ದಾನಿಯೇಲ 1:1-21

  • ಬಾಬೆಲಿನ ಜನ್ರು ಯೆರೂಸಲೇಮನ್ನ ವಶ ಮಾಡ್ಕೊಂಡ್ರು (1, 2)

  • ಕೈದಿಗಳಾಗಿ ಕರ್ಕೊಂಡು ಬಂದಿದ್ದ ರಾಜವಂಶದ ಯುವಕರಿಗೆ ವಿಶೇಷ ತರಬೇತಿ (3-5)

  • ನಾಲ್ಕು ಇಬ್ರಿಯರ ನಂಬಿಕೆ ಪರೀಕ್ಷೆ (6-21)

1  ಯೆಹೂದದ ರಾಜ ಯೆಹೋಯಾಕೀಮನ+ ಆಳ್ವಿಕೆಯ ಮೂರನೇ ವರ್ಷದಲ್ಲಿ ಬಾಬೆಲಿನ ರಾಜ ನೆಬೂಕದ್ನೆಚ್ಚರ ಯೆರೂಸಲೇಮಿಗೆ ಬಂದು ಅದನ್ನ ವಶ ಮಾಡ್ಕೊಂಡ.+  ಸ್ವಲ್ಪ ಸಮಯ ಆದ್ಮೇಲೆ ಯೆಹೋವ ಯೆಹೂದದ ರಾಜ ಯೆಹೋಯಾಕೀಮನನ್ನ, ಸತ್ಯ ದೇವರ ಆಲಯದ ಕೆಲವು ಪಾತ್ರೆಗಳನ್ನ ನೆಬೂಕದ್ನೆಚ್ಚರನಿಗೆ ಒಪ್ಪಿಸಿದ.+ ನೆಬೂಕದ್ನೆಚ್ಚರ ಆ ಪಾತ್ರೆಗಳನ್ನ ಶಿನಾರ್‌*+ ದೇಶಕ್ಕೆ ತಗೊಂಡು ಹೋಗಿ ತನ್ನ ದೇವರ ಮಂದಿರದ ಖಜಾನೆಯಲ್ಲಿ ಇಟ್ಟ.+  ಆಮೇಲೆ ರಾಜ ನೆಬೂಕದ್ನೆಚ್ಚರ ತನ್ನ ಆಸ್ಥಾನದ ಮುಖ್ಯ ಅಧಿಕಾರಿ ಅಶ್ಪೆನಜಗೆ ಇಸ್ರಾಯೇಲ್ಯರ ಕೆಲವು ಯುವಕರನ್ನ ಕರ್ಕೊಂಡು ಬರೋಕೆ ಹೇಳಿದ. ಮುಖ್ಯವಾಗಿ ರಾಜವಂಶಕ್ಕೆ, ಶ್ರೀಮಂತ ಮನೆತನಕ್ಕೆ ಸೇರಿದವ್ರನ್ನ ಕರ್ಕೊಂಡು ಬರೋಕೆ ಹೇಳಿದ.+  ಅವ್ರಲ್ಲಿ ಕುಂದುಕೊರತೆ ಇರಬಾರದಿತ್ತು. ಸೌಂದರ್ಯ, ವಿವೇಕ, ಜ್ಞಾನ, ತಿಳುವಳಿಕೆ ಇರಬೇಕಿತ್ತು.+ ರಾಜನ ಅರಮನೆಯಲ್ಲಿ ಸೇವೆಮಾಡೋ ಸಾಮರ್ಥ್ಯ ಇರಬೇಕಿತ್ತು. ಕಸ್ದೀಯರ ಸಾಹಿತ್ಯ, ಭಾಷೆ ಬಗ್ಗೆ ಆಸ್ಥಾನದ ಮುಖ್ಯ ಅಧಿಕಾರಿಯಾಗಿದ್ದ ಅಶ್ಪೆನಜ ಆ ಯುವಕರಿಗೆ ಕಲಿಸಬೇಕಿತ್ತು.  ಅಷ್ಟೇ ಅಲ್ಲ ತಾನು ತಿನ್ನೋ ರುಚಿರುಚಿಯಾದ ಆಹಾರದಲ್ಲಿ, ತಾನು ಕುಡಿಯೋ ದ್ರಾಕ್ಷಾಮದ್ಯದಲ್ಲಿ ಪ್ರತಿದಿನ ಅವ್ರಿಗೆ ಒಂದು ಭಾಗ ಕೊಡಬೇಕಂತ ರಾಜ ಹೇಳಿದ. ಮೂರು ವರ್ಷ ತರಬೇತಿ* ಪಡ್ಕೊಂಡ ಮೇಲೆ ಅವರು ರಾಜಸೇವೆ ಶುರು ಮಾಡಬೇಕಿತ್ತು.  ಅವ್ರಲ್ಲಿ ಯೆಹೂದ ಕುಲಕ್ಕೆ ಸೇರಿದ ಕೆಲವು ಯುವಕರು ಇದ್ರು. ಅವ್ರ ಹೆಸ್ರು: ದಾನಿಯೇಲ,*+ ಹನನ್ಯ,* ಮೀಷಾಯೇಲ,* ಅಜರ್ಯ.*+  ಆಸ್ಥಾನದ ಅಧಿಕಾರಿಗಳ ಮುಖ್ಯಸ್ಥ ಅವ್ರಿಗೆ ಹೊಸ ಹೆಸ್ರು ಇಟ್ಟ. ದಾನಿಯೇಲನಿಗೆ ಬೇಲ್ತೆಶಚ್ಚರ,+ ಹನನ್ಯನಿಗೆ ಶದ್ರಕ್‌, ಮೀಷಾಯೇಲನಿಗೆ ಮೇಶಕ್‌, ಅಜರ್ಯನಿಗೆ ಅಬೇದ್‌ನೆಗೋ ಅಂತ ಹೆಸ್ರಿಟ್ಟ.+  ರಾಜ ತಿನ್ನೋ ರುಚಿರುಚಿಯಾದ ಊಟ ತಿಂದು ಅವನು ಕುಡಿಯೋ ದ್ರಾಕ್ಷಾಮದ್ಯ ಕುಡಿದು ಅಪವಿತ್ರ ಆಗಬಾರದು ಅಂತ ದಾನಿಯೇಲ ಮನಸ್ಸಲ್ಲಿ* ದೃಢನಿರ್ಧಾರ ಮಾಡಿದ್ದ. ಹಾಗಾಗಿ ಈ ರೀತಿ ತನ್ನನ್ನ ಅಪವಿತ್ರ ಮಾಡ್ಕೊಳ್ಳದೇ ಇರೋಕೆ ದಾನಿಯೇಲ ಆಸ್ಥಾನದ ಅಧಿಕಾರಿಗಳ ಮುಖ್ಯಸ್ಥನ ಹತ್ರ ಅನುಮತಿ ಕೇಳಿದ.  ಆ ಮುಖ್ಯಸ್ಥ ದಾನಿಯೇಲನಿಗೆ ದಯೆ, ಕರುಣೆ ತೋರಿಸೋ ತರ ಸತ್ಯ ದೇವರು ಮಾಡಿದನು.+ 10  ಆದ್ರೆ ಆ ಮುಖ್ಯಸ್ಥ ದಾನಿಯೇಲನಿಗೆ “ನನ್ನ ಒಡೆಯನಾದ ರಾಜನನ್ನ ನೆನಸ್ಕೊಂಡ್ರೆ ನನಗೆ ಭಯ ಆಗುತ್ತೆ. ಯಾಕಂದ್ರೆ ನಿಮಗೆ ಇಂಥ ಊಟ ಕೊಡಬೇಕಂತ ನಮಗೆ ಹೇಳಿರೋದು ರಾಜ. ನಿಮ್ಮ ವಯಸ್ಸಿನ ಬೇರೆ ಹುಡುಗರನ್ನ ನೋಡಿದಾಗ ನೀವು ಸೊರಗಿ ಹೋಗಿರೋದನ್ನ ರಾಜ ನೋಡಿದ್ರೆ ಏನು ಮಾಡೋದು? ನಿಮ್ಮಿಂದಾಗಿ ರಾಜ ನನ್ನ ತಲೆ ತೆಗಿತಾನೆ” ಅಂದ. 11  ಆಗ ದಾನಿಯೇಲ, ತನ್ನನ್ನ, ಹನನ್ಯ, ಮೀಷಾಯೇಲ್‌, ಅಜರ್ಯನನ್ನ ನೋಡ್ಕೊಳ್ಳೋಕೆ ಆಸ್ಥಾನದ ಅಧಿಕಾರಿಗಳ ಮುಖ್ಯಸ್ಥ ನೇಮಿಸಿದ್ದ ಪಾಲಕನ ಹತ್ರ ಹೋಗಿ 12  “ಈ ನಿನ್ನ ಸೇವಕರನ್ನ 10 ದಿನ ಪರೀಕ್ಷೆ ಮಾಡು. ದಯವಿಟ್ಟು, ನಮಗೆ ತಿನ್ನೋಕೆ ಸ್ವಲ್ಪ ತರಕಾರಿಗಳನ್ನ, ಕುಡಿಯೋಕೆ ನೀರು ಕೊಡು. 13  ಆಮೇಲೆ ರಾಜನ ರುಚಿರುಚಿಯಾದ ಊಟ ತಿನ್ನೋ ಬೇರೆ ಯುವಕರ ಜೊತೆ ನಮ್ಮನ್ನ ಹೋಲಿಸಿ ನೋಡು. ಆಮೇಲೆ ಏನು ಮಾಡಬೇಕಂತ ನೀನೇ ತೀರ್ಮಾನ ಮಾಡು” ಅಂದ. 14  ಅವನು ಅದಕ್ಕೆ ಒಪ್ಪಿ 10 ದಿನ ತನಕ ನೋಡಿದ.* 15  ಹತ್ತು ದಿನ ಆದ್ಮೇಲೆ ರಾಜನ ರುಚಿರುಚಿಯಾದ ಊಟ ತಿನ್ನೋ ಬೇರೆ ಯುವಕರಿಗಿಂತ ಈ ಯುವಕರು ನೋಡೋಕೆ ಸುಂದರವಾಗಿ ಆರೋಗ್ಯವಂತರಾಗಿದ್ರು. 16  ಹಾಗಾಗಿ ಆ ಪಾಲಕ ಅವ್ರಿಗೆ ರಾಜನ ರುಚಿಯಾದ ಆಹಾರವನ್ನ, ದ್ರಾಕ್ಷಾಮದ್ಯವನ್ನ ಕೊಡದೆ ತರಕಾರಿಗಳನ್ನ ಕೊಡ್ತಾ ಹೋದ. 17  ಸತ್ಯ ದೇವರು ಈ ನಾಲ್ಕು ಯುವಕರಿಗೆ ಎಲ್ಲ ರೀತಿಯ ಸಾಹಿತ್ಯಗಳ ಬಗ್ಗೆ ವಿವೇಕ, ಜ್ಞಾನ, ತಿಳುವಳಿಕೆ* ಕೊಟ್ಟನು. ದಾನಿಯೇಲನಿಗೆ ಎಲ್ಲ ರೀತಿಯ ದರ್ಶನಗಳನ್ನ,* ಕನಸುಗಳನ್ನ ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ ಕೊಟ್ಟನು.+ 18  ರಾಜ ಹೇಳಿದ ಸಮಯ ಮುಗಿದ ಮೇಲೆ ಆಸ್ಥಾನದ ಅಧಿಕಾರಿಗಳ ಮುಖ್ಯಸ್ಥ ಯುವಕರನ್ನ ರಾಜ ನೆಬೂಕದ್ನೆಚ್ಚರನ ಮುಂದೆ ಕರ್ಕೊಂಡು ಬಂದ.+ 19  ರಾಜ ಅವ್ರ ಜೊತೆ ಮಾತಾಡಿದಾಗ ಆ ಇಡೀ ಗುಂಪಲ್ಲಿ ದಾನಿಯೇಲ, ಹನನ್ಯ, ಮೀಷಾಯೇಲ, ಅಜರ್ಯರ+ ತರ ಯಾರೂ ಇರಲಿಲ್ಲ. ಹಾಗಾಗಿ ಅವ್ರಿಗೆ ರಾಜನ ಅರಮನೆಯಲ್ಲಿ ಕೆಲಸ ಕೊಟ್ರು. 20  ವಿವೇಕ, ತಿಳುವಳಿಕೆಯಿಂದ ಮಾಡಬೇಕಿದ್ದ ವಿಷ್ಯಗಳ ಬಗ್ಗೆ ರಾಜ ಅವ್ರ ಹತ್ರ ಕೇಳ್ತಿದ್ದ. ಆ ಎಲ್ಲ ವಿಷ್ಯಗಳಲ್ಲಿ ಅವರು ಇಡೀ ಸಾಮ್ರಾಜ್ಯದಲ್ಲಿದ್ದ ಬೇರೆಲ್ಲ ಮಂತ್ರವಾದಿಗಳಿಗಿಂತ ಮಾಟಗಾರರಿಗಿಂತ+ ಹತ್ತು ಪಟ್ಟು ಜಾಣರು ಅಂತ ರಾಜನಿಗೆ ಗೊತ್ತಾಯ್ತು. 21  ರಾಜ ಕೋರೆಷ ಆಳ್ತಿದ್ದ ಮೊದಲ್ನೇ ವರ್ಷದ ತನಕ ದಾನಿಯೇಲ ಅಲ್ಲೇ ಇದ್ದ.+

ಪಾದಟಿಪ್ಪಣಿ

ಅದು, ಬ್ಯಾಬಿಲೋನಿಯ.
ಬಹುಶಃ, “ಪೋಷಣೆ.”
ಬಹುಶಃ ಇದ್ರರ್ಥ “ದೇವರ ತರ ಯಾರಿದ್ದಾರೆ?”
ಅರ್ಥ “ಯೆಹೋವ ಸಹಾಯ ಮಾಡಿದ್ದಾನೆ.”
ಅರ್ಥ “ಯೆಹೋವ ಕೃಪೆ ತೋರಿಸಿದ್ದಾನೆ.”
ಅರ್ಥ “ದೇವರೇ ನನ್ನ ನ್ಯಾಯಾಧೀಶ.”
ಅಕ್ಷ. “ಹೃದಯ.”
ಅಥವಾ “ಅವ್ರನ್ನ ಪರೀಕ್ಷಿಸಿದ.”
ಅಕ್ಷ. “ಒಳನೋಟ.”