ಯೆಹೋಶುವ 5:1-15

  • ಗಿಲ್ಗಾಲಲ್ಲಿ ಸುನ್ನತಿ ಮಾಡಿದ್ರು (1-9)

  • ಪಸ್ಕ ಹಬ್ಬ ಮಾಡಿದ್ರು; ಮನ್ನ ನಿಂತೋಯ್ತು (10-12)

  • ಯೆಹೋವನ ಸೈನ್ಯದ ನಾಯಕ (13-15)

5  ಇಸ್ರಾಯೇಲ್ಯರು ಯೋರ್ದನ್‌ ನದಿ ದಾಟೋಕೆ ಯೆಹೋವ ಅದನ್ನ ಒಣಗಿಸಿಬಿಟ್ಟನು ಅನ್ನೋ ಸುದ್ದಿ ಯೋರ್ದನಿನ ಪಶ್ಚಿಮದಲ್ಲಿದ್ದ ಅಮೋರಿಯರ+ ಮತ್ತು ಸಮುದ್ರದ ಕಡೆಗಿದ್ದ ಕಾನಾನ್ಯರ+ ಎಲ್ಲ ರಾಜರಿಗೆ ಮುಟ್ತು. ಇದನ್ನ ಕೇಳಿ ಭಯದಿಂದ ಅವ್ರ ಹೃದಯ ನಡುಗ್ತು.*+ ಇಸ್ರಾಯೇಲ್ಯರಿಂದಾಗಿ ಅವ್ರಿಗೆ ಧೈರ್ಯನೇ ಇಲ್ಲದ ಹಾಗಾಯ್ತು.+  ಆ ಸಮಯದಲ್ಲಿ ಯೆಹೋವ ಯೆಹೋಶುವನಿಗೆ “ಕಲ್ಲಿನ ಚೂರಿಗಳನ್ನ ಮಾಡ್ಕೊಂಡು ಇಸ್ರಾಯೇಲಿನ ಗಂಡಸ್ರಿಗೆ ಸುನ್ನತಿ ಮಾಡು”*+ ಅಂದನು.  ಆಗ ಯೆಹೋಶುವ ಕಲ್ಲಿನ ಚೂರಿಗಳನ್ನ ಮಾಡ್ಕೊಂಡು ಗಿಬೆಯತ್‌-ಹಾರಲೊತ್‌* ಅನ್ನೋ ಜಾಗದಲ್ಲಿ ಇಸ್ರಾಯೇಲಿನ ಗಂಡಸ್ರಿಗೆ ಸುನ್ನತಿ ಮಾಡಿದನು.+  ಯೆಹೋಶುವ ಯಾಕೆ ಸುನ್ನತಿ ಮಾಡಿದನಂದ್ರೆ, ಈಜಿಪ್ಟಿಂದ ಬಂದಿದ್ದ ಗಂಡಸ್ರೆಲ್ಲ ಅಂದ್ರೆ ಯುದ್ಧ ಮಾಡ್ತಿದ್ದ ಗಂಡಸ್ರೆಲ್ಲ* ಕಾಡಲ್ಲಿ ಪ್ರಯಾಣ ಮಾಡುವಾಗ ತೀರಿಹೋದ್ರು.+  ಈಜಿಪ್ಟನ್ನ ಬಿಟ್ಟುಬಂದ ಎಲ್ಲ ಗಂಡಸ್ರಿಗೆ ಸುನ್ನತಿ ಆಗಿತ್ತು. ಆದ್ರೆ ಅಲ್ಲಿಂದ ಹೊರಟ ಮೇಲೆ ಕಾಡಲ್ಲಿ ಹುಟ್ಟಿದವರಿಗೆ ಸುನ್ನತಿ ಆಗಿರಲಿಲ್ಲ.  ಈಜಿಪ್ಟನ್ನ ಬಿಟ್ಟು ಬಂದ ಇಡೀ ಜನಾಂಗ ಅಂದ್ರೆ ಯುದ್ಧ ಮಾಡೋಕೆ ಅರ್ಹರಾಗಿದ್ದ ಗಂಡಸ್ರೆಲ್ಲ ಯೆಹೋವನ ಮಾತು ಕೇಳದೆ ಇದ್ದದ್ರಿಂದ ಅವ್ರೆಲ್ಲ ಸಾಯೋ ತನಕ+ ಇಸ್ರಾಯೇಲ್ಯರು ಕಾಡಲ್ಲೇ 40 ವರ್ಷ ಅಲೆದಾಡಿದ್ರು.+ ಯೆಹೋವ ತನ್ನ ಜನ್ರಿಗೆ ಹಾಲೂ ಜೇನೂ ಹರಿಯೋ ದೇಶ+ ಕೊಡ್ತೀನಿ ಅಂತ ಅವ್ರ ತಾತ-ಮುತ್ತಾತರಿಗೆ ಮಾತು ಕೊಟ್ಟಿದ್ದನು.+ ಆದ್ರೆ ಯಾವುದೇ ಕಾರಣಕ್ಕೂ ಅವ್ರಿಗೆ ಆ ದೇಶ ನೋಡೋಕೆ ಬಿಡಲ್ಲ ಅಂತ ಯೆಹೋವ ಶಪಥ ಮಾಡಿದ್ದನು.+  ಹಾಗಾಗಿ ದೇವರು ಅವ್ರ ಬದ್ಲು ಅವ್ರ ಮಕ್ಕಳನ್ನ ಆ ದೇಶಕ್ಕೆ ಕರ್ಕೊಂಡು ಬಂದನು.+ ಯೆಹೋಶುವ ಅವ್ರಿಗೆ ಸುನ್ನತಿ ಮಾಡಿದ. ಯಾಕಂದ್ರೆ ಪ್ರಯಾಣದ ಸಮಯದಲ್ಲಿ ಅವ್ರಿಗೆ ಸುನ್ನತಿ ಆಗಿರಲಿಲ್ಲ.  ಇಡೀ ಜನಾಂಗಕ್ಕೆ ಸುನ್ನತಿಯಾದ ಮೇಲೆ ಅವರು ಚೇತರಿಸ್ಕೊಳ್ಳೋ ತನಕ ತಾವು ಪಾಳೆಯ ಹೂಡಿದ್ದಲ್ಲೇ ಉಳ್ಕೊಂಡ್ರು.  ಆಗ ಯೆಹೋವ ಯೆಹೋಶುವನಿಗೆ “ಈಜಿಪ್ಟ್‌ ಜನ್ರು ನಿಮಗೆ ಮಾಡಿದ ಅವಮಾನವನ್ನ ಇವತ್ತು ತೆಗೆದುಹಾಕ್ತಿನಿ”* ಅಂದನು. ಹಾಗಾಗಿ ಇವತ್ತಿಗೂ ಆ ಜಾಗಕ್ಕೆ ಗಿಲ್ಗಾಲ್‌*+ ಅಂತ ಹೆಸ್ರಿದೆ. 10  ಇಸ್ರಾಯೇಲ್ಯರು ಯೆರಿಕೋವಿನ ಬಯಲು ಪ್ರದೇಶದ ಗಿಲ್ಗಾಲಲ್ಲಿ ಹೂಡಿದ್ದ ಪಾಳೆಯದಲ್ಲೇ ಇದ್ರು. ಆ ತಿಂಗಳ 14ನೇ ದಿನ ಸಾಯಂಕಾಲ ಪಸ್ಕ ಹಬ್ಬ ಮಾಡಿದ್ರು.+ 11  ಪಸ್ಕ ಹಬ್ಬದ ಮಾರನೇ ದಿನ ದೇಶದ ಬೆಳೆಯನ್ನ ತಿನ್ನೋಕೆ ಶುರು ಮಾಡಿದ್ರು. ಅದೇ ದಿನ ಅವರು ಹುಳಿ ಇಲ್ಲದ ರೊಟ್ಟಿ,+ ಸುಟ್ಟ ಧಾನ್ಯಗಳನ್ನ ತಿಂದ್ರು. 12  ದೇಶದ ಬೆಳೆಯನ್ನ ತಿಂದ ದಿನಾನೇ ಮನ್ನ ನಿಂತೋಯ್ತು. ಅವತ್ತಿಂದ ಇಸ್ರಾಯೇಲ್ಯರಿಗೆ ಮನ್ನ ಸಿಗಲಿಲ್ಲ.+ ಆದ್ರೆ ಆ ವರ್ಷದಿಂದ ಅವರು ಕಾನಾನ್‌ ದೇಶದ ಬೆಳೆಯನ್ನ ತಿನ್ನೋಕೆ ಶುರು ಮಾಡಿದ್ರು.+ 13  ಒಂದಿನ ಯೆಹೋಶುವ ಯೆರಿಕೋವಿನ ಹತ್ರ ಇದ್ದಾಗ ಒಬ್ಬ ಮನುಷ್ಯ+ ಕೈಯಲ್ಲಿ ಕತ್ತಿ ಹಿಡ್ಕೊಂಡು ನಿಂತಿರೋದನ್ನ+ ನೋಡಿದ. ಯೆಹೋಶುವ ಅವನ ಹತ್ರ ಹೋಗಿ “ನೀನು ನಮ್ಮ ಕಡೆಯವ್ನಾ ಅಥವಾ ನಮ್ಮ ವಿರೋಧಿಗಳ ಕಡೆಯವ್ನಾ?” ಅಂತ ಕೇಳಿದ. 14  ಅದಕ್ಕೆ ಅವನು “ನಾನು ಇಬ್ರ ಕಡೆಯವನೂ ಅಲ್ಲ, ನಾನು ಯೆಹೋವನ ಸೈನ್ಯದ ನಾಯಕ”*+ ಅಂದನು. ಆಗ ಯೆಹೋಶುವ ಮಂಡಿಯೂರಿ ಬಗ್ಗಿ “ನಿಮ್ಮ ಈ ಸೇವಕ ಏನ್‌ ಮಾಡಬೇಕು, ಹೇಳಿ ಯಜಮಾನ” ಅಂದ. 15  ಆಗ ಯೆಹೋವನ ಸೈನ್ಯದ ನಾಯಕ ಯೆಹೋಶುವನಿಗೆ “ನಿನ್ನ ಚಪ್ಪಲಿ ಬಿಚ್ಚಿಡು, ಯಾಕಂದ್ರೆ ನೀನು ನಿಂತಿರೋ ಜಾಗ ಪವಿತ್ರವಾದ ಜಾಗ” ಅಂದನು. ತಕ್ಷಣ ಯೆಹೋಶುವ ಹಾಗೇ ಮಾಡಿದ.+

ಪಾದಟಿಪ್ಪಣಿ

ಅಕ್ಷ. “ಹೃದಯ ಕರಗ್ತು.”
ಅಕ್ಷ. “ಮತ್ತೆ ಸುನ್ನತಿಮಾಡಿಸು.”
ಅರ್ಥ “ಮುಂದೊಗಲಿನ ಗುಡ್ಡ”
ಅಥವಾ “ಸೈನ್ಯದಲ್ಲಿ ಕೆಲಸ ಮಾಡೋಷ್ಟು ವಯಸ್ಸಿನ ಗಂಡಸ್ರೆಲ್ಲ.”
ಅಕ್ಷ. “ಉರುಳಿಸಿಬಿಡ್ತೀನಿ.”
ಅರ್ಥ “ಉರುಳಿಸಿ ಬಿಡು.”
ಅಥವಾ “ಮುಖ್ಯಸ್ಥ.”