ಯೆಹೋಶುವ 22:1-34

  • ಪೂರ್ವಕ್ಕಿದ್ದ ಕುಲಗಳು ಮನೆಗೆ ವಾಪಸ್‌ ಹೋದವು (1-8)

  • ಯೋರ್ದನಿನ ಹತ್ರ ಯಜ್ಞವೇದಿ ಕಟ್ಟಿದ್ರು (9-12)

  • ಯಜ್ಞವೇದಿ ಕಟ್ಟಿದ್ದಕ್ಕೆ ಕಾರಣ ಏನಂತ ವಿವರಿಸಲಾಯ್ತು (13-29)

  • ಭಿನ್ನಾಭಿಪ್ರಾಯ ಬಗೆಹರಿತು (30-34)

22  ಯೆಹೋಶುವ ರೂಬೇನ್ಯರನ್ನ ಗಾದ್ಯರನ್ನ ಮನಸ್ಸೆಯ ಅರ್ಧ ಕುಲದವರನ್ನ ಒಟ್ಟುಸೇರಿಸಿ  ಹೀಗೆ ಹೇಳಿದ: “ಯೆಹೋವನ ಸೇವಕ ಮೋಶೆ ಆಜ್ಞೆ ಕೊಟ್ಟ ಎಲ್ಲ ವಿಷ್ಯಗಳನ್ನ ನೀವು ಮಾಡಿದ್ದೀರ.+ ನಾನು ನಿಮಗೆ ಆಜ್ಞೆ ಕೊಟ್ಟ ಎಲ್ಲ ವಿಷ್ಯಗಳನ್ನ ಪಾಲಿಸಿದ್ದೀರ.+  ಈ ದಿನದ ತನಕ ಈ ಗಳಿಗೆ ತನಕ ನೀವು ನಿಮ್ಮ ಸಹೋದರರ ಕೈಬಿಡಲಿಲ್ಲ.+ ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟ ಆಜ್ಞೆ ಪಾಲಿಸ್ತಾ ಬಂದಿದ್ದೀರ.+  ನಿಮ್ಮ ದೇವರಾದ ಯೆಹೋವ ನಿಮ್ಮ ಸಹೋದರರಿಗೆ ಮಾತು ಕೊಟ್ಟ ಹಾಗೇ ಈಗ ಅವ್ರಿಗೆ ವಿಶ್ರಾಂತಿ ಕೊಟ್ಟಿದ್ದಾನೆ.+ ಹಾಗಾಗಿ ಯೆಹೋವನ ಸೇವಕ ಮೋಶೆ ಯೋರ್ದನಿನ ಆಕಡೆ* ನಿಮಗೆ ಆಸ್ತಿಯಾಗಿ ಕೊಟ್ಟ ಪ್ರದೇಶದಲ್ಲಿರೋ ನಿಮ್ಮನಿಮ್ಮ ಮನೆಗಳಿಗೆ ವಾಪಸ್‌ ಹೋಗಬಹುದು.+  ಆದ್ರೆ ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸ್ತಾ,+ ಆತನ ದಾರಿಯಲ್ಲೇ ನಡೀತಾ,+ ಆತನ ಆಜ್ಞೆಗಳನ್ನ ಪಾಲಿಸ್ತಾ,+ ನಿಯತ್ತಾಗಿದ್ದು+ ನಿಮ್ಮ ಪೂರ್ಣ ಹೃದಯದಿಂದ ಪೂರ್ಣ ಪ್ರಾಣದಿಂದ*+ ಆತನ ಸೇವೆ ಮಾಡ್ತಾ ಇರಿ.+ ಹೀಗೆ ಯೆಹೋವನ ಸೇವಕ ಮೋಶೆ ನಿಮಗೆ ಕೊಟ್ಟ ಆಜ್ಞೆಗಳನ್ನ ನಿಯಮ ಪುಸ್ತಕವನ್ನ ತಪ್ಪದೆ ಪಾಲಿಸಿ.”+  ಆಮೇಲೆ ಯೆಹೋಶುವ ಅವ್ರಿಗೆ ಆಶೀರ್ವಾದ ಮಾಡಿ ಕಳಿಸ್ಕೊಟ್ಟ. ಅವರು ತಮ್ಮತಮ್ಮ ಮನೆಗೆ ಹೋದ್ರು.  ಮನಸ್ಸೆಯ ಅರ್ಧ ಕುಲದವ್ರಿಗೆ ಮೋಶೆ ಬಾಷಾನಲ್ಲಿ ಆಸ್ತಿ ಕೊಟ್ಟಿದ್ದ.+ ಉಳಿದ ಅರ್ಧ ಕುಲದವ್ರಿಗೆ ಅವರ ಸಹೋದರರ ಜೊತೆ ಯೆಹೋಶುವ ಯೋರ್ದನಿನ ಪಶ್ಚಿಮಕ್ಕೆ ಆಸ್ತಿ ಕೊಟ್ಟಿದ್ದ.+ ಅಷ್ಟೇ ಅಲ್ಲ ಯೆಹೋಶುವ ಅವ್ರಿಗೆ ಆಶೀರ್ವಾದ ಮಾಡಿ ಮನೆಗೆ ಕಳಿಸುವಾಗ  ಹೀಗಂದ: “ಲೆಕ್ಕ ಇಲ್ಲದಷ್ಟು ಪ್ರಾಣಿ, ಬೆಳ್ಳಿಬಂಗಾರ, ತಾಮ್ರ ಕಬ್ಬಿಣ, ಬಟ್ಟೆಬರೆ ತಗೊಂಡು ಹೋಗಿ. ಸಮೃದ್ಧಿಯಿಂದ ಹೋಗಿ.+ ಶತ್ರುಗಳಿಂದ ಲೂಟಿ ಮಾಡಿದ್ದನ್ನ ನಿಮ್ಮ ಸಹೋದರರ ಜೊತೆ ಪಾಲು ಮಾಡ್ಕೊಳ್ಳಿ.”+  ಆಮೇಲೆ ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆಯ ಅರ್ಧ ಕುಲದವರು ಉಳಿದ ಇಸ್ರಾಯೇಲ್ಯರಿಗೆ ವಿದಾಯ ಹೇಳಿ ಕಾನಾನ್‌ ದೇಶದ ಶೀಲೋನಿಂದ ಹೊರಟು ಗಿಲ್ಯಾದ್‌ ಪ್ರದೇಶಕ್ಕೆ ಬಂದ್ರು.+ ಈ ಮುಂಚೆ ಯೆಹೋವ ಮೋಶೆ ಮೂಲಕ ಆಜ್ಞೆ ಕೊಟ್ಟಾಗ ಈ ಪ್ರದೇಶ ಅವ್ರಿಗೆ ಆಸ್ತಿಯಾಗಿ ಸಿಕ್ತು. ಅವರು ಅಲ್ಲಿ ವಾಸ ಮಾಡಿದ್ರು.+ 10  ಕಾನಾನ್‌ ದೇಶದ ಯೋರ್ದನಿನ ಹತ್ರ ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆಯ ಅರ್ಧ ಕುಲದವರು ಬಂದಾಗ ಅಲ್ಲಿ ಒಂದು ದೊಡ್ಡ ಯಜ್ಞವೇದಿ ಕಟ್ಟಿದ್ರು. ಅದು ಎಲ್ರ ಗಮನ ಸೆಳಿತಿತ್ತು. 11  ಸ್ವಲ್ಪ ಸಮಯ ಆದ್ಮೇಲೆ ಈ ವಿಷ್ಯ ಉಳಿದ ಇಸ್ರಾಯೇಲ್ಯರ ಕಿವಿಗೆ ಬಿತ್ತು.+ ಆಗ ಅವರು “ನೋಡಿ! ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆಯ ಅರ್ಧ ಕುಲದವರು ನಮಗೆ ಸೇರಿದ ಕಾನಾನಿನ ಗಡಿಯಲ್ಲಿರೋ ಯೋರ್ದನ್‌ ನದಿ ತೀರದಲ್ಲಿ ಯಜ್ಞವೇದಿ ಕಟ್ಕೊಂಡಿದ್ದಾರೆ” ಅಂದ್ರು. 12  ಈ ಸುದ್ದಿ ಕೇಳಿಸ್ಕೊಂಡ ಮೇಲೆ ಇಸ್ರಾಯೇಲ್ಯರೆಲ್ಲ ಅವ್ರ ವಿರುದ್ಧ ಯುದ್ಧ ಮಾಡೋಕೆ ಶೀಲೋನಲ್ಲಿ+ ಸಭೆ ಸೇರಿದ್ರು. 13  ಆಮೇಲೆ ಇಸ್ರಾಯೇಲ್ಯರು ಪುರೋಹಿತ ಎಲ್ಲಾಜಾರನ ಮಗ ಫೀನೆಹಾಸನನ್ನ+ ಗಿಲ್ಯಾದ್‌ ಪ್ರದೇಶದಲ್ಲಿದ್ದ ರೂಬೇನ್ಯರ, ಗಾದ್ಯರ ಮತ್ತು ಮನಸ್ಸೆಯ ಅರ್ಧ ಕುಲದವ್ರ ಹತ್ರ ಕಳಿಸಿದ್ರು. 14  ಅವನ ಜೊತೆ ಇಸ್ರಾಯೇಲ್ಯರ ಪ್ರತಿ ಕುಲದಿಂದ ಒಬ್ಬೊಬ್ಬರಂತೆ 10 ಪ್ರಧಾನರನ್ನ ಕಳಿಸ್ಕೊಟ್ರು. ಈ ಪ್ರಧಾನರಲ್ಲಿ ಪ್ರತಿಯೊಬ್ಬ ಸಾವಿರಾರು ಇಸ್ರಾಯೇಲ್ಯರ ಮುಖ್ಯಸ್ಥನಾಗಿದ್ದ.+ 15  ಅವರು ಗಿಲ್ಯಾದಲ್ಲಿದ್ದ ರೂಬೇನ್ಯರ, ಗಾದ್ಯರ ಮತ್ತು ಮನಸ್ಸೆಯ ಅರ್ಧ ಕುಲದವ್ರ ಹತ್ರ ಬಂದು ಹೀಗಂದ್ರು: 16  “ಯೆಹೋವನ ಎಲ್ಲಾ ಜನ್ರು ಹೀಗೆ ಹೇಳಿದ್ರು: ‘ಇಸ್ರಾಯೇಲ್‌ ದೇವರ ವಿರುದ್ಧ ನೀವು ಎಂಥ ನಂಬಿಕೆ ದ್ರೋಹ ಮಾಡಿದ್ದೀರ?+ ನಿಮಗೋಸ್ಕರ ಒಂದು ಯಜ್ಞವೇದಿ ಕಟ್ಕೊಂಡು ಯೆಹೋವನ ವಿರುದ್ಧ ತಿರುಗಿಬಿದ್ದಿದ್ದೀರ. ಯೆಹೋವನ ಹಿಂದೆ ಹೋಗೋಕೆ ಇಷ್ಟ ಇಲ್ಲ, ಆತನಿಗೆ ಬೆನ್ನು ಹಾಕಿದ್ದೀವಿ ಅಂತ ಇವತ್ತು ತೋರಿಸ್ಕೊಟ್ರಿ.+ 17  ನಾವು ಪೆಗೋರಿನಲ್ಲಿ ಮಾಡಿದ ತಪ್ಪು ಸಾಕಾಗಲಿಲ್ವಾ? ಆ ತಪ್ಪಿಂದ ಯೆಹೋವನ ಎಲ್ಲ ಜನ್ರ ಮೇಲೆ ಕಷ್ಟ ಬಂದಿದ್ದನ್ನ ಮರೆತುಬಿಟ್ರಾ? ಇವತ್ತಿಗೂ ಆ ಪಾಪದ ಪರಿಣಾಮನ ಅನುಭವಿಸ್ತಾ ಇದ್ದೀವಿ.+ 18  ಇವತ್ತು ನೀವು ಯೆಹೋವನ ಮಾತು ಕೇಳದೆ ಆತನಿಗೆ ಬೆನ್ನು ಹಾಕಿದ್ದೀರ! ಇವತ್ತು ನೀವು ಯೆಹೋವನಿಗೆ ತಿರುಗಿಬಿದ್ರೆ ನಾಳೆ ಆತನು ಎಲ್ಲ ಇಸ್ರಾಯೇಲ್ಯರ ಮೇಲೆ ಕೋಪ ಮಾಡ್ಕೊಳ್ತಾನೆ.+ 19  ನಿಮಗೆ ಸಿಕ್ಕಿರೋ ಆಸ್ತಿ ಅಶುದ್ಧ ಅಂತ ನಿಮಗೆ ಅನಿಸಿದ್ರೆ ಯೆಹೋವನ ಪವಿತ್ರ ಡೇರೆ ಇರೋ+ ಯೆಹೋವನ ಪ್ರದೇಶಕ್ಕೆ+ ಬಂದು ನಮ್ಮ ಜೊತೆ ವಾಸಮಾಡಿ. ಆದ್ರೆ ಯೆಹೋವನ ವಿರುದ್ಧ ತಿರುಗಿ ಬೀಳಬೇಡಿ. ನಮ್ಮ ದೇವರಾಗಿರೋ ಯೆಹೋವನ ಯಜ್ಞವೇದಿ ಜೊತೆ ನಿಮಗಾಗಿ ಒಂದು ಯಜ್ಞವೇದಿ ಕಟ್ಕೊಂಡು ನಮ್ಮನ್ನ ದಂಗೆಕೋರರನ್ನಾಗಿ ಮಾಡಬೇಡಿ.+ 20  ಪೂರ್ತಿ ನಾಶ ಮಾಡಬೇಕು ಅಂತ ಹೇಳಿದ್ದನ್ನ ಜೆರಹನ ಮಗ ಆಕಾನ+ ಪಾಲಿಸದೆ ನಂಬಿಕೆ ದ್ರೋಹ ಮಾಡಿದ್ರಿಂದ ಎಲ್ಲ ಇಸ್ರಾಯೇಲ್ಯರ ಮೇಲೂ ಕಷ್ಟ ಬಂತು.+ ಅವನ ತಪ್ಪಿಂದ ಅವನು ಮಾತ್ರ ಅಲ್ಲ ತುಂಬ ಜನ ಸಾಯಬೇಕಾಯ್ತು.’”+ 21  ಅದಕ್ಕೆ ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆಯ ಅರ್ಧ ಕುಲದವರು ಮುಖ್ಯಸ್ಥರಿಗೆ ಹೀಗೆ ಉತ್ತರ ಕೊಟ್ರು:+ 22  ಯೆಹೋವ ಎಲ್ಲ ದೇವರಿಗಿಂತ ತುಂಬ ದೊಡ್ಡ ದೇವರು!* ಹೌದು, ಯೆಹೋವ ಎಲ್ಲ ದೇವರಿಗಿಂತ ತುಂಬ ದೊಡ್ಡ ದೇವರು!+ ನಾವು ಯಾಕೆ ಹೀಗೆ ಮಾಡಿದ್ದೀವಿ ಅಂತ ಆತನಿಗೆ ಚೆನ್ನಾಗಿ ಗೊತ್ತು, ಮುಂದೆ ಇಸ್ರಾಯೇಲ್ಯರಿಗೂ ಗೊತ್ತಾಗುತ್ತೆ. ಒಂದುವೇಳೆ ನಾವು ಯೆಹೋವನಿಗೆ ತಿರುಗಿಬಿದ್ದು ನಂಬಿಕೆ ದ್ರೋಹ ಮಾಡಿದ್ರೆ ಆತನು ನಮ್ಮನ್ನ ಇಲ್ಲಿ ತನಕ ಬಿಡ್ತಿರಲಿಲ್ಲ. 23  ನಾವು ಯೆಹೋವನ ಮಾತು ಕೇಳದೆ ಆತನಿಗೆ ಬೆನ್ನು ಹಾಕಿದ್ರೆ ಸರ್ವಾಂಗಹೋಮ ಬಲಿಗಳನ್ನ, ಧಾನ್ಯ ಅರ್ಪಣೆಗಳನ್ನ, ಸಮಾಧಾನ ಬಲಿಗಳನ್ನ ಕೊಡೋಕೆ ನಮಗೋಸ್ಕರ ಒಂದು ಯಜ್ಞವೇದಿ ಕಟ್ಟಿರೋದಾದ್ರೆ ಯೆಹೋವ ಖಂಡಿತ ನಮಗೆ ಶಿಕ್ಷೆ ಕೊಡ್ತಾನೆ.+ 24  ಆದ್ರೆ ನಾವು ಬೇರೆ ಉದ್ದೇಶದಿಂದ ಹಾಗೆ ಮಾಡಿದ್ವಿ. ‘ಭವಿಷ್ಯದಲ್ಲಿ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ “ಇಸ್ರಾಯೇಲ್‌ ದೇವರಾದ ಯೆಹೋವನಿಗೂ ನಿಮಗೂ ಏನು ಸಂಬಂಧ? 25  ರೂಬೇನ್ಯರೇ, ಗಾದ್ಯರೇ, ಯೆಹೋವ ನಿಮ್ಮ ನಮ್ಮ ಮಧ್ಯ ಯೋರ್ದನನ್ನ ಗಡಿಯಾಗಿ ಇಟ್ಟಿದ್ದಾನೆ. ಹಾಗಾಗಿ ನಿಮಗೆ ಯೆಹೋವನಲ್ಲಿ ಯಾವುದೇ ಪಾಲಿಲ್ಲ” ಅಂತ ಹೇಳಬಹುದು. ನಮ್ಮ ಮಕ್ಕಳು ಯೆಹೋವನನ್ನ ಆರಾಧಿಸೋಕೆ ಆಗದ ಹಾಗೆ ನಿಮ್ಮ ಮಕ್ಕಳು ತಡೀಬಹುದು’ ಅಂದ್ಕೊಂಡು ಹೀಗೆ ಮಾಡಿದ್ವಿ. 26  “ಅದಕ್ಕೇ ‘ನಮಗಾಗಿ ಒಂದು ಯಜ್ಞವೇದಿ ಕಟ್ಟೋಣ. ಆದ್ರೆ ಅದು ಸರ್ವಾಂಗಹೋಮ ಬಲಿಗಳನ್ನ ಅಥವಾ ಬೇರೆ ಬಲಿಗಳನ್ನ ಕೊಡೋಕೆ ಅಲ್ಲ. 27  ಯೆಹೋವನಿಗೆ ಸರ್ವಾಂಗಹೋಮ ಬಲಿಗಳನ್ನ, ಸಮಾಧಾನ ಬಲಿಗಳನ್ನ ಬೇರೆ ಬಲಿಗಳನ್ನ ಕೊಟ್ಟು ಸೇವೆ ಸಲ್ಲಿಸ್ತಾ ಇರ್ತಿವಿ ಅಂತ ನಮಗೂ ನಿಮಗೂ+ ಮತ್ತು ನಮ್ಮನಿಮ್ಮ ವಂಶದವ್ರಿಗೂ* ಸಾಕ್ಷಿಯಾಗಿ ಇರೋಕೆ ಈ ಯಜ್ಞವೇದಿ ಕಟ್ಟಿದ್ವಿ.+ ಆಗ ಮುಂದೊಂದು ದಿನ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ “ಯೆಹೋವ ಆರಾಧನೆಯಲ್ಲಿ ನಿಮಗೆ ಯಾವುದೇ ಪಾಲಿಲ್ಲ” ಅಂತ ಹೇಳಲ್ಲ.’ 28  ಆಮೇಲೆ ನಾವು ಹೀಗೆ ಅಂದ್ಕೊಂಡ್ವಿ ‘ಮುಂದೆ ಯಾವತ್ತಾದ್ರೂ ಅವರು ನಮಗಾಗ್ಲಿ, ನಮ್ಮ ವಂಶದವ್ರಿಗಾಗ್ಲಿ* ಆ ತರ ಹೇಳಿದ್ರೆ ನಾವು ಹೀಗೆ ಹೇಳೋಣ: “ಯೆಹೋವನ ಯಜ್ಞವೇದಿಯ ಈ ಪ್ರತಿರೂಪ ನೋಡಿ. ಇದನ್ನ ನಮ್ಮ ಪೂರ್ವಜರು ಸರ್ವಾಂಗಹೋಮ ಬಲಿಗಳನ್ನ, ಬೇರೆ ಬಲಿಗಳನ್ನ ಕೊಡೋಕೆ ಅಲ್ಲ, ನಮ್ಮ ನಿಮ್ಮ ಮಧ್ಯ ಸಾಕ್ಷಿಯಾಗಿ ಇರೋಕೆ ಕಟ್ಟಿದ್ರು.”’ 29  ನಮ್ಮ ದೇವರಾದ ಯೆಹೋವನ ಪವಿತ್ರ ಡೇರೆ ಮುಂದೆ ಇರೋ ಒಂದು ಯಜ್ಞವೇದಿ ಇದೆ. ಅದ್ರ ಬದ್ಲು+ ನಾವೊಂದು ಯಜ್ಞವೇದಿ ಕಟ್ಟಿ ಅದ್ರ ಮೇಲೆ ಸರ್ವಾಂಗಹೋಮ ಬಲಿಗಳನ್ನ ಧಾನ್ಯ ಅರ್ಪಣೆಗಳನ್ನ ಸಮಾಧಾನ ಬಲಿಗಳನ್ನ ಯಾಕೆ ಕೊಡಬೇಕು? ಯೆಹೋವನ ವಿರುದ್ಧ ತಿರುಗಿಬೀಳೋದ್ರ ಬಗ್ಗೆ, ಯೆಹೋವನ ಮಾತು ಕೇಳದೆ ಆತನಿಗೆ ಬೆನ್ನು ಹಾಕೋದ್ರ ಬಗ್ಗೆ ನಾವು ಯೋಚ್ನೆನೂ ಮಾಡಲ್ಲ!”+ 30  ರೂಬೇನ್‌, ಗಾದ್‌ ಮತ್ತು ಮನಸ್ಸೆ ವಂಶದವರು ಹೇಳಿದ್ದನ್ನ ಕೇಳಿ ಪುರೋಹಿತ ಫೀನೆಹಾಸನಿಗೆ ಮತ್ತು ಮುಖ್ಯಸ್ಥರಿಗೆ ನೆಮ್ಮದಿ ಆಯ್ತು.+ 31  ಆಗ ಪುರೋಹಿತ ಎಲ್ಲಾಜಾರನ ಮಗ ಫೀನೆಹಾಸ ರೂಬೇನ್‌, ಗಾದ್‌ ಮತ್ತು ಮನಸ್ಸೆ ವಂಶದವ್ರಿಗೆ “ನೀವು ಯೆಹೋವನ ವಿರುದ್ಧ ನಂಬಿಕೆ ದ್ರೋಹ ಮಾಡದೇ ಇದ್ದಿದ್ರಿಂದ ಯೆಹೋವ ನಮ್ಮ ಮಧ್ಯದಲ್ಲಿ ಇದ್ದಾನೆ ಅಂತ ಇವತ್ತು ನಮಗೆ ಗೊತ್ತಾಯ್ತು. ಈಗ ಯೆಹೋವ ನಮಗೆ ಶಿಕ್ಷೆ ಕೊಡಲ್ಲ” ಅಂದ. 32  ಆಮೇಲೆ ಫೀನೆಹಾಸ ಮತ್ತು ಪ್ರಧಾನರು ಗಿಲ್ಯಾದಿನಲ್ಲಿದ್ದ ರೂಬೇನ್ಯರನ್ನ ಗಾದ್ಯರನ್ನ ಬಿಟ್ಟು ಕಾನಾನ್‌ ದೇಶಕ್ಕೆ ವಾಪಸ್‌ ಹೋಗಿ ಬೇರೆ ಇಸ್ರಾಯೇಲ್ಯರಿಗೆ ನಡೆದ ವಿಷ್ಯ ಹೇಳಿದ್ರು. 33  ಅದನ್ನ ಕೇಳಿ ಇಸ್ರಾಯೇಲ್ಯರ ಮನಸ್ಸಿಗೆ ನೆಮ್ಮದಿ ಆಯ್ತು. ಅವರು ದೇವರನ್ನ ಹೊಗಳಿದ್ರು. ರೂಬೇನ್ಯರು ಮತ್ತು ಗಾದ್ಯರು ವಾಸವಾಗಿದ್ದ ದೇಶವನ್ನ ನಾಶ ಮಾಡೋಕೆ ಅವ್ರ ವಿರುದ್ಧ ಯುದ್ಧಕ್ಕೆ ಹೋಗಬೇಕಂತ ಅವರು ಇನ್ಯಾವತ್ತೂ ಮಾತಾಡಲಿಲ್ಲ. 34  ರೂಬೇನ್ಯರು ಮತ್ತು ಗಾದ್ಯರು “ಯೆಹೋವನೇ ಸತ್ಯ ದೇವರು ಅನ್ನೋದಕ್ಕೆ ನಮ್ಮ ಮಧ್ಯ ಇದು ಸಾಕ್ಷಿ ಆಗಿರಲಿ” ಅಂತ ಹೇಳಿ ಆ ಯಜ್ಞವೇದಿಗೆ ಒಂದು ಹೆಸ್ರಿಟ್ರು.*

ಪಾದಟಿಪ್ಪಣಿ

ಅದು, ಪೂರ್ವದ ಕಡೆ.
ಪದವಿವರಣೆಯಲ್ಲಿ “ಪ್ರಾಣ” ನೋಡಿ.
ಅಥವಾ “ಅತೀ ಶ್ರೇಷ್ಠ ದೇವರಾದ ಯೆಹೋವ.”
ಅಕ್ಷ. “ಸಂತತಿ.”
ಅಕ್ಷ. “ಸಂತತಿ.”
ವಿವರಣೆ ಪ್ರಕಾರ “ಸಾಕ್ಷಿ” ಅಂತ ಹೆಸ್ರು ಇಟ್ಟಿರಬಹುದು.