ಆ ಕೊಂಬುಗಳು ಚೆಲ್ಲಾಪಿಲ್ಲಿ ಮಾಡಿದ್ದವು. ಈ ಕೆಲಸಗಾರರು ಆ ಕೊಂಬುಗಳನ್ನ ಹೆದರಿಸೋಕೆ ಬಂದಿದ್ದಾರೆ. ಯೆಹೂದವನ್ನ ಚೆಲ್ಲಾಪಿಲ್ಲಿ ಮಾಡಬೇಕಂತ ಅದ್ರ ವಿರುದ್ಧ ತಮ್ಮ ಕೊಂಬುಗಳನ್ನ ಎತ್ತಿದ ಎಲ್ಲ ದೇಶಗಳನ್ನ ನಾಶಮಾಡೋಕೆ ಬಂದಿದ್ದಾರೆ” ಅಂದ.

ಪಾದಟಿಪ್ಪಣಿ

ಅರ್ಥ “ಯೆಹೋವ ನೆನಪಿಸ್ಕೊಂಡನು.”
ಇದು, ಹೊಳಪಿನ ಎಲೆಗಳು ಮತ್ತು ಸುವಾಸನೆ ಇರೋ ಬಿಳಿ ಹೂವುಗಳನ್ನ ಬಿಡೋ ಪೊದೆ.
ಅಕ್ಷ. “ಅಳೆಯೋ ನೂಲನ್ನ ಎಳೆಯಲಾಗುತ್ತೆ.”