ಯೆಹೆಜ್ಕೇಲ 17:1-24

  • ಎರಡು ಹದ್ದು ಮತ್ತು ದ್ರಾಕ್ಷಿಬಳ್ಳಿಯ ಒಗಟು (1-21)

  • ಎಳೇ ಚಿಗುರಿಂದ ದೊಡ್ಡ ದೇವದಾರು ಮರ (22-24)

17  ಯೆಹೋವ ಮತ್ತೆ ನನಗೆ ಹೀಗಂದನು:  “ಮನುಷ್ಯಕುಮಾರನೇ, ಇಸ್ರಾಯೇಲ್ಯರ ವಿಷ್ಯದಲ್ಲಿ ಒಂದು ಒಗಟನ್ನ, ಒಂದು ಗಾದೆಮಾತನ್ನ ಹೇಳು.+  ನೀನು ಹೀಗೆ ಹೇಳಬೇಕು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ಒಂದು ದೊಡ್ಡ ಹದ್ದು+ ಲೆಬನೋನಿಗೆ+ ಹಾರಿ ಬಂತು. ದೊಡ್ಡ ರೆಕ್ಕೆಗಳು, ಉದ್ದುದ್ದ ಗರಿಗಳು ಇದ್ದ ಮತ್ತು ಎಷ್ಟೋ ಬಣ್ಣದ ಪುಕ್ಕಗಳಿಂದ ತುಂಬಿದ್ದ ಆ ಹದ್ದು ದೇವದಾರು ಮರದ ತುದಿಯನ್ನ ಹಿಡ್ಕೊಳ್ತು.+  ಅದು ತುದಿಯ ಚಿಗುರನ್ನ ಕಿತ್ಕೊಂಡು ವ್ಯಾಪಾರಿಗಳ ದೇಶಕ್ಕೆ* ತಗೊಂಡು ಹೋಯ್ತು. ಅದನ್ನ ವ್ಯಾಪಾರಿಗಳ ಒಂದು ಪಟ್ಟಣದಲ್ಲಿ ಇಡ್ತು.+  ಆಮೇಲೆ ಅದು ದೇಶದ ಸ್ವಲ್ಪ ಬೀಜ ತಗೊಂಡು+ ಚೆನ್ನಾಗಿ ಬೆಳೆ ಕೊಡೋ ಹೊಲದಲ್ಲಿ ಬಿತ್ತಿತು. ನೀರುಹಬ್ಬೆ ಗಿಡದ ಹಾಗೆ ಅದು ಬೆಳಿಬೇಕು ಅಂತ ಅದನ್ನ ತುಂಬ ನೀರಿರೋ ಜಾಗದ ಪಕ್ಕದಲ್ಲಿ ಬಿತ್ತಿತು.  ಆ ಬೀಜ ಮೊಳಕೆ ಒಡೆದು ದ್ರಾಕ್ಷಿಬಳ್ಳಿ ಬೆಳೆಯೋಕೆ ಶುರುವಾಯ್ತು.+ ಆ ಬಳ್ಳಿ ನೆಲದಲ್ಲೇ ಹರಡ್ಕೊಳ್ತು. ಅದ್ರ ಎಲೆಗಳು ನೆಲಕ್ಕೆ ಮುಖ ಮಾಡಿದ್ವು. ಅದ್ರ ಬೇರುಗಳು ನೆಲದೊಳಗೆ ಇಳೀತಾ ಹೋದ್ವು. ಆ ಬಳ್ಳಿಗೆ ಚಿಗುರುಗಳು ಬಂದು ಕೊಂಬೆಗಳು ಬೆಳೆದ್ವು. ಹೀಗೆ ಒಂದು ದ್ರಾಕ್ಷಿಬಳ್ಳಿ ಬೆಳೀತು.+  ಆಮೇಲೆ ಅಲ್ಲಿ ಇನ್ನೊಂದು ದೊಡ್ಡ ಹದ್ದು+ ಬಂತು. ಅದಕ್ಕೂ ದೊಡ್ಡ ರೆಕ್ಕೆ, ಉದ್ದುದ್ದ ಗರಿಗಳು ಇದ್ವು.+ ಆಗ ಈ ದ್ರಾಕ್ಷಿಬಳ್ಳಿ ಆತುರದಿಂದ ತನ್ನ ಬೇರುಗಳನ್ನ, ತನ್ನನ್ನ ನೆಟ್ಟಿದ್ದ ತೋಟದಿಂದ ದೂರಕ್ಕೆ ಅಂದ್ರೆ ಆ ಹದ್ದಿನ ಕಡೆಗೆ ಚಾಚ್ತು. ತನಗೆ ಆ ಹದ್ದು ನೀರು ಕೊಡಬೇಕು ಅಂತ ಈ ದ್ರಾಕ್ಷಿಬಳ್ಳಿ ತನ್ನ ಎಲೆ, ಕೊಂಬೆಗಳನ್ನ ಅದ್ರ ಕಡೆ ಚಾಚ್ತು.+  ಆದ್ರೆ, ಅದನ್ನ ಈಗಾಗ್ಲೇ ಒಳ್ಳೇ ನೆಲದಲ್ಲಿ, ತುಂಬ ನೀರಿರೋ ಜಾಗದಲ್ಲಿ, ಕೊಂಬೆಗಳು ಬೆಳೆದು, ಹಣ್ಣು ಕೊಟ್ಟು ದೊಡ್ಡ ದ್ರಾಕ್ಷಿಬಳ್ಳಿಯಾಗಿ ಬೆಳಿಬೇಕು ಅಂತಾನೇ ನೆಡಲಾಗಿತ್ತು.”’+  ನೀನು ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ಹೀಗೆ ಮಾಡಿದ ಮೇಲೆ ಆ ದ್ರಾಕ್ಷಿಬಳ್ಳಿ ಚೆನ್ನಾಗಿ ಬೆಳೆಯೋಕೆ ಆಗುತ್ತಾ? ಅದನ್ನ ಯಾರಾದ್ರೂ ಬೇರುಸಮೇತ ಕಿತ್ತು ಹಾಕಲ್ವಾ?+ ಆಗ ಅದ್ರ ಹಣ್ಣು ಕೊಳೆತುಹೋಗಿ, ಅದ್ರ ಚಿಗುರು ಒಣಗಿ ಹೋಗಲ್ವಾ?+ ಅದು ಎಷ್ಟು ಒಣಗಿ ಹೋಗುತ್ತೆ ಅಂದ್ರೆ ಅದನ್ನ ಬೇರು ಸಮೇತ ಕಿತ್ತುಹಾಕೋಕೆ ಬಲಿಷ್ಠ ವ್ಯಕ್ತಿನೇ ಬೇಕಂತೇನಿಲ್ಲ, ತುಂಬ ಜನನೂ ಬೇಕಾಗಲ್ಲ. 10  ಅದನ್ನ ಬೇರೆ ಕಡೆ ಮತ್ತೆ ನೆಟ್ಟರೂ ಅದು ಚೆನ್ನಾಗಿ ಬೆಳಿಯುತ್ತಾ? ಪೂರ್ವದಿಂದ ಬೀಸೋ ಗಾಳಿ ಅದಕ್ಕೆ ಬಡಿದಾಗ ಅದು ಪೂರ್ತಿ ಒಣಗಿ ಹೋಗಲ್ವಾ? ಅದು ಚಿಗುರು ಒಡೆದ ತೋಟದಲ್ಲೇ ಒಣಗಿಹೋಗುತ್ತೆ.”’” 11  ಯೆಹೋವ ಮತ್ತೆ ನನಗೆ ಹೀಗಂದನು: 12  “ನೀನು ದಂಗೆಕೋರ ಜನ್ರಿಗೆ ‘ಈ ಮಾತುಗಳ ಅರ್ಥ ಏನಂತ ನಿಮಗೆ ಗೊತ್ತಾಯ್ತಾ?’ ಅಂತ ದಯವಿಟ್ಟು ಕೇಳು. ನೀನು ಅವ್ರಿಗೆ ‘ನೋಡಿ! ಬಾಬೆಲಿನ ರಾಜ ಯೆರೂಸಲೇಮಿಗೆ ಬಂದು ಅಲ್ಲಿನ ರಾಜನನ್ನೂ ಅಧಿಕಾರಿಗಳನ್ನೂ ಹಿಡ್ಕೊಂಡು ಬಾಬೆಲಿಗೆ ಹೋದ.+ 13  ಅಷ್ಟೇ ಅಲ್ಲ, ಅವನು ರಾಜವಂಶದ ಒಬ್ಬನ+ ಜೊತೆ ಒಪ್ಪಂದ ಮಾಡ್ಕೊಂಡು ಅವನಿಂದ ಆಣೆ ಮಾಡಿಸ್ಕೊಂಡ.+ ಆಮೇಲೆ ಅವನು ದೇಶದಲ್ಲಿರೋ ಅಧಿಕಾರಿಗಳನ್ನೂ ಹಿಡ್ಕೊಂಡು ಹೋದ.+ 14  ಆ ರಾಜ್ಯವನ್ನ ತಗ್ಗಿಸಬೇಕು, ಅದು ಎತ್ತರಕ್ಕೆ ಬೆಳಿಯೋಕೆ ಬಿಡಬಾರದು ಅಂತ ಅವನು ಹಾಗೆ ಮಾಡಿದ. ಜನ ಆ ಒಪ್ಪಂದದ ಪ್ರಕಾರ ನಡೆದ್ರೆ ಮಾತ್ರ ಆ ರಾಜ್ಯ ಉಳಿತಿತ್ತು.+ 15  ಆದ್ರೆ ಕೊನೆಗೆ ಯೆಹೂದದ ರಾಜ ಬಾಬೆಲಿನ ರಾಜನ ವಿರುದ್ಧ ದಂಗೆ ಎದ್ದ.+ ಹೇಗಂದ್ರೆ, ಈಜಿಪ್ಟಿಂದ ಒಂದು ದೊಡ್ಡ ಸೈನ್ಯವನ್ನ+ ಮತ್ತು ಕುದುರೆಗಳನ್ನ ತರಿಸ್ಕೊಳ್ಳೋಕೆ+ ಸಂದೇಶವಾಹಕರನ್ನ ಕಳಿಸಿದ. ಅವನ ಉಪಾಯಕ್ಕೆ ಯಶಸ್ಸು ಸಿಗುತ್ತಾ? ಇಷ್ಟೆಲ್ಲ ಮಾಡಿದ ಮೇಲೆ ಶಿಕ್ಷೆಯಿಂದ ತಪ್ಪಿಸ್ಕೊಳ್ತಾನಾ? ಒಪ್ಪಂದ ಮುರಿದ ಮೇಲೂ ಅವನು ಶಿಕ್ಷೆಯಿಂದ ತಪ್ಪಿಸ್ಕೊಳ್ಳೋಕೆ ಆಗುತ್ತಾ?’+ 16  ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನಾಣೆ, ಅವನನ್ನ* ಯಾರು ರಾಜನನ್ನಾಗಿ ಮಾಡಿದ್ನೋ, ಯಾರಿಗೆ ಕೊಟ್ಟ ಮಾತನ್ನ ಅವನು ಮೀರಿದ್ನೋ, ಯಾರ ಜೊತೆ ಮಾಡಿದ ಒಪ್ಪಂದವನ್ನ ಅವನು ಮುರಿದ್ನೋ ಆ ರಾಜ* ವಾಸಿಸೋ ದೇಶದಲ್ಲೇ ಅಂದ್ರೆ ಬಾಬೆಲಲ್ಲೇ ಅವನು ಸಾಯ್ತಾನೆ.+ 17  ಪಟ್ಟಣದ ಮೇಲೆ ದಾಳಿ ಮಾಡಿ ತುಂಬ ಜನ್ರನ್ನ ನಾಶಮಾಡೋಕೆ ಶತ್ರುಗಳು ಇಳಿಜಾರು ದಿಬ್ಬಗಳನ್ನ ಮತ್ತು ಗೋಡೆಗಳನ್ನ ಕಟ್ಟಿ ಯುದ್ಧ ಮಾಡೋವಾಗ ಫರೋಹನ ದೊಡ್ಡ ಸೈನ್ಯವಾಗಲಿ ಲೆಕ್ಕ ಇಲ್ಲದಷ್ಟು ಸೈನಿಕರಾಗಲಿ ಯೆಹೂದದ ರಾಜನಿಗೆ ಯಾವ ಸಹಾಯನೂ ಮಾಡಕ್ಕಾಗಲ್ಲ.+ 18  ಅವನು ಕೊಟ್ಟ ಮಾತನ್ನ ಮೀರಿ ಒಂದು ಒಪ್ಪಂದವನ್ನ ಮುರಿದಿದ್ದಾನೆ. ಮಾತು ಕೊಟ್ಟ ಮೇಲೂ ಅದ್ರ ಪ್ರಕಾರ ನಡೀದೇ ಇದನ್ನೆಲ್ಲ ಮಾಡಿದ್ದಾನೆ, ಹಾಗಾಗಿ ಅವನು ಶಿಕ್ಷೆಯಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ.”’ 19  ‘ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನಾಣೆ, ಅವನು ನನಗೆ ಕೊಟ್ಟ ಮಾತನ್ನ ಮೀರಿದ್ರಿಂದ ಮತ್ತು ನನ್ನ ಜೊತೆ ಮಾಡಿದ ಒಪ್ಪಂದವನ್ನ* ಮುರಿದಿದ್ರಿಂದ ಅದ್ರ ಪರಿಣಾಮಗಳನ್ನ ಅವನೇ ಅನುಭವಿಸೋ ತರ ಮಾಡ್ತೀನಿ.+ 20  ಅವನನ್ನ ಬೇಟೆಯಾಡೋಕೆ ನನ್ನ ಬಲೆಯನ್ನ ಅವನ ಮೇಲೆ ಬೀಸ್ತಿನಿ. ನಾನು ಬೀಸೋ ಬಲೆಯಲ್ಲಿ ಅವನು ಸಿಕ್ಕಿಹಾಕೊಳ್ತಾನೆ.+ ಅವನು ನನಗೆ ನಂಬಿಕೆದ್ರೋಹ ಮಾಡಿದ್ರಿಂದ ನಾನು ಅವನನ್ನ ಬಾಬೆಲಿಗೆ ಕರ್ಕೊಂಡು ಹೋಗಿ ಅವನ ಜೊತೆ ವಾದ ಮಾಡ್ತೀನಿ.+ 21  ತಪ್ಪಿಸ್ಕೊಂಡು ಓಡೋ ಅವನ ಸೈನಿಕರೆಲ್ಲ ಕತ್ತಿಗೆ ತುತ್ತಾಗಿ ಸಾಯ್ತಾರೆ. ಉಳಿದವರು ಚೆದರಿ ದಿಕ್ಕಾಪಾಲಾಗಿ ಹೋಗ್ತಾರೆ.+ ಆಗ, ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ ಅಂತ ನಿಮಗೆ ಗೊತ್ತಾಗುತ್ತೆ.”’+ 22  ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ತುಂಬ ಎತ್ತರವಾದ ದೇವದಾರು ಮರದ ತುದಿಯಿಂದ ನಾನು ಒಂದು ಚಿಗುರನ್ನ ತೆಗೆದು ನೆಡ್ತೀನಿ.+ ಅದ್ರ ಕೊಂಬೆಗಳ ತುದಿಯಿಂದ ಒಂದು ಎಳೇ ಚಿಗುರನ್ನ ತಗೊಂಡು+ ತುಂಬ ಎತ್ತರವಾದ ಬೆಟ್ಟದ ಮೇಲೆ ನೆಡ್ತೀನಿ.+ 23  ಇಸ್ರಾಯೇಲಿನ ಎತ್ತರವಾದ ಒಂದು ಬೆಟ್ಟದ ಮೇಲೆ ಅದನ್ನ ನೆಡ್ತೀನಿ. ಅದ್ರ ಕೊಂಬೆಗಳು ಬೆಳೆದು ಹಣ್ಣು ಬಿಡುತ್ತೆ. ಅದು ದೊಡ್ಡ ದೇವದಾರು ಮರ ಆಗುತ್ತೆ. ಅದ್ರ ಕೆಳಗೆ, ಅದ್ರ ಕೊಂಬೆಗಳ ಎಲೆಗಳ ನೆರಳಲ್ಲಿ ಎಲ್ಲ ಜಾತಿಯ ಪಕ್ಷಿಗಳು ವಾಸ ಮಾಡುತ್ತೆ. 24  ಆಗ, ದೇಶದಲ್ಲಿರೋ ಎಲ್ಲ ಮರಗಳಿಗೆ ಯೆಹೋವನಾದ ನಾನೇ ಎತ್ತರವಾದ ಮರವನ್ನ ತಗ್ಗಿಸಿದ್ದೀನಿ, ತಗ್ಗಾಗಿರೋ ಮರವನ್ನ ಮೇಲಕ್ಕೆ ಏರಿಸಿದ್ದೀನಿ,+ ಹಸಿರು ಮರವನ್ನ ಒಣಗಿಸಿ, ಒಣಗಿದ ಮರ ಮತ್ತೆ ಹಸಿರಾಗಿ ಹೂಗಳಿಂದ ನಳನಳಿಸೋ ಹಾಗೆ ಮಾಡಿದ್ದೀನಿ+ ಅಂತ ಗೊತ್ತಾಗುತ್ತೆ. ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ ಮತ್ತು ನಿಜ ಮಾಡಿದ್ದೀನಿ.”’”

ಪಾದಟಿಪ್ಪಣಿ

ಅಕ್ಷ. “ಕಾನಾನ್‌ ದೇಶ.”
ಅಂದ್ರೆ, ಚಿದ್ಕೀಯನನ್ನ.
ಅಂದ್ರೆ, ನೆಬೂಕದ್ನೆಚ್ಚರ.
ಅಂದ್ರೆ, ಯೆಹೋವನ ಮುಂದೆ ಮಾಡಿದ ಆಣೆ.