ಯೆಹೋಶುವ 2:1-24

  • ಯೆಹೋಶುವ ಯೆರಿಕೋವಿಗೆ ಇಬ್ರು ಗೂಢಚಾರರನ್ನ ಕಳಿಸಿದನು (1-3)

  • ರಾಹಾಬ ಗೂಢಚಾರರನ್ನ ಬಚ್ಚಿಟ್ಟಳು (4-7)

  • ರಾಹಾಬಳಿಗೆ ಕೊಟ್ಟ ಮಾತು (8-21ಎ)

    • ಗುರುತಾಗಿದ್ದ ಕೆಂಪು ಹಗ್ಗ (18)

  • ಗೂಢಚಾರರು ಯೆಹೋಶುವನ ಹತ್ರ ವಾಪಸ್‌ (21ಬಿ-24)

2  ಆಮೇಲೆ ನೂನನ ಮಗ ಯೆಹೋಶುವ ಗುಟ್ಟಾಗಿ ಶಿಟ್ಟೀಮಿಂದ+ ಇಬ್ರನ್ನ ಗೂಢಚಾರರಾಗಿ ಕಳಿಸಿದ. ಅವನು ಅವ್ರಿಗೆ “ನೀವು ಹೋಗಿ ಕಾನಾನ್‌ ದೇಶವನ್ನ, ಅದ್ರಲ್ಲೂ ಯೆರಿಕೋವನ್ನ ಚೆನ್ನಾಗಿ ನೋಡ್ಕೊಂಡು ಬನ್ನಿ” ಅಂದ. ಆಗ ಅವರು ಯೆರಿಕೋವಿಗೆ ಹೋಗಿ ರಾಹಾಬ+ ಅನ್ನೋ ವೇಶ್ಯೆ ಮನೇಲಿ ಉಳ್ಕೊಂಡ್ರು.  ಯೆರಿಕೋವಿನ ರಾಜನಿಗೆ “ಇಸ್ರಾಯೇಲಿನ ಗೂಢಚಾರರು ಇವತ್ತು ರಾತ್ರಿ ನಮ್ಮ ದೇಶವನ್ನ ಗುಟ್ಟಾಗಿ ನೋಡ್ಕೊಂಡು ಹೋಗೋಕೆ ಬಂದಿದ್ದಾರೆ!” ಅಂತ ಯಾರೋ ಹೇಳಿದ್ರು.  ಆಗ ಯೆರಿಕೋವಿನ ರಾಜ ರಾಹಾಬಳಿಗೆ “ನಿನ್ನ ಮನೆಗೆ ಬಂದಿರೋ ಆ ಗೂಢಚಾರರನ್ನ ಹೊರಗೆ ಕರ್ಕೊಂಡು ಬಾ. ಅವರು ನಮ್ಮ ದೇಶನ ಗುಟ್ಟಾಗಿ ನೋಡ್ಕೊಂಡು ಹೋಗೋಕೆ ಬಂದಿದ್ದಾರೆ” ಅಂತ ಹೇಳಿ ಕಳಿಸಿದ.  ರಾಹಾಬ ಆ ಇಬ್ರನ್ನ ಬಚ್ಚಿಟ್ಟು ಹುಡ್ಕೊಂಡು ಬಂದವ್ರಿಗೆ “ಹೌದು, ಅವರು ಇಲ್ಲಿ ಬಂದಿದ್ರು. ಆದ್ರೆ ಯಾವ ಊರಿನವರು ಅಂತ ನಂಗೊತ್ತಿಲ್ಲ.  ರಾತ್ರಿ ಪಟ್ಟಣದ ಬಾಗಿಲು ಮುಚ್ಚೋ ಸಮಯಕ್ಕೆ ಹೋಗಿಬಿಟ್ರು. ಎಲ್ಲಿ ಹೋದ್ರು ಅಂತ ನಂಗೊತ್ತಿಲ್ಲ. ನೀವು ಬೇಗ ಅವ್ರ ಹಿಂದೆ ಹೋದ್ರೆ ಅವ್ರನ್ನ ಹಿಡೀಬಹುದು” ಅಂದಳು.  (ಅವಳು ಗೂಢಚಾರರನ್ನ ಚಾವಣಿ ಮೇಲೆ ಕರ್ಕೊಂಡು ಹೋಗಿ ಹರಡಿದ್ದ ಅಗಸೆ ಕಟ್ಟುಗಳ ಮಧ್ಯ ಬಚ್ಚಿಟ್ಟಿದ್ದಳು.)  ರಾಜ ಕಳಿಸಿದ್ದ ಜನ್ರು ಯೋರ್ದನ್‌ ನದಿ ದಾಟೋ ಜಾಗದಲ್ಲಿ+ ಅವ್ರನ್ನ ಹುಡುಕ್ತಾ ಆ ಕಡೆ ಹೋದ್ರು. ಅವರು ಹೊರಗೆ ಹೋದ ಕೂಡ್ಲೇ ಪಟ್ಟಣದ ಬಾಗಿಲು ಮುಚ್ಚಿಬಿಟ್ರು.  ಚಾವಣಿ ಮೇಲಿದ್ದ ಗೂಢಚಾರರು ಮಲಗೋ ಮುಂಚೆ ರಾಹಾಬ ಅವ್ರ ಹತ್ರ ಹೋಗಿ  “ಯೆಹೋವ ದೇವರು ಈ ದೇಶನ ನಿಮಗೆ ಕೊಡ್ತಾನೆ ಅಂತ ನಂಗೆ ಚೆನ್ನಾಗಿ ಗೊತ್ತು.+ ನಿಮ್ಮಿಂದಾಗಿ ನಮಗೆ ಭಯ ಜಾಸ್ತಿ ಆಗಿದೆ,+ ದೇಶದ ಜನ್ರೆಲ್ಲ ಧೈರ್ಯ ಕಳ್ಕೊಂಡಿದ್ದಾರೆ.+ 10  ಯಾಕಂದ್ರೆ ನೀವು ಈಜಿಪ್ಟ್‌* ಬಿಟ್ಟು ಬರೋವಾಗ ಯೆಹೋವ ನಿಮ್ಮ ಮುಂದೆ ಕೆಂಪು ಸಮುದ್ರದ ನೀರನ್ನ ಹೇಗೆ ಒಣಗಿಸಿಬಿಟ್ಟನು ಅಂತ ನಾವು ಕೇಳಿಸ್ಕೊಂಡ್ವಿ.+ ಯೋರ್ದನಿನ ಆ ಕಡೆ* ಸೀಹೋನ+ ಮತ್ತು ಓಗ+ ಅನ್ನೋ ಅಮೋರಿಯರ ರಾಜರಿಗೆ ಯಾವ ಗತಿ ಕಾಣಿಸಿದ್ರಿ, ಹೇಗೆ ಸಾಯಿಸಿದ್ರಿ ಅಂತಾನೂ ಕೇಳಿಸಿಕೊಂಡ್ವಿ. 11  ಆಗ ನಮಗೆ ತುಂಬ ಭಯ ಆಯ್ತು.* ನಿಮ್ಮನ್ನ ಎದುರಿಸೋ ಧೈರ್ಯ ನಮ್ಮಲ್ಲಿ ಯಾರಿಗೂ ಇಲ್ಲ. ಯಾಕಂದ್ರೆ ಸ್ವರ್ಗಕ್ಕೂ ಭೂಮಿಗೂ ನಿಮ್ಮ ದೇವರಾದ ಯೆಹೋವ ಮಾತ್ರ ದೇವರು.+ 12  ನಾನು ನಿಮಗೆ ಸಹಾಯ ಮಾಡಿದ ಹಾಗೆ* ನೀವೂ ನನ್ನ ಕುಟುಂಬಕ್ಕೆ ಸಹಾಯ ಮಾಡ್ತೀರ ಅಂತ ದಯವಿಟ್ಟು ಯೆಹೋವನ ಹೆಸ್ರಲ್ಲಿ ಮಾತುಕೊಡಿ. ಅಷ್ಟೇ ಅಲ್ಲ, ನಿಮ್ಮನ್ನ ನಂಬೋಕೆ ಒಂದು ಗುರುತು ಕೊಡಿ. 13  ನನ್ನ ಅಪ್ಪಅಮ್ಮ, ಒಡಹುಟ್ಟಿದವರು, ಅವ್ರ ಇಡೀ ಕುಟುಂಬದ ಜೀವ ಕಾಪಾಡಿ. ನಮ್ಮನ್ನ ಸಾವಿನ ದವಡೆಯಿಂದ ರಕ್ಷಿಸಿ”+ ಅಂದಳು. 14  ಅದಕ್ಕೆ ಗೂಢಚಾರರು “ನಮ್ಮ ಜೀವ ಕೊಟ್ಟಾದ್ರೂ ನಿನ್ನನ್ನ ಕಾಪಾಡ್ತೀವಿ. ನಾವು ಯಾಕೆ ಬಂದಿದ್ದೀವಿ ಅಂತ ನೀನು ಯಾರಿಗೂ ಹೇಳದಿದ್ರೆ, ಯೆಹೋವ ಈ ದೇಶವನ್ನ ನಮಗೆ ಕೊಡುವಾಗ ನಿನಗೆ ಸಹಾಯ ಮಾಡ್ತೀವಿ,* ನೀನು ನಮ್ಮ ಮೇಲಿಟ್ಟಿರೋ ನಂಬಿಕೆನ ಉಳಿಸ್ಕೊಳ್ತೀವಿ” ಅಂದ್ರು. 15  ಆಮೇಲೆ ಅವಳು ಕಿಟಕಿಯಿಂದ ಹಗ್ಗ ಬಿಟ್ಟು ಅವ್ರನ್ನ ಕೆಳಗೆ ಇಳಿಸಿದಳು. ಯಾಕಂದ್ರೆ ಅವಳ ಮನೆ ಪಟ್ಟಣದ ಗೋಡೆ ಮೇಲಿತ್ತು.+ 16  ಅವಳು ಅವ್ರಿಗೆ “ರಾಜನ ಕಡೆಯವ್ರ ಕೈಗೆ ಸಿಗದ ಹಾಗೆ ಬೆಟ್ಟಕ್ಕೆ ಹೋಗಿ. ಅಲ್ಲೇ ಮೂರು ದಿನ ಬಚ್ಚಿಟ್ಕೊಂಡು ಅವರು ಪಟ್ಟಣಕ್ಕೆ ವಾಪಸ್‌ ಬಂದ ಮೇಲೆ ನಿಮ್ಮ ದಾರಿ ಹಿಡಿದು ಹೋಗಬಹುದು” ಅಂದಳು. 17  ಆ ಗೂಢಚಾರರು “ನಿನಗೆ ಮಾತು ಕೊಟ್ಟ ಹಾಗೆ ನಾವು ನಡೀಬೇಕಂದ್ರೆ,+ 18  ಈ ದೇಶಕ್ಕೆ ಮತ್ತೆ ಬರುವಾಗ ಈ ಕೆಂಪು ಹಗ್ಗನ ನಮ್ಮನ್ನ ಇಳಿಸ್ತಿರೋ ಈ ಕಿಟಕಿಗೆ ಕಟ್ಟಬೇಕು. ನಿನ್ನ ಅಪ್ಪಅಮ್ಮ, ಒಡಹುಟ್ಟಿದವರು, ಅವ್ರ ಇಡೀ ಕುಟುಂಬನ ನಿನ್ನ ಮನೇಲಿ ಸೇರಿಸಬೇಕು.+ 19  ಯಾರಾದ್ರೂ ನಿನ್ನ ಮನೆ ಬಿಟ್ಟು ಹೊರಗೆ ಹೋದ್ರೆ ಅವ್ರ ಸಾವಿಗೆ ಅವ್ರೇ ಕಾರಣ.* ಆಗ ಆ ಅಪರಾಧ ನಮ್ಮ ಮೇಲೆ ಬರಲ್ಲ. ಒಂದುವೇಳೆ ನಿನ್ನ ಮನೇಲಿದ್ದಾಗ ಅವ್ರಿಗೇನಾದ್ರೂ ಆದ್ರೆ ಅವ್ರ ಸಾವಿಗೆ ನಾವು ಕಾರಣ. 20  ಆದ್ರೆ ನಾವ್ಯಾಕೆ ಬಂದಿದ್ದೀವಿ ಅಂತ ನೀನು ಯಾರಿಗಾದ್ರೂ ಹೇಳಿದ್ರೆ+ ನಾವು ನಮ್ಮ ಮಾತಿನ ಪ್ರಕಾರ ನಡಿಯಲ್ಲ” ಅಂದ್ರು. 21  ಅದಕ್ಕವಳು “ಹಾಗೇ ಆಗ್ಲಿ” ಅಂದಳು. ಈ ಮಾತು ಹೇಳಿ ಅವ್ರನ್ನ ಕಳಿಸ್ಕೊಟ್ಟಳು. ಅವರು ತಮ್ಮ ದಾರಿ ಹಿಡಿದು ಹೋದ್ರು. ಆಮೇಲೆ ಅವಳು ಕೆಂಪು ಹಗ್ಗನ ಕಿಟಕಿಗೆ ಕಟ್ಟಿದಳು. 22  ರಾಜನ ಕಡೆಯವರು ಎಲ್ಲ ಕಡೆ ಹುಡುಕಿದ್ರೂ ಆ ಗೂಢಚಾರರು ಸಿಗಲಿಲ್ಲ. ಹಾಗಾಗಿ ಪಟ್ಟಣಕ್ಕೆ ವಾಪಸ್‌ ಹೋದ್ರು. ಆ ಗೂಢಚಾರರು ಮೂರು ದಿನ ಬೆಟ್ಟದಲ್ಲೇ ಇದ್ರು. 23  ಆಮೇಲೆ ಬೆಟ್ಟದಿಂದ ಇಳಿದು ಯೋರ್ದನ್‌ ನದಿ ದಾಟಿ ನೂನನ ಮಗ ಯೆಹೋಶುವನ ಹತ್ರ ಬಂದು ನಡೆದ ಎಲ್ಲ ವಿಷ್ಯ ಹೇಳಿದ್ರು. 24  ಅವರು ಯೆಹೋಶುವಗೆ “ಯೆಹೋವ ಆ ಇಡೀ ದೇಶ ನಮಗೆ ಕೊಟ್ಟಿದ್ದಾನೆ.+ ನಿಜ ಹೇಳಬೇಕಂದ್ರೆ ನಮ್ಮಿಂದಾಗಿ ಆ ದೇಶದ ಜನ್ರು ಧೈರ್ಯ ಕಳ್ಕೊಂಡಿದ್ದಾರೆ”+ ಅಂದ್ರು.

ಪಾದಟಿಪ್ಪಣಿ

ಅಥವಾ “ಐಗುಪ್ತ.”
ಅದು, ಪೂರ್ವದ ಕಡೆ.
ಅಕ್ಷ. “ನಮ್ಮ ಹೃದಯ ಕರಗ್ತು.”
ಅಥವಾ “ಶಾಶ್ವತ ಪ್ರೀತಿ ತೋರಿಸಿದ ಹಾಗೆ.”
ಅಥವಾ “ಶಾಶ್ವತ ಪ್ರೀತಿ ತೋರಿಸ್ತೀವಿ.”
ಅಕ್ಷ. “ಅವನ ರಕ್ತ ಅವನ ತಲೆ ಮೇಲೆ ಬರುತ್ತೆ.”