ಮಾರ್ಕ 13:1-37
13 ಯೇಸು ದೇವಾಲಯದಿಂದ ಹೊರಗೆ ಬರ್ತಿದ್ದಾಗ ಶಿಷ್ಯರಲ್ಲಿ ಒಬ್ಬ “ಗುರು, ಅಲ್ಲಿ ನೋಡು! ಆ ಕಲ್ಲುಗಳು, ಕಟ್ಟಡಗಳು ಎಷ್ಟು ಅದ್ಭುತವಾಗಿ ಇವೆ ಅಲ್ವಾ!” ಅಂದ.+
2 ಅದಕ್ಕೆ ಯೇಸು “ನೀನು ನೋಡ್ತಿರೋ ಈ ದೊಡ್ಡ ಕಟ್ಟಡ ಯಾವುದೂ ಉಳಿಯಲ್ಲ. ಒಂದು ಕಲ್ಲಿನ ಮೇಲೆ ಇನ್ನೊಂದು ಕಲ್ಲು ಇರದ ಹಾಗೆ ಎಲ್ಲ ಬೀಳಿಸ್ತಾರೆ” ಅಂದನು.+
3 ಆತನು ಆಲೀವ್ ಗುಡ್ಡದ ಮೇಲೆ ಕೂತಿದ್ದ. ಅಲ್ಲಿಂದ ದೇವಾಲಯ ಕಾಣ್ತಾ ಇತ್ತು. ಆಗ ಪೇತ್ರ, ಯಾಕೋಬ, ಯೋಹಾನ ಮತ್ತು ಅಂದ್ರೆಯ ಮಾತ್ರ ಆತನ ಹತ್ರ ಹೋಗಿ
4 “ಆ ವಿಷ್ಯಗಳೆಲ್ಲ ಯಾವಾಗ ನಡಿಯುತ್ತೆ? ಇವೆಲ್ಲದ್ರ ಅಂತ್ಯ ಹತ್ರ ಇದೆ ಅನ್ನೋದಕ್ಕೆ ಸೂಚನೆ ಏನು? ನಮಗೆ ಹೇಳು” ಅಂತ ಕೇಳಿದ್ರು.+
5 ಆಗ ಯೇಸು ಹೀಗಂದನು “ಯಾರೂ ನಿಮ್ಮನ್ನ ದಾರಿತಪ್ಪಿಸದ ಹಾಗೆ ನೋಡ್ಕೊಳ್ಳಿ.+
6 ತುಂಬ ಜನ ನನ್ನ ಹೆಸ್ರಲ್ಲಿ ಬರ್ತಾರೆ. ‘ನಾನೇ ಕ್ರಿಸ್ತ’ ಅಂತ ಹೇಳಿ ಎಷ್ಟೋ ಜನ್ರನ್ನ ದಾರಿತಪ್ಪಿಸ್ತಾರೆ.
7 ಅಷ್ಟೇ ಅಲ್ಲ ಯುದ್ಧ ನಡಿಯೋದನ್ನ, ಯುದ್ಧ ಆಗ್ತಾ ಇದೆ ಅನ್ನೋ ಸುದ್ದಿಯನ್ನ ನೀವು ಕೇಳ್ತೀರ. ಆಗ ಭಯಪಡಬೇಡಿ. ಯಾಕಂದ್ರೆ ಅವೆಲ್ಲ ಆಗಲೇಬೇಕು. ಆದ್ರೆ ಅದೇ ಅಂತ್ಯ ಅಲ್ಲ.+
8 ಜನ್ರ ಮೇಲೆ ಜನ್ರು ಆಕ್ರಮಣ ಮಾಡ್ತಾರೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಯುದ್ಧ ಮಾಡುತ್ತೆ.+ ಒಂದರ ನಂತ್ರ ಇನ್ನೊಂದು ಸ್ಥಳದಲ್ಲಿ ಭೂಕಂಪ ಆಗುತ್ತೆ. ಆಹಾರದ ಕೊರತೆ ಇರುತ್ತೆ.+ ಇವೆಲ್ಲ ಕಷ್ಟಕಾಲದ* ಆರಂಭ ಅಷ್ಟೇ.+
9 ಆದ್ರೆ ನೀವು ಎಚ್ಚರವಾಗಿರಬೇಕು. ನನ್ನಿಂದಾಗಿ ಜನ ನಿಮ್ಮನ್ನ ನ್ಯಾಯಾಲಯದ+ ಮೆಟ್ಟಿಲು ಹತ್ತಿಸ್ತಾರೆ. ಸಭಾಮಂದಿರಗಳಲ್ಲಿ ಹೊಡಿತಾರೆ.+ ರಾಜ್ಯಪಾಲರ, ರಾಜರ ಹತ್ರ ಎಳ್ಕೊಂಡು ಹೋಗ್ತಾರೆ. ಆಗ ಅವ್ರಿಗೆ ಸಾಕ್ಷಿ ಕೊಡೋ ಅವಕಾಶ ನಿಮಗೆ ಸಿಗುತ್ತೆ.+
10 ಅಷ್ಟೇ ಅಲ್ಲ ಎಲ್ಲ ದೇಶಗಳಲ್ಲಿ ಮೊದಲು ಸಿಹಿಸುದ್ದಿ ಸಾರಬೇಕು.+
11 ಅವರು ನಿಮ್ಮನ್ನ ವಿಚಾರಿಸೋಕೆ ಹಿಡ್ಕೊಂಡು ಹೋಗುವಾಗ ಏನು ಮಾತಾಡಬೇಕು ಅಂತ ತುಂಬ ತಲೆಕೆಡಿಸ್ಕೊಳ್ಳಬೇಡಿ. ಏನು ಹೇಳಬೇಕು ಅಂತ ಆ ಸಮಯ ಬಂದಾಗ ನಿಮಗೇ ಗೊತ್ತಾಗುತ್ತೆ, ಅದನ್ನೇ ಹೇಳಿ. ಯಾಕಂದ್ರೆ ಅಲ್ಲಿ ಮಾತಾಡೋದು ನೀವಲ್ಲ, ಪವಿತ್ರಶಕ್ತಿನೇ.+
12 ಅಷ್ಟೇ ಅಲ್ಲ ಅಣ್ಣ ತಮ್ಮನನ್ನ, ಅಪ್ಪ ಮಗನನ್ನ ಮರಣಕ್ಕೆ ಒಪ್ಪಿಸ್ತಾರೆ. ಮಕ್ಕಳು ಹೆತ್ತವರ ವಿರುದ್ಧ ತಿರುಗಿಬಿದ್ದು ಅವ್ರನ್ನ ಕೊಲ್ಲಿಸ್ತಾರೆ.+
13 ನನ್ನ ಶಿಷ್ಯರಾಗಿರೋ ಕಾರಣ ನಿಮ್ಮನ್ನ ಜನ್ರೆಲ್ಲ ದ್ವೇಷಿಸ್ತಾರೆ.+ ಆದ್ರೆ ಕೊನೆ ತನಕ ತಾಳ್ಕೊಂಡ್ರೆ*+ ರಕ್ಷಣೆ ಸಿಗುತ್ತೆ.+
14 ಆದ್ರೆ ಹಾಳುಮಾಡೋ ಅಸಹ್ಯ ವಸ್ತು+ ನಿಲ್ಲಬಾರದ ಜಾಗದಲ್ಲಿ ನಿಂತಿರೋದನ್ನ ನೀವು ನೋಡುವಾಗ (ಓದುವವರು ಬುದ್ಧಿ ಉಪಯೋಗಿಸಲಿ) ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಬೇಕು.+
15 ಮನೆ ಮೇಲೆ ಇರುವವನು ಕೆಳಗೆ ಇಳಿಬಾರದು, ಏನನ್ನಾದ್ರೂ ತಗೊಳಕ್ಕೆ ಮನೆಯೊಳಗೆ ಹೋಗಬಾರದು.
16 ಹೊಲದಲ್ಲಿ ಇರುವವನು ತನ್ನ ಬಟ್ಟೆ ತಗೊಳ್ಳೋಕೆ ವಾಪಸ್ ಹೋಗಬಾರದು.
17 ಆಗ ಗರ್ಭಿಣಿಯರಿಗೆ, ಮೊಲೆಕೂಸು ಇರೋರಿಗೆ ತುಂಬ ಕಷ್ಟ ಆಗುತ್ತೆ!+
18 ಚಳಿಗಾಲದಲ್ಲಿ ಆ ಸಮಯ ಬರಬಾರದು ಅಂತ ಪ್ರಾರ್ಥನೆ ಮಾಡ್ತಾ ಇರಿ.
19 ಯಾಕಂದ್ರೆ ಆ ಸಮಯದಲ್ಲಿ ಮಹಾ ಸಂಕಟ ಇರುತ್ತೆ.+ ದೇವರು ಜನ್ರನ್ನ ಸೃಷ್ಟಿ ಮಾಡಿದಾಗಿಂದ ಇವತ್ತಿನ ತನಕ ಅಂಥ ಕಷ್ಟ ಬಂದೇ ಇಲ್ಲ. ಇನ್ನು ಮುಂದೆನೂ ಬರಲ್ಲ.+
20 ಯೆಹೋವ* ಆ ದಿನಗಳನ್ನ ಕಡಿಮೆ ಮಾಡದಿದ್ರೆ ಒಬ್ಬನೂ ಉಳಿಯಲ್ಲ. ಆದ್ರೆ ತಾನು ಆರಿಸ್ಕೊಂಡಿರೋ ಜನ್ರಿಗೋಸ್ಕರ ಆ ದಿನಗಳನ್ನ ಕಡಿಮೆ ಮಾಡ್ತಾನೆ.+
21 ಅಷ್ಟೇ ಅಲ್ಲ ಯಾರಾದ್ರೂ ‘ಕ್ರಿಸ್ತ ಇಲ್ಲಿದ್ದಾನೆ,’ ‘ಕ್ರಿಸ್ತ ಅಲ್ಲಿದ್ದಾನೆ’ ಅಂತ ಹೇಳಿದ್ರೆ ನಂಬಬೇಡಿ.+
22 ಯಾಕಂದ್ರೆ ಸುಳ್ಳು ಕ್ರಿಸ್ತರು, ಸುಳ್ಳು ಪ್ರವಾದಿಗಳು ಬಂದು+ ಬೇರೆಬೇರೆ ರೀತಿಯ ದೊಡ್ಡದೊಡ್ಡ ಅದ್ಭುತಗಳನ್ನ ಮಾಡ್ತಾರೆ. ಹೀಗೆ ಮಾಡಿ ದೇವರು ಆರಿಸ್ಕೊಂಡಿರೋ ಜನ್ರನ್ನ ಸಹ ದಾರಿ ತಪ್ಪಿಸೋಕೆ ಪ್ರಯತ್ನಿಸ್ತಾರೆ.
23 ಹಾಗಾಗಿ ಎಚ್ಚರವಾಗಿರಿ.+ ನಾನು ಎಲ್ಲ ವಿಷ್ಯಗಳನ್ನ ನಿಮಗೆ ಮುಂಚೆನೇ ಹೇಳಿದ್ದೀನಿ.
24 ಆದ್ರೆ ಆ ದಿನಗಳಲ್ಲಿ, ಕಷ್ಟ ಮುಗಿದ ಮೇಲೆ ಸೂರ್ಯ ಕತ್ತಲಾಗ್ತಾನೆ. ಚಂದ್ರ ಬೆಳಕು ಕೊಡಲ್ಲ.+
25 ಆಕಾಶದಿಂದ ನಕ್ಷತ್ರಗಳು ಬೀಳ್ತವೆ. ಆಕಾಶದ ಶಕ್ತಿಗಳು ನಡುಗ್ತವೆ.
26 ಆಗ ಮನುಷ್ಯಕುಮಾರ ಶಕ್ತಿ ಮತ್ತು ಮಹಾ ಅಧಿಕಾರದಿಂದ ಮೋಡಗಳ ಮೇಲೆ ಬರೋದನ್ನ+ ಅವರು ನೋಡ್ತಾರೆ.+
27 ಆಮೇಲೆ ಆತನು ತನ್ನ ದೂತರನ್ನ ಕಳಿಸ್ತಾನೆ. ಈ ದೂತರು ಮನುಷ್ಯಕುಮಾರ ಆರಿಸ್ಕೊಂಡಿರುವವರನ್ನ ಭೂಮಿಯ ಒಂದು ಮೂಲೆಯಿಂದ ಆಕಾಶದ ಇನ್ನೊಂದು ಮೂಲೆ ತನಕ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸ್ತಾರೆ.+
28 ಈಗ ಅಂಜೂರ ಮರದಿಂದ ಒಂದು ಪಾಠ ಕಲಿರಿ: ಆ ಮರದ ಕೊಂಬೆ ಚಿಗುರಿ ಎಲೆ ಬಿಡುವಾಗ ಬೇಸಿಗೆ ಶುರುವಾಯ್ತು ಅಂತ ಅರ್ಥ ಮಾಡ್ಕೊಳ್ತೀರಲ್ಲ.+
29 ಅದೇ ತರ ಇದೆಲ್ಲ ನಡಿಯೋದನ್ನ ನೀವು ನೋಡುವಾಗ ಆತನು ಬಾಗಿಲ ಹತ್ರಾನೇ ಇದ್ದಾನೆ ಅಂತ ತಿಳ್ಕೊಳ್ಳಿ.+
30 ಈ ಎಲ್ಲ ವಿಷ್ಯ ನಡಿಯೋ ತನಕ ಈ ಪೀಳಿಗೆ ನಾಶ ಆಗಲ್ಲ ಅಂತ ನಿಮಗೆ ನಿಜ ಹೇಳ್ತೀನಿ.+
31 ಆಕಾಶ ಭೂಮಿ ನಾಶ ಆಗುತ್ತೆ.*+ ಆದ್ರೆ ನನ್ನ ಮಾತುಗಳು ಯಾವತ್ತೂ ನಾಶ ಆಗಲ್ಲ.+
32 ಆದ್ರೆ ಆ ದಿನ ಮತ್ತು ಸಮಯ ಯಾವಾಗ ಬರುತ್ತೆ ಅಂತ ಯಾರಿಗೂ ಗೊತ್ತಿಲ್ಲ. ಸ್ವರ್ಗದಲ್ಲಿರೋ ದೇವದೂತರಿಗೂ ಗೊತ್ತಿಲ್ಲ, ಮಗನಿಗೂ ಗೊತ್ತಿಲ್ಲ. ತಂದೆಗೆ ಮಾತ್ರ ಗೊತ್ತು.+
33 ದೇವರು ಆರಿಸ್ಕೊಂಡಿರೋ ಸಮಯ ಯಾವಾಗ ಅಂತ ಗೊತ್ತಿಲ್ಲದೆ ಇರೋದ್ರಿಂದ+ ಜಾಗ್ರತೆಯಿಂದ ಇರಿ, ಎಚ್ಚರವಾಗಿ ಇರಿ.+
34 ಇದನ್ನ ವಿದೇಶಕ್ಕೆ ಹೋಗೋ ಒಬ್ಬ ವ್ಯಕ್ತಿಗೆ ಹೋಲಿಸಬಹುದು. ಅವನು ಮನೆಯಿಂದ ಹೋಗುವಾಗ ತನ್ನ ಸೇವಕರಿಗೆ ಅಧಿಕಾರ ಕೊಟ್ಟು,+ ಅವರವ್ರ ಕೆಲಸ ಏನಂತ ಹೇಳಿ, ಕಾವಲುಗಾರನಿಗೆ ಎಚ್ಚರವಾಗಿ ಇರು ಅಂತ ಆಜ್ಞೆ ಕೊಟ್ಟು ಹೋದ.+
35 ಮನೆ ಯಜಮಾನ ಸಂಜೆ ಬರ್ತಾನೋ, ಮಧ್ಯರಾತ್ರಿ ಬರ್ತಾನೋ, ನಸುಕಲ್ಲಿ* ಬರ್ತಾನೋ, ಬೆಳಗಾದ ಮೇಲೆ ಬರ್ತಾನೋ ನಿಮಗೆ ಗೊತ್ತಿಲ್ಲ.+ ಅದಕ್ಕೇ ಯಾವಾಗ್ಲೂ ಎಚ್ಚರವಾಗಿರಿ.+
36 ಎಚ್ಚರವಾಗಿಲ್ಲ ಅಂದ್ರೆ ಅವನು ದಿಢೀರಂತ ಬಂದಾಗ ನೀವು ನಿದ್ದೆ ಮಾಡೋದನ್ನ+ ನೋಡ್ತಾನೆ.
37 ಹಾಗಾಗಿ ನಾನು ನಿಮಗೆ ಹೇಳೋದನ್ನೇ ಎಲ್ರಿಗೂ ಹೇಳ್ತಾ ಇದ್ದೀನಿ, ಸದಾ ಎಚ್ಚರವಾಗಿರಿ.”+
ಪಾದಟಿಪ್ಪಣಿ
^ ಅಕ್ಷ. “ಹೆರಿಗೆ ನೋವು.”
^ ಅಥವಾ “ತಾಳಿದವನಿಗೆ.”
^ ಪರಿಶಿಷ್ಟ ಎ5 ನೋಡಿ.
^ ಇಲ್ಲಿ ಕೆಟ್ಟ ಜನ್ರನ್ನ ಮತ್ತು ಅವ್ರ ನಾಯಕನನ್ನ ಸೂಚಿಸಿ ಮಾತಾಡಲಾಗಿದೆ.
^ ಅಕ್ಷ. “ಕೋಳಿ ಕೂಗೋ ಮುಂಚೆ.”