ಯೆರೆಮೀಯ 36:1-32

  • ಯೆರೆಮೀಯ ಹೇಳ್ತಾ ಹೋದ ಹಾಗೆ ಬಾರೂಕ ಸುರುಳಿಯಲ್ಲಿ ಬರೆದದ್ದು (1-7)

  • ಬಾರೂಕ ಸುರುಳಿಯಿಂದ ಗಟ್ಟಿಯಾಗಿ ಓದಿ ಹೇಳಿದ್ದು (8-19)

  • ಯೆಹೋಯಾಕೀಮ ಸುರುಳಿ ಸುಟ್ಟ (20-26)

  • ಹೊಸ ಸುರುಳಿಯಲ್ಲಿ ಮತ್ತೆ ಬರೆದದ್ದು (27-32)

36  ಯೋಷೀಯನ ಮಗ ಯೆಹೂದದ ರಾಜ ಯೆಹೋಯಾಕೀಮನ+ ಆಳ್ವಿಕೆಯ ನಾಲ್ಕನೇ ವರ್ಷದಲ್ಲಿ ಯೆಹೋವ ಯೆರೆಮೀಯನಿಗೆ  “ನೀನು ಒಂದು ಸುರುಳಿ ತಗೊಂಡು ನಾನು ಇಸ್ರಾಯೇಲ್‌, ಯೆಹೂದ+ ಮತ್ತು ಎಲ್ಲ ದೇಶಗಳ ವಿರುದ್ಧ+ ಹೇಳಿದ ಮಾತನ್ನೆಲ್ಲ ಅದ್ರಲ್ಲಿ ಬರಿ. ಯೋಷೀಯ ಆಳ್ತಿದ್ದ ಸಮಯದಲ್ಲಿ ನಾನು ನಿನ್ನ ಜೊತೆ ಮಾತಾಡಿದ ಮೊದಲನೇ ದಿನದಿಂದ ಇವತ್ತಿನ ತನಕ ಹೇಳಿದ ಎಲ್ಲ ಮಾತನ್ನ ಬರಿ.+  ಯೆಹೂದದ ಜನ್ರ ಮೇಲೆ ನಾನು ಯಾವ್ಯಾವ ಕಷ್ಟಗಳನ್ನ ತರ್ತಿನಿ ಅಂತ ಅವರು ಕೇಳಿಸ್ಕೊಂಡ್ರೆ ಕೆಟ್ಟ ದಾರಿ ಬಿಟ್ಟುಬಿಡಬಹುದು. ಆಗ ನಾನು ಅವ್ರ ತಪ್ಪುಗಳನ್ನ, ಪಾಪಗಳನ್ನ ಕ್ಷಮಿಸ್ತೀನಿ”+ ಅಂದನು.  ಆಗ ಯೆರೆಮೀಯ ನೇರೀಯನ ಮಗ ಬಾರೂಕನನ್ನ+ ಕರೆದ. ಯೆಹೋವ ಹೇಳಿದ ಎಲ್ಲ ಮಾತನ್ನ ತಾನು ಹೇಳುವಾಗ ಅದನ್ನೆಲ್ಲ ಬರಿ ಅಂತ ಬಾರೂಕನಿಗೆ ಹೇಳಿದ. ಅದೇ ತರ ಬಾರೂಕ ಅದನ್ನೆಲ್ಲ ಸುರುಳಿಯಲ್ಲಿ ಬರೆದ.+  ಆಮೇಲೆ ಯೆರೆಮೀಯ ಬಾರೂಕನಿಗೆ “ನನಗೆ ಯೆಹೋವನ ಆಲಯದ ಒಳಗೆ ಹೋಗೋಕೆ ಅನುಮತಿ ಇಲ್ಲ.  ಹಾಗಾಗಿ ನೀನೇ ಆಲಯದ ಒಳಗೆ ಹೋಗಬೇಕು. ನಾನು ಹೇಳ್ತಾ ಹೋದ ಹಾಗೆ ನೀನು ಸುರುಳಿಯಲ್ಲಿ ಬರೆದ ಯೆಹೋವನ ಈ ಮಾತನ್ನೆಲ್ಲ ಅಲ್ಲಿ ಗಟ್ಟಿಯಾಗಿ ಓದಬೇಕು. ಉಪವಾಸದ ದಿನ ಯೆಹೋವನ ಆಲಯದಲ್ಲಿ ಎಲ್ಲಾ ಜನ್ರಿಗೆ ಕೇಳಿಸೋ ಹಾಗೆ ಓದು. ಆಗ ಯೆಹೂದದ ಪಟ್ಟಣಗಳಿಂದ ಅಲ್ಲಿಗೆ ಬರೋ ಜನ್ರೆಲ್ಲ ಅದನ್ನ ಕೇಳಿಸ್ಕೊಳ್ತಾರೆ.  ಆಗಲಾದ್ರೂ ಅವ್ರೆಲ್ಲ ಕೆಟ್ಟದಾರಿ ಬಿಟ್ಟು ವಾಪಸ್‌ ಬರಬಹುದು. ದಯೆ ತೋರಿಸು ಅಂತ ಯೆಹೋವನನ್ನ ಬೇಡ್ಕೊಳ್ಳಬಹುದು. ಯಾಕಂದ್ರೆ ಈ ಜನ್ರ ಮೇಲೆ ತುಂಬ ಕೋಪ ಬಂದಿದೆ ಅಂತ ಯೆಹೋವ ಹೇಳಿದ್ದಾನೆ” ಅಂತ ಹೇಳಿದ.  ಹಾಗಾಗಿ ಪ್ರವಾದಿ ಯೆರೆಮೀಯ ಹೇಳಿದ್ದನ್ನೆಲ್ಲ ನೇರೀಯನ ಮಗ ಬಾರೂಕ ಮಾಡಿದ. ಯೆಹೋವನ ಆಲಯಕ್ಕೆ ಹೋಗಿ ಸುರುಳಿಯಲ್ಲಿದ್ದ* ಯೆಹೋವನ ಮಾತನ್ನ ಗಟ್ಟಿಯಾಗಿ ಓದಿದ.+  ಯೋಷೀಯನ ಮಗ ಯೆಹೂದದ ರಾಜ ಯೆಹೋಯಾಕೀಮನ+ ಆಳ್ವಿಕೆಯ ಐದನೇ ವರ್ಷದ ಒಂಬತ್ತನೇ ತಿಂಗಳಲ್ಲಿ ಎಲ್ರೂ ಯೆಹೋವನ ಮುಂದೆ ಉಪವಾಸ ಮಾಡಬೇಕು ಅನ್ನೋ ಪ್ರಕಟಣೆ ಬಂತು. ಯೆರೂಸಲೇಮಲ್ಲಿರೋ ಜನ್ರೆಲ್ಲ, ಯೆಹೂದದ ಪಟ್ಟಣಗಳಿಂದ ಯೆರೂಸಲೇಮಿಗೆ ಬಂದ ಜನ್ರೆಲ್ಲ ಉಪವಾಸ ಮಾಡಬೇಕಿತ್ತು.+ 10  ಆ ಸಮಯದಲ್ಲಿ ಬಾರೂಕ ಸುರುಳಿಯಲ್ಲಿದ್ದ* ಯೆರೆಮೀಯನ ಮಾತನ್ನ ಯೆಹೋವನ ಆಲಯದಲ್ಲಿ ಗಟ್ಟಿಯಾಗಿ ಓದಿದ. ನಕಲುಗಾರನಾದ* ಶಾಫಾನನ+ ಮಗ ಗೆಮರ್ಯನ+ ಕೋಣೆಯಲ್ಲಿ* ಬಾರೂಕ ಅದನ್ನ ಎಲ್ಲ ಜನ್ರಿಗೆ ಕೇಳಿಸೋ ಹಾಗೆ ಓದಿದ. ಆ ಕೋಣೆ ಯೆಹೋವನ ಆಲಯದ ಹೊಸ ಬಾಗಿಲ ಹತ್ರ,+ ಎತ್ರದ ಅಂಗಳದಲ್ಲಿ ಇತ್ತು. 11  ಶಾಫಾನನ ಮೊಮ್ಮಗ ಗೆಮರ್ಯನ ಮಗ ಮೀಕಾಯೆಹು ಸುರುಳಿಯಲ್ಲಿದ್ದ* ಯೆಹೋವನ ಎಲ್ಲ ಮಾತನ್ನ ಕೇಳಿಸ್ಕೊಂಡಾಗ 12  ರಾಜನ ಅರಮನೆಯಲ್ಲಿದ್ದ ಕಾರ್ಯದರ್ಶಿಯ ಕೋಣೆಗೆ ಬಂದ. ಕಾರ್ಯದರ್ಶಿ ಎಲೀಷಾಮ,+ ಶೆಮಾಯನ ಮಗ ದೆಲಾಯ, ಅಕ್ಬೋರನ+ ಮಗ ಎಲ್ನಾಥಾನ,+ ಶಾಫಾನನ ಮಗ ಗೆಮರ್ಯ, ಹನನ್ಯನ ಮಗ ಚಿದ್ಕೀಯ, ಬೇರೆಲ್ಲ ಅಧಿಕಾರಿಗಳು* ಆ ಕೋಣೆಯಲ್ಲಿ ಕೂತಿದ್ರು. 13  ಜನ್ರಿಗೆ ಬಾರೂಕ ಸುರುಳಿಯಿಂದ* ಓದಿ ಹೇಳಿದಾಗ ತಾನು ಕೇಳಿಸ್ಕೊಂಡ ಎಲ್ಲ ಮಾತನ್ನ ಮೀಕಾಯೆಹು ಆ ಅಧಿಕಾರಿಗಳಿಗೆ ತಿಳಿಸಿದ. 14  ಆಗ ಎಲ್ಲ ಅಧಿಕಾರಿಗಳು ಬಾರೂಕನ ಹತ್ರ ಯೆಹೂದಿಯನ್ನ ಕಳಿಸಿದ್ರು. ಇವನು ನೆತನ್ಯನ ಮಗ ಶೆಲೆಮ್ಯನ ಮೊಮ್ಮಗ ಕೂಷಿಯ ಮರಿಮಗ. ಇವನ ಮೂಲಕ ಬಾರೂಕನಿಗೆ “ನೀನು ಜನ್ರ ಮುಂದೆ ಓದಿದ ಸುರುಳಿ ತಗೊಂಡು ಇಲ್ಲಿ ಬಾ” ಅಂತ ಹೇಳಿ ಕಳಿಸಿದ್ರು. ಆಗ ನೇರೀಯನ ಮಗ ಬಾರೂಕ ಸುರುಳಿ ತಗೊಂಡು ಆ ಅಧಿಕಾರಿಗಳ ಹತ್ರ ಹೋದ. 15  ಅವರು ಅವನಿಗೆ “ದಯವಿಟ್ಟು ಇಲ್ಲಿ ಕೂತ್ಕೊಂಡು ಅದ್ರಲ್ಲಿ ಇರೋದನ್ನ ನಮ್ಮ ಮುಂದೆ ಗಟ್ಟಿಯಾಗಿ ಓದು” ಅಂದ್ರು. ಬಾರೂಕ ಓದಿದ. 16  ಅವರು ಆ ಎಲ್ಲ ಮಾತನ್ನ ಕೇಳಿಸ್ಕೊಂಡ ತಕ್ಷಣ ತುಂಬ ಭಯದಿಂದ ಮುಖಮುಖ ನೋಡ್ಕೊಂಡ್ರು. “ನಾವು ಈ ಎಲ್ಲ ಮಾತನ್ನ ರಾಜನಿಗೆ ಹೇಳಲೇಬೇಕು” ಅಂತ ಬಾರೂಕನಿಗೆ ಅಂದ್ರು. 17  “ಇದನ್ನೆಲ್ಲ ಹೇಗೆ ಬರೆದೆ? ದಯವಿಟ್ಟು ಹೇಳು. ಇದನ್ನೆಲ್ಲ ಬರಿಯೋಕೆ ಯೆರೆಮೀಯನೇ ಹೇಳಿದ್ನಾ?” ಅಂತ ಕೇಳಿದ್ರು. 18  ಅದಕ್ಕೆ ಬಾರೂಕ “ಹೌದು, ಇದನ್ನೆಲ್ಲ ಬರಿ ಅಂತ ಹೇಳ್ತಾ ಹೋದ, ನಾನು ಆ ಎಲ್ಲ ಮಾತನ್ನ ಶಾಯಿಯಿಂದ* ಈ ಸುರುಳಿಯಲ್ಲಿ* ಬರೆದೆ” ಅಂದ. 19  ಆಗ ಆ ಅಧಿಕಾರಿಗಳು ಬಾರೂಕನಿಗೆ “ನೀನು, ಯೆರೆಮೀಯ ಎಲ್ಲಾದ್ರೂ ಹೋಗಿ ಬಚ್ಚಿಟ್ಕೊಳ್ಳಿ, ನೀವು ಎಲ್ಲಿದ್ದೀರಂತ ಯಾರಿಗೂ ಗೊತ್ತಾಗಬಾರದು”+ ಅಂದ್ರು. 20  ಆಮೇಲೆ ಅವರು ಆ ಸುರುಳಿಯನ್ನ ಕಾರ್ಯದರ್ಶಿ ಎಲೀಷಾಮನ ಕೋಣೆಯಲ್ಲಿಟ್ಟು ಅಂಗಳದಲ್ಲಿದ್ದ ರಾಜನ ಹತ್ರ ಹೋದ್ರು. ತಾವು ಕೇಳಿಸ್ಕೊಂಡ ವಿಷ್ಯನ್ನೆಲ್ಲ ಅವನಿಗೆ ಹೇಳಿದ್ರು. 21  ಆಗ ರಾಜ ಆ ಸುರುಳಿ ತರೋಕೆ ಯೆಹೂದಿಯನ್ನ+ ಕಳಿಸಿದ. ಅವನು ಕಾರ್ಯದರ್ಶಿ ಎಲೀಷಾಮನ ಕೋಣೆಯಿಂದ ತಗೊಂಡು ಬಂದ. ರಾಜನ ಮುಂದೆ, ಅವನ ಹತ್ರ ನಿಂತಿದ್ದ ಎಲ್ಲ ಅಧಿಕಾರಿಗಳ ಮುಂದೆ ಅದನ್ನ ಯೆಹೂದಿ ಓದೋಕೆ ಶುರುಮಾಡಿದ. 22  ರಾಜ ಚಳಿಗಾಲದ ಮನೆಯಲ್ಲಿ ಬೆಂಕಿ ಉರಿತಿದ್ದ ಅಗ್ಗಿಷ್ಟಿಕೆ ಮುಂದೆ ಕೂತಿದ್ದ. ಅದು ಒಂಬತ್ತನೇ ತಿಂಗಳು.* 23  ಯೆಹೂದಿ ಆ ಸುರುಳಿಯಲ್ಲಿದ್ದ ಮೂರು-ನಾಲ್ಕು ಭಾಗಗಳನ್ನ ಓದಿದ ಮೇಲೆ ರಾಜ ಕಾರ್ಯದರ್ಶಿಯ ಚಾಕು ತಗೊಂಡು ಆ ಭಾಗಗಳನ್ನ ಕತ್ತರಿಸ್ತಾ ಅಗ್ಗಿಷ್ಟಿಕೆಯಲ್ಲಿ ಉರಿತಿದ್ದ ಬೆಂಕಿಗೆ ಎಸಿತಿದ್ದ. ಹೀಗೆ ಆ ಇಡೀ ಸುರುಳಿಯನ್ನ ಅಗ್ಗಿಷ್ಟಿಕೆಯ ಬೆಂಕಿಯಲ್ಲಿ ಸುಟ್ಟುಬಿಟ್ಟ. 24  ಸುರುಳಿಯಲ್ಲಿದ್ದ ಮಾತನ್ನೆಲ್ಲ ಕೇಳಿಸ್ಕೊಂಡ ಮೇಲೆ ರಾಜನಾಗಲಿ ಅವನ ಯಾವ ಸೇವಕರಾಗಲಿ ಸ್ವಲ್ಪನೂ ಭಯಪಡಲಿಲ್ಲ, ದುಃಖದಿಂದ ಬಟ್ಟೆ ಹರ್ಕೊಳ್ಳಲೂ ಇಲ್ಲ. 25  ಸುರುಳಿಯನ್ನ ಸುಡಬಾರದು ಅಂತ ಎಲ್ನಾಥಾನ,+ ದೆಲಾಯ,+ ಗೆಮರ್ಯ+ ರಾಜನ ಹತ್ರ ಎಷ್ಟೋ ಬೇಡ್ಕೊಂಡ್ರು. ಆದ್ರೂ ಅವ್ರ ಮಾತನ್ನ ಕೇಳಲೇ ಇಲ್ಲ. 26  ಅಷ್ಟೇ ಅಲ್ಲ ರಾಜ ತನ್ನ ಮಗ* ಯೆರಹ್ಮೇಲನಿಗೆ, ಅಜ್ರೀಯೇಲನ ಮಗ ಸೆರಾಯನಿಗೆ, ಅಬ್ದೆಯೇಲನ ಮಗ ಶೆಲೆಮ್ಯನಿಗೆ ಕಾರ್ಯದರ್ಶಿಯಾದ ಬಾರೂಕನನ್ನ ಪ್ರವಾದಿ ಯೆರೆಮೀಯನನ್ನ ಹಿಡಿಯೋಕೆ ಆಜ್ಞೆ ಕೊಟ್ಟ. ಆದ್ರೆ ಯೆಹೋವ ಅವರಿಬ್ರನ್ನ ಬಚ್ಚಿಟ್ಟ.+ 27  ಯೆರೆಮೀಯ ಬಾರೂಕನಿಗೆ ಹೇಳಿ ಬರೆಸಿದ ಸುರುಳಿಯನ್ನ+ ರಾಜ ಸುಟ್ಟು ಹಾಕಿದ ಮೇಲೆ ಯೆಹೋವ ಯೆರೆಮೀಯನಿಗೆ ಹೀಗೆ ಹೇಳಿದನು 28  “ನೀನು ಇನ್ನೊಂದು ಸುರುಳಿ ತಗೊ. ಯೆಹೂದದ ರಾಜ ಯೆಹೋಯಾಕೀಮ ಸುಟ್ಟುಹಾಕಿದ+ ಆ ಮೊದಲನೇ ಸುರುಳಿಯಲ್ಲಿದ್ದ ಮಾತನ್ನೆಲ್ಲ ಅದ್ರಲ್ಲಿ ಬರಿ. 29  ನೀನು ಯೆಹೂದದ ರಾಜ ಯೆಹೋಯಾಕೀಮನಿಗೆ ಹೀಗೆ ಹೇಳಬೇಕು ‘ಯೆಹೋವ ಹೇಳೋದು ಏನಂದ್ರೆ “ನೀನು ಆ ಸುರುಳಿಯನ್ನ ಸುಟ್ಟುಹಾಕಿದ್ಯಲ್ಲಾ. ‘“ಬಾಬೆಲಿನ ರಾಜ ಬಂದೇ ಬರ್ತಾನೆ. ಈ ದೇಶವನ್ನ ನಾಶಮಾಡಿ ಇಲ್ಲಿ ಒಬ್ಬ ಮನುಷ್ಯ ಕೂಡ, ಒಂದು ಪ್ರಾಣಿ ಸಹ ಇಲ್ಲದಿರೋ ಹಾಗೆ ಮಾಡ್ತಾನೆ”+ ಅಂತ ಯಾಕೆ ಬರೆದೆ?’ ಅಂತ ಕೇಳಿದ್ಯಲ್ಲಾ. 30  ಹಾಗಾಗಿ ಯೆಹೂದದ ರಾಜ ಯೆಹೋಯಾಕೀಮನ ವಿರುದ್ಧ ಯೆಹೋವ ಹೀಗೆ ಹೇಳ್ತಾನೆ ‘ದಾವೀದನ ಸಿಂಹಾಸನದಲ್ಲಿ+ ಕೂತ್ಕೊಳ್ಳೋಕೆ ಅವನ ವಂಶದವರಲ್ಲಿ ಯಾರೂ ಇರಲ್ಲ. ಅವನ ಶವ ಹಗಲಿನ ಸುಡುಬಿಸಿಲಲ್ಲೂ ರಾತ್ರಿಯ ಹಿಮದಲ್ಲೂ ಬಿದ್ದಿರುತ್ತೆ.+ 31  ಅವನು, ಅವನ ವಂಶದವರು, ಅವನ ಸೇವಕರು ಮಾಡಿದ ತಪ್ಪಿಗೆ ನಾನು ಅವ್ರೆಲ್ಲರಿಂದ ಲೆಕ್ಕಕೇಳ್ತೀನಿ. ನಾನು ಅವ್ರ ಮೇಲೆ, ಯೆರೂಸಲೇಮಿನ ಜನ್ರ ಮೇಲೆ, ಯೆಹೂದದ ಜನ್ರ ಮೇಲೆ ತರ್ತಿನಿ ಅಂತ ಹೇಳಿದ ಎಲ್ಲ ಕಷ್ಟವನ್ನ ಖಂಡಿತ ತರ್ತಿನಿ.+ ಯಾಕಂದ್ರೆ ಅವರು ನನ್ನ ಮಾತು ಕೇಳಲಿಲ್ಲ.’”’”+ 32  ಯೆರೆಮೀಯ ಇನ್ನೊಂದು ಸುರುಳಿ ತಗೊಂಡು ನೇರೀಯನ ಮಗನೂ ಕಾರ್ಯದರ್ಶಿಯೂ ಆದ ಬಾರೂಕನಿಗೆ+ ಕೊಟ್ಟ. ಯೆಹೂದದ ರಾಜ ಯೆಹೋಯಾಕೀಮ ಸುಟ್ಟು ಹಾಕಿದ ಸುರುಳಿಯಲ್ಲಿದ್ದ* ಎಲ್ಲ ಮಾತನ್ನ,+ ಅಂಥ ಇನ್ನೂ ತುಂಬ ಮಾತನ್ನ ಯೆರೆಮೀಯ ಹೇಳ್ತಾ ಹೋದ ಹಾಗೆ ಬಾರೂಕ ಆ ಸುರುಳಿಯಲ್ಲಿ ಬರೆದ.

ಪಾದಟಿಪ್ಪಣಿ

ಅಥವಾ “ಪುಸ್ತಕದಲ್ಲಿದ್ದ.”
ಅಥವಾ “ಪುಸ್ತಕದಲ್ಲಿದ್ದ.”
ಅಥವಾ “ಬರಹಗಾರನಾದ.”
ಅಥವಾ “ಊಟದ ಕೋಣೆಯಲ್ಲಿ.”
ಅಥವಾ “ಪುಸ್ತಕದಲ್ಲಿದ್ದ.”
ಅಥವಾ “ಆಸ್ಥಾನದ ಅಧಿಕಾರಿಗಳು.”
ಅಥವಾ “ಪುಸ್ತಕದಿಂದ.”
ಅಥವಾ “ಮಸಿ; ಇಂಕು.”
ಅಥವಾ “ಪುಸ್ತಕದಲ್ಲಿ.”
ನವೆಂಬರ್‌ ತಿಂಗಳ ಮಧ್ಯದಿಂದ ಡಿಸೆಂಬರ್‌ ತಿಂಗಳ ಮಧ್ಯದ ತನಕ. ಪರಿಶಿಷ್ಟ ಬಿ15 ನೋಡಿ.
ರಾಜಮನೆತನಕ್ಕೆ ಸೇರಿದವನಾಗಿರಬಹುದು.
ಅಥವಾ “ಪುಸ್ತಕದಲ್ಲಿದ್ದ.”