ಯೆರೆಮೀಯ 40:1-16

  • ನೆಬೂಜರದಾನ ಯೆರೆಮೀಯನನ್ನ ಬಿಡುಗಡೆ ಮಾಡಿದ (1-6)

  • ಗೆದಲ್ಯ ದೇಶದ ಅಧಿಕಾರಿಯಾದ (7-12)

  • ಗೆದಲ್ಯನ ವಿರುದ್ಧ ಸಂಚು (13-16)

40  ಕಾವಲುಗಾರರ ಮುಖ್ಯಸ್ಥನಾದ ನೆಬೂಜರದಾನ+ ರಾಮದಲ್ಲಿ+ ಯೆರೆಮೀಯನನ್ನ ಬಿಡುಗಡೆ ಮಾಡಿದ ಮೇಲೆ ಯೆಹೋವ ಯೆರೆಮೀಯನಿಗೆ ಒಂದು ಸಂದೇಶ ಕೊಟ್ಟನು. ನೆಬೂಜರದಾನ ಯೆರೆಮೀಯನ ಕೈಗಳಿಗೆ ಬೇಡಿ ಹಾಕಿ ರಾಮಕ್ಕೆ ಕರ್ಕೊಂಡು ಹೋಗಿದ್ದ. ಹಾಗಾಗಿ ಯೆರೆಮೀಯ ಬಾಬೆಲಿಗೆ ಕೈದಿಗಳಾಗಿ ಹೋಗ್ತಿದ್ದ ಯೆರೂಸಲೇಮಿನ, ಯೆಹೂದದ ಜನ್ರ ಜೊತೆ ಇದ್ದ.  ಕಾವಲುಗಾರರ ಆ ಮುಖ್ಯಸ್ಥ ಯೆರೆಮೀಯನನ್ನ ಕರೆದು ಅವನಿಗೆ “ನಿನ್ನ ದೇವರಾದ ಯೆಹೋವ ಈ ಸ್ಥಳಕ್ಕೆ ಇಂಥ ಕಷ್ಟ ಆಗುತ್ತೆ ಅಂತ ಮೊದಲೇ ಹೇಳಿದ್ದನು.  ಯೆಹೋವ ಹೇಳಿದ ಹಾಗೆನೇ ಕಷ್ಟ ತಂದಿದ್ದಾನೆ, ಯಾಕಂದ್ರೆ ನೀವು ಯೆಹೋವನ ವಿರುದ್ಧ ಪಾಪ ಮಾಡಿದ್ರಿ, ಆತನ ಮಾತು ಕೇಳಲಿಲ್ಲ. ಅದಕ್ಕೇ ಹೀಗೆಲ್ಲ ಆಗಿದೆ.+  ನಿನ್ನ ಕೈಗಳಿಗೆ ಹಾಕಿರೋ ಬೇಡಿಗಳನ್ನ ನಾನು ಇವತ್ತು ತೆಗೆದು ಬಿಡುಗಡೆ ಮಾಡ್ತೀನಿ. ನಿನಗೆ ನನ್ನ ಜೊತೆ ಬಾಬೆಲಿಗೆ ಬರೋಕೆ ಇಷ್ಟ ಇದ್ರೆ ಬಾ, ನಾನು ನಿನ್ನನ್ನ ನೋಡ್ಕೊಳ್ತೀನಿ. ಅಲ್ಲಿಗೆ ಬರೋಕೆ ಇಷ್ಟ ಇಲ್ಲದಿದ್ರೆ ಬರೋದು ಬೇಡ. ನೋಡು, ಇಡೀ ದೇಶದಲ್ಲಿ ನೀನು ಎಲ್ಲಿಗೆ ಬೇಕಾದ್ರೂ ಹೋಗಿ ಇರಬಹುದು”+ ಅಂದ.  ಯೆರೆಮೀಯ ನೆಬೂಜರದಾನನ ಹತ್ರದಿಂದ ಹೋಗ್ದೆ ಇನ್ನೂ ಅಲ್ಲೇ ನಿಂತಾಗ ನೆಬೂಜರದಾನ ಅವನಿಗೆ “ಅಹೀಕಾಮನ+ ಮಗ ಶಾಫಾನನ+ ಮೊಮ್ಮಗ ಆದ ಗೆದಲ್ಯನ+ ಹತ್ರ ನೀನು ಹೋಗು. ಅವನ ಜೊತೆ ಜನ್ರ ಮಧ್ಯ ವಾಸ ಮಾಡು. ಅವನನ್ನ ಬಾಬೆಲಿನ ರಾಜ ಯೆಹೂದದ ಪಟ್ಟಣಗಳ ಮೇಲೆ ಅಧಿಕಾರಿಯಾಗಿ ಇಟ್ಟಿದ್ದಾನೆ. ಅವನ ಹತ್ರ ಹೋಗೋಕೆ ಇಷ್ಟ ಇಲ್ಲದಿದ್ರೆ ನಿನಗೆ ಎಲ್ಲಿ ಇಷ್ಟನೋ ಅಲ್ಲಿಗೆ ಹೋಗು” ಅಂದ. ಆಮೇಲೆ ಕಾವಲುಗಾರರ ಮುಖ್ಯಸ್ಥ ಯೆರೆಮೀಯನಿಗೆ ಸ್ವಲ್ಪ ಆಹಾರವನ್ನ, ಒಂದು ಉಡುಗೊರೆಯನ್ನ ಕೊಟ್ಟು ಕಳಿಸಿದ.  ಹಾಗಾಗಿ ಯೆರೆಮೀಯ ಮಿಚ್ಪಾದಲ್ಲಿದ್ದ+ ಅಹೀಕಾಮನ ಮಗನಾದ ಗೆದಲ್ಯನ ಹತ್ರ ಹೋಗಿ ಅವನ ಜೊತೆ ಇದ್ದ. ಹೀಗೆ ಅವನು ದೇಶದಲ್ಲಿ ಉಳಿದಿದ್ದ ಜನ್ರ ಮಧ್ಯ ವಾಸ ಮಾಡಿದ.  ಸ್ವಲ್ಪ ಸಮಯ ಆದ್ಮೇಲೆ ದೇಶದ ಎಲ್ಲಾ ಕಡೆ ಇದ್ದ ಸೇನಾಪತಿಗಳಿಗೆ ಅವ್ರ ಜೊತೆ ಇದ್ದ ಗಂಡಸರಿಗೆ ಒಂದು ಸುದ್ದಿ ಮುಟ್ಟಿತು. ಅದೇನಂದ್ರೆ ಬಾಬೆಲಿನ ರಾಜ ಅಹೀಕಾಮನ ಮಗನಾದ ಗೆದಲ್ಯನನ್ನ ದೇಶದ ಮೇಲೆ ಅಧಿಕಾರಿಯಾಗಿ ಮಾಡಿದ್ದಾನೆ, ಬಾಬೆಲಿಗೆ ಸೆರೆ ಹಿಡ್ಕೊಂಡು ಹೋಗದೆ ದೇಶದಲ್ಲೇ ಬಿಟ್ಟು ಹೋಗಿದ್ದ ಬಡ ಜನ್ರ ಮೇಲೆ ಮಕ್ಕಳ ಮೇಲೆ ಅಧಿಕಾರಿಯಾಗಿ ಇಟ್ಟಿದ್ದಾನೆ.+  ಹಾಗಾಗಿ ಅವ್ರೆಲ್ಲ ಮಿಚ್ಪಾದಲ್ಲಿದ್ದ+ ಗೆದಲ್ಯನ ಹತ್ರ ಬಂದ್ರು. ಅವರು ಯಾರಂದ್ರೆ ನೆತನ್ಯನ ಮಗ ಇಷ್ಮಾಯೇಲ,+ ಕಾರೇಹನ ಗಂಡು ಮಕ್ಕಳಾದ ಯೋಹಾನಾನ್‌,+ ಯೋನಾತಾನ, ತನ್ಹುಮೆತನ ಮಗ ಸೆರಾಯ, ನೆಟೋಫದವನಾದ ಏಫಯನ ಗಂಡುಮಕ್ಕಳು, ಮಾಕಾತ್ಯನಾದ ವ್ಯಕ್ತಿಯೊಬ್ಬನ ಮಗ ಯೆಜನ್ಯ,+ ಅವ್ರ ಜೊತೆ ಇದ್ದ ಬೇರೆ ಗಂಡಸರು.  ಅಹೀಕಾಮನ ಮಗ ಶಾಫಾನನ ಮೊಮ್ಮಗ ಗೆದಲ್ಯ ಅವ್ರಿಗೆ, ಅವ್ರ ಜೊತೆ ಇದ್ದ ಗಂಡಸರಿಗೆ ಆಣೆ ಮಾಡಿ “ಕಸ್ದೀಯರ ಸೇವಕರಾಗೋಕೆ ಹೆದರಬೇಡಿ. ನೀವು ಇದೇ ದೇಶದಲ್ಲಿದ್ದು ಬಾಬೆಲಿನ ರಾಜನ ಸೇವೆಮಾಡಿ. ಆಗ ನಿಮಗೆ ಒಳ್ಳೇದಾಗುತ್ತೆ.+ 10  ನಾನು ಮಿಚ್ಪಾದಲ್ಲೇ ಇರ್ತಿನಿ, ನಿಮ್ಮ ಪ್ರತಿನಿಧಿಯಾಗಿದ್ದು ಇಲ್ಲಿಗೆ ಬರೋ ಕಸ್ದೀಯರ ಹತ್ರ ಮಾತಾಡ್ತೀನಿ. ಆದ್ರೆ ನೀವು ದ್ರಾಕ್ಷಾಮದ್ಯನ, ಬೇಸಿಗೆ ಕಾಲದ ಹಣ್ಣುಗಳನ್ನ ಪಾತ್ರೆಗಳಲ್ಲಿ ಇಡಬೇಕು, ಎಣ್ಣೆ ತೆಗೆದು ಪಾತ್ರೆಗಳಲ್ಲಿ ತುಂಬಿಸಬೇಕು. ನಿಮ್ಮ ಕೈಕೆಳಗಿರೋ ಪಟ್ಟಣಗಳಲ್ಲಿ ವಾಸ ಮಾಡಬೇಕು” ಅಂದ.+ 11  ಬಾಬೆಲಿನ ರಾಜ ಯೆಹೂದದಲ್ಲಿ ಕೆಲವು ಜನ್ರನ್ನ ಬಿಟ್ಟು ಹೋಗಿದ್ದಾನೆ, ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನ ಅವ್ರ ಮೇಲೆ ಅಧಿಕಾರಿಯಾಗಿ ಇಟ್ಟಿದ್ದಾನೆ ಅನ್ನೋ ಸುದ್ದಿ ಮೋವಾಬ್‌, ಅಮ್ಮೋನ್‌, ಎದೋಮ್‌, ಬೇರೆ ಎಲ್ಲ ದೇಶಗಳಲ್ಲಿದ್ದ ಎಲ್ಲ ಯೆಹೂದ್ಯರಿಗೆ ಮುಟ್ಟಿತು. 12  ಹಾಗಾಗಿ ಬೇರೆಬೇರೆ ಸ್ಥಳಗಳಲ್ಲಿ ಚದರಿಹೋಗಿದ್ದ ಯೆಹೂದ್ಯರು ಅಲ್ಲಿಂದ ವಾಪಸ್‌ ಯೆಹೂದ ದೇಶಕ್ಕೆ ಬರೋಕೆ ಶುರುಮಾಡಿದ್ರು. ಅವರು ಮಿಚ್ಪಾದಲ್ಲಿದ್ದ ಗೆದಲ್ಯನ ಹತ್ರ ಹೋದ್ರು. ಅವರು ದ್ರಾಕ್ಷಾಮದ್ಯ, ಬೇಸಿಗೆ ಕಾಲದ ಹಣ್ಣುಗಳನ್ನ ತುಂಬಾ ಕೂಡಿಸಿದ್ರು. 13  ಕಾರೇಹನ ಮಗ ಯೋಹಾನಾನ್‌, ದೇಶದ ಎಲ್ಲಾ ಕಡೆ ಇದ್ದ ಸೇನಾಪತಿಗಳೆಲ್ಲ ಮಿಚ್ಪಾದಲ್ಲಿದ್ದ ಗೆದಲ್ಯನ ಹತ್ರ ಬಂದ್ರು. 14  ಅವರು ಅವನಿಗೆ “ಅಮ್ಮೋನಿಯರ+ ರಾಜ ಬಾಲೀಸ ನಿನ್ನನ್ನ ಕೊಲ್ಲೋಕೆ ನೆತನ್ಯನ ಮಗನಾದ ಇಷ್ಮಾಯೇಲನನ್ನ ಕಳಿಸಿದ್ದಾನೆ ಅಂತ ನಿನಗೆ ಗೊತ್ತಿದ್ಯಾ?”+ ಅಂತ ಕೇಳಿದ್ರು. ಆದ್ರೆ ಅಹೀಕಾಮನ ಮಗ ಗೆದಲ್ಯ ಅವ್ರನ್ನ ನಂಬಲಿಲ್ಲ. 15  ಆಗ ಕಾರೇಹನ ಮಗ ಯೋಹಾನಾನ ಮಿಚ್ಪಾದಲ್ಲಿದ್ದ ಗೆದಲ್ಯನಿಗೆ ಗುಟ್ಟಾಗಿ “ನಾನು ಹೋಗಿ ಯಾರಿಗೂ ಗೊತ್ತಾಗದ ಹಾಗೆ ನೆತನ್ಯನ ಮಗ ಇಷ್ಮಾಯೇಲನನ್ನ ಕೊಂದು ಹಾಕ್ತೀನಿ. ಇಲ್ಲದಿದ್ರೆ ಅವನು ನಿನ್ನನ್ನ ಕೊಂದು ಹಾಕ್ತಾನೆ. ನಿನ್ನ ಹತ್ರ ಬಂದಿರೋ ಯೆಹೂದದ ಜನ್ರೆಲ್ಲ ಚದರಿ ಹೋಗ್ತಾರೆ. ಅಷ್ಟೇ ಅಲ್ಲ ಯೆಹೂದದಲ್ಲಿ ಉಳಿದಿರೋ ಅಲ್ಪಸ್ವಲ್ಪ ಜನನೂ ನಾಶ ಆಗ್ತಾರೆ” ಅಂದ. 16  ಆದ್ರೆ ಅಹೀಕಾಮನ ಮಗ ಗೆದಲ್ಯ+ ಕಾರೇಹನ ಮಗ ಯೋಹಾನಾನನಿಗೆ “ನೀನು ಹಾಗೆ ಮಾಡಬೇಡ. ಇಷ್ಮಾಯೇಲನ ಬಗ್ಗೆ ನೀನು ಹೇಳ್ತಿರೋದೆಲ್ಲ ಸುಳ್ಳು” ಅಂದ.

ಪಾದಟಿಪ್ಪಣಿ