ಯೆಹೋಶುವ 9:1-27

  • ಬುದ್ಧಿವಂತ ಗಿಬ್ಯೋನ್ಯರ ಶಾಂತಿ ಒಪ್ಪಂದ (1-15)

  • ಗಿಬ್ಯೋನ್ಯರ ತಂತ್ರ ಗೊತ್ತಾಯ್ತು (16-21)

  • ಸೌದೆ ಕೂಡಿಸೋಕೆ, ನೀರು ತುಂಬಿಸೋಕೆ ಗಿಬ್ಯೋನ್ಯರ ನೇಮಕ (22-27)

9  ನಡೆದ ಘಟನೆಗಳ ಬಗ್ಗೆ ಹಿತ್ತಿಯರ, ಅಮೋರಿಯರ, ಕಾನಾನ್ಯರ, ಪೆರಿಜೀಯರ, ಹಿವ್ವಿಯರ, ಯೆಬೂಸಿಯರ+ ರಾಜರಿಗೆ ಗೊತ್ತಾಯ್ತು. ಇವರು ಯೋರ್ದನಿನ ಪಶ್ಚಿಮಕ್ಕಿದ್ದ ಬೆಟ್ಟ ಪ್ರದೇಶದಲ್ಲಿ,+ ಷೆಫೆಲಾದಲ್ಲಿ,* ಮಹಾ ಸಮುದ್ರದ*+ ಇಡೀ ತೀರದಲ್ಲಿ, ಲೆಬೆನೋನಿನ ಮುಂದೆ ಇರೋ ಪ್ರದೇಶಗಳನ್ನ ಆಳ್ತಿದ್ರು.  ಇವ್ರೆಲ್ಲ ಯೆಹೋಶುವನ ಮತ್ತೆ ಇಸ್ರಾಯೇಲಿನ ವಿರುದ್ಧ ಯುದ್ಧ ಮಾಡೋಕೆ ಸೇರ್ಕೊಂಡ್ರು.*+  ಯೆಹೋಶುವ ಯೆರಿಕೋವಿಗೂ+ ಆಯಿಗೂ+ ಏನು ಮಾಡಿದ ಅಂತ ಗಿಬ್ಯೋನಿನ+ ಜನ್ರಿಗೆ ಗೊತ್ತಾಯ್ತು.  ಆಗ ಅವರು ಬುದ್ಧಿ ಉಪಯೋಗಿಸಿದ್ರು. ಆಹಾರ ತುಂಬಿಸಿದ್ದ ಹರಿದ ಗೋಣಿಚೀಲಗಳನ್ನ ತೇಪೆ ಹಾಕಿರೋ ದ್ರಾಕ್ಷಾಮದ್ಯದ ಚರ್ಮದ ಬುದ್ದಲಿಗಳನ್ನ ಕತ್ತೆಗಳ ಮೇಲೆ ಹೇರಿದ್ರು.  ಸವೆದು ತೇಪೆ ಹಾಕಿರೋ ಚಪ್ಪಲಿ, ಹರಿದು ಹೋಗಿರೋ ಬಟ್ಟೆ ಹಾಕೊಂಡ್ರು. ಅವರು ತಗೊಂಡಿದ್ದ ರೊಟ್ಟಿಗಳೆಲ್ಲ ಒಣಗಿ, ಚೂರು ಚೂರಾಗಿದ್ವು.  ಆಮೇಲೆ ಅವರು ಗಿಲ್ಗಾಲಿನ ಪಾಳೆಯದಲ್ಲಿದ್ದ+ ಯೆಹೋಶುವನ ಹತ್ರ ಬಂದ್ರು. ಅವರು ಅವನಿಗೆ, ಅಲ್ಲಿದ್ದ ಇಸ್ರಾಯೇಲ್ಯರಿಗೆ “ನಾವು ದೂರದ ದೇಶದಿಂದ ಬಂದಿದ್ದೀವಿ. ದಯವಿಟ್ಟು ಈಗ ನಮ್ಮ ಜೊತೆ ಶಾಂತಿಯ ಒಪ್ಪಂದ ಮಾಡ್ಕೊಳ್ಳಿ” ಅಂದ್ರು.  ಆದ್ರೆ ಇಸ್ರಾಯೇಲ್ಯರು ಹಿವ್ವಿಯರಾದ+ ಆ ಗಂಡಸ್ರಿಗೆ “ಹೇಗೆ ನಿಮ್ಮ ಜೊತೆ ಒಪ್ಪಂದ ಮಾಡ್ಕೊಳ್ಳೋದು?+ ಯಾರಿಗೆ ಗೊತ್ತು ನೀವು ಇಲ್ಲೇ ಎಲ್ಲೋ ಹತ್ರದಿಂದಾನೇ ಬಂದಿರಬಹುದು” ಅಂದ್ರು.  ಅದಕ್ಕೆ ಅವರು ಯೆಹೋಶುವನಿಗೆ “ನಾವು ನಿಮ್ಮ ದಾಸರಾಗೋಕೆ* ಇಷ್ಟಪಡ್ತೀವಿ” ಅಂದ್ರು. ಆಗ ಯೆಹೋಶುವ “ನೀವು ಯಾರು? ಎಲ್ಲಿಂದ ಬಂದ್ರಿ?” ಅಂತ ಕೇಳಿದ.  ಅದಕ್ಕವರು “ನಿಮ್ಮ ದಾಸರಾಗಿರೋ ನಾವು ದೂರ ದೇಶದಿಂದ ಬಂದಿದ್ದೀವಿ.+ ನಿಮ್ಮ ದೇವರಾದ ಯೆಹೋವನ ಹೆಸ್ರಿನ ಮೇಲಿರೋ ಗೌರವದಿಂದ ಬಂದಿದ್ದೀವಿ. ಆತನ ಕೀರ್ತಿ ಬಗ್ಗೆ, ಈಜಿಪ್ಟಲ್ಲಿ ಆತನು ಮಾಡಿದ ಎಲ್ಲ ವಿಷ್ಯಗಳ ಬಗ್ಗೆ ಕೇಳಿದ್ದೀವಿ.+ 10  ಆತನು ಯೋರ್ದನಿನ ಆ ಕಡೆ ಇದ್ದ* ಹೆಷ್ಬೋನಿನ ರಾಜ ಸೀಹೋನ+ ಮತ್ತು ಅಷ್ಟರೋತಿನಲ್ಲಿದ್ದ ಬಾಷಾನಿನ ರಾಜ ಓಗ+ ಅನ್ನೋ ಅಮೋರಿಯರ ಇಬ್ರು ರಾಜರಿಗೆ ಏನು ಮಾಡಿದ ಅಂತ ಕೇಳಿಸ್ಕೊಂಡಿದ್ದೀವಿ. 11  ಹಾಗಾಗಿ ನಮ್ಮ ಹಿರಿಯರು, ನಮ್ಮ ದೇಶದ ಎಲ್ಲ ಜನ್ರು ನಮಗೆ ‘ಪ್ರಯಾಣಕ್ಕೆ ಬೇಕಾಗೋ ಆಹಾರ ತಗೊಂಡು ಅವ್ರನ್ನ ಭೇಟಿ ಮಾಡಿ ಹೀಗೆ ಹೇಳಿ ಅಂದ್ರು: “ನಾವು ನಿಮ್ಮ ದಾಸರಾಗ್ತೀವಿ.+ ದಯವಿಟ್ಟು ಈಗ ನಮ್ಮ ಜೊತೆ ಶಾಂತಿಯ ಒಪ್ಪಂದ ಮಾಡ್ಕೊಳ್ಳಿ.”’+ 12  ನಿಮ್ಮನ್ನ ನೋಡೋಕೆ ನಮ್ಮ ಮನೆಯಿಂದ ಹೊರಟಾಗ ಊಟಕ್ಕೆ ತಗೊಂಡಿದ್ದ ಈ ರೊಟ್ಟಿಗಳು ಬಿಸಿ ಬಿಸಿಯಾಗಿತ್ತು. ಈಗ ನೋಡಿ ಒಣಗಿ ಚೂರು ಚೂರಾಗಿವೆ!+ 13  ನಾವು ದ್ರಾಕ್ಷಾಮದ್ಯ ತುಂಬಿಸಿದಾಗ ಈ ಚರ್ಮದ ಬುದ್ದಲಿಗಳು ಹೊಸದಾಗಿದ್ವು. ಆದ್ರೆ ಈಗ ಹರಿದು ಹೋಗಿವೆ.+ ನಮ್ಮ ಬಟ್ಟೆ ಹರಿದೋಗಿದೆ, ಚಪ್ಪಲಿ ಸವೆದು ಹೋಗಿದೆ! ಯಾಕಂದ್ರೆ ನಾವು ತುಂಬ ದೂರದಿಂದ ಬಂದಿದ್ದೀವಿ” ಅಂದ್ರು. 14  ಆಗ ಇಸ್ರಾಯೇಲಿನ ಗಂಡಸ್ರು ಅವ್ರ ಆಹಾರದಲ್ಲಿ ಸ್ವಲ್ಪ ತಗೊಂಡು ಪರೀಕ್ಷಿಸಿದ್ರು. ಆದ್ರೆ ಇದ್ರ ಬಗ್ಗೆ ಅವರು ಯೆಹೋವನ ಹತ್ರ ವಿಚಾರಿಸಲಿಲ್ಲ.+ 15  ಯೆಹೋಶುವ ಅವ್ರ ಜೊತೆ ಶಾಂತಿಯ ಒಪ್ಪಂದ ಮಾಡ್ಕೊಂಡು,+ ಅವ್ರನ್ನ ನಾಶಮಾಡಲ್ಲ ಅಂತ ಮಾತು ಕೊಟ್ಟ. ಇದನ್ನ ಒಪ್ಪಿ ಸಭೆಯ ಪ್ರಧಾನರೂ ಮಾತು ಕೊಟ್ರು.+ 16  ಒಪ್ಪಂದ ಮಾಡ್ಕೊಂಡು ಮೂರು ದಿನ ಆದ್ಮೇಲೆ ಅವರು ತಮ್ಮ ಹತ್ರದಲ್ಲೇ ವಾಸಿಸೋ ಜನ ಅಂತ ಗೊತ್ತಾಯ್ತು. 17  ಇಸ್ರಾಯೇಲ್ಯರು ಪ್ರಯಾಣಿಸಿ ಮೂರನೇ ದಿನ ಗಿಬ್ಯೋನ್ಯರ ಪಟ್ಟಣಗಳಿಗೆ+ ಬಂದ್ರು. ಕೆಫೀರಾ, ಬೇರೋತ್‌, ಕಿರ್ಯತ್‌-ಯಾರೀಮ್‌+ ಅವ್ರ ಪಟ್ಟಣಗಳು. 18  ಪ್ರಧಾನರು ಇಸ್ರಾಯೇಲ್‌ ದೇವರಾದ ಯೆಹೋವನ ಮೇಲೆ ಆಣೆ ಇಟ್ಟಿದ್ರಿಂದ+ ಇಸ್ರಾಯೇಲ್ಯರು ಅವ್ರ ಮೇಲೆ ದಾಳಿ ಮಾಡಲಿಲ್ಲ. ಹಾಗಾಗಿ ಪ್ರಧಾನರ ವಿರುದ್ಧ ಇಡೀ ಸಭೆ ಗೊಣಗೋಕೆ ಶುರು ಮಾಡ್ತು. 19  ಆಗ ಪ್ರಧಾನರೆಲ್ಲ ಇಡೀ ಸಭೆಗೆ ಹೀಗಂದ್ರು: “ಇಸ್ರಾಯೇಲ್‌ ದೇವರಾದ ಯೆಹೋವನ ಮೇಲೆ ಆಣೆಯಿಟ್ಟು ಅವ್ರಿಗೆ ಮಾತು ಕೊಟ್ಟಿದ್ರಿಂದ ನಾವು ಅವ್ರಿಗೆ ಹಾನಿ ಮಾಡಕ್ಕಾಗಲ್ಲ. 20  ಅದಕ್ಕೆ ಏನು ಮಾಡೋಣಾಂದ್ರೆ, ಅವರ ಪ್ರಾಣ ತೆಗಿಯೋದು ಬೇಡ. ನಾವು ಅವ್ರಿಗೆ ಕೊಟ್ಟ ಮಾತು ಉಳಿಸ್ಕೊಳ್ಳದಿದ್ರೆ ದೇವರಿಗೆ ನಮ್ಮ ಮೇಲೆ ಕೋಪ ಬರುತ್ತೆ.”+ 21  ಪ್ರಧಾನರು ಗಿಬ್ಯೋನ್ಯರಿಗೆ ಕೊಟ್ಟಿದ್ದ ಮಾತಿನ ಬಗ್ಗೆ ಹೇಳ್ತಾ “ಅವ್ರನ್ನ ಕೊಲ್ಲೋದು ಬೇಡ. ಅವರು ನಮ್ಮೆಲ್ಲರಿಗಾಗಿ ಸೌದೆ ಕೂಡಿಸೋ, ನೀರು ತುಂಬಿಸೋ ಕೆಲ್ಸ ಮಾಡ್ಲಿ” ಅಂದ್ರು. 22  ಯೆಹೋಶುವ ಗಿಬ್ಯೋನ್ಯರನ್ನ ಕರೆದು “ನೀವು ಇಲ್ಲೇ ಹತ್ರದಲ್ಲಿ ವಾಸವಾಗಿದ್ರೂ ‘ತುಂಬ ದೂರದ ದೇಶದಿಂದ ಬಂದಿದ್ದೀವಿ’ ಅಂತ ಹೇಳಿ ಯಾಕೆ ಮೋಸ ಮಾಡಿದ್ರಿ?+ 23  ಈಗಿಂದ ನಿಮಗೆ ಶಾಪ ಬರುತ್ತೆ.+ ನೀವು ಯಾವಾಗ್ಲೂ ದಾಸರಾಗಿದ್ದು ನನ್ನ ದೇವರ ಆಲಯಕ್ಕೆ* ಸೌದೆ ಕೂಡಿಸ್ತೀರ, ನೀರು ತುಂಬಿಸ್ತೀರ” ಅಂದ. 24  ಅದಕ್ಕವರು ಯೆಹೋಶುವನಿಗೆ “ನಿಮಗೆ ಈ ದೇಶವನ್ನೆಲ್ಲ ಕೊಡುವಾಗ ಅದ್ರಲ್ಲಿರೋ ಜನ್ರನ್ನೆಲ್ಲ ನಾಶ ಮಾಡಬೇಕಂತ ನಿಮ್ಮ ದೇವರಾದ ಯೆಹೋವ ಆತನ ಸೇವಕ ಮೋಶೆಗೆ ಹೇಳಿದ್ದನು.+ ನಿಮ್ಮ ದಾಸರಾದ ನಮಗೆ ಇದ್ರ ಬಗ್ಗೆ ಚೆನ್ನಾಗಿ ಗೊತ್ತು. ಹಾಗಾಗಿ ನಿಮ್ಮಿಂದ ನಾವು ಪ್ರಾಣ ಕಳ್ಕೊಳ್ತೀವಿ ಅಂತ ಹೆದರಿ+ ಹೀಗೆ ಮಾಡಿದ್ವಿ.+ 25  ಈಗ ನಾವು ನಿನ್ನ ಕೈಯಲ್ಲಿದ್ದೀವಿ.* ನಿನಗೆ ಯಾವುದು ಸರಿ, ಯಾವುದು ಒಳ್ಳೇದು ಅನಿಸುತ್ತೋ ಅದನ್ನೇ ಮಾಡು” ಅಂದ್ರು. 26  ಅವರು ಕೇಳ್ಕೊಂಡ ಹಾಗೇ ಯೆಹೋಶುವ ಅವ್ರ ಜೊತೆ ನಡ್ಕೊಂಡ. ಇಸ್ರಾಯೇಲ್ಯರು ಅವ್ರನ್ನ ಕೊಲ್ಲದೇ ಇರೋ ತರ ನೋಡ್ಕೊಳ್ತಾ ಅವ್ರನ್ನ ಇಸ್ರಾಯೇಲ್ಯರಿಂದ ಸಂರಕ್ಷಿಸಿದ. 27  ಆದ್ರೆ ಎಲ್ಲ ಇಸ್ರಾಯೇಲ್ಯರಿಗಾಗಿ, ಯೆಹೋವ ಆರಿಸ್ಕೊಳ್ಳೋ ಜಾಗದಲ್ಲಿರೋ+ ಯಜ್ಞವೇದಿಗಾಗಿ ಸೌದೆ ಕೂಡಿಸೋಕೆ, ನೀರು ತುಂಬಿಸೋಕೆ+ ಯೆಹೋಶುವ ಅವ್ರನ್ನ ನೇಮಿಸಿದ. ಇವತ್ತಿಗೂ ಅವರು ಅದೇ ಕೆಲಸ ಮಾಡ್ತಿದ್ದಾರೆ.+

ಪಾದಟಿಪ್ಪಣಿ

ಅದು, ಮೆಡಿಟರೇನಿಯನ್‌ ಸಮುದ್ರ.
ಅಥವಾ “ತಗ್ಗು ಪ್ರದೇಶದಲ್ಲಿ.”
ಅಥವಾ “ಮೈತ್ರಿ ಮಾಡ್ಕೊಂಡ್ರು.”
ಅಥವಾ “ಸೇವಕರಾಗೋಕೆ.”
ಅದು, ಪೂರ್ವದ ಕಡೆ.
ಅಕ್ಷ. “ಮನೆಗೆ.”
ಅಥವಾ “ನಮಗೆ ನಿನ್ನ ದಯೆ ಬೇಕು.”