ಒಂದನೇ ಪೂರ್ವಕಾಲವೃತ್ತಾಂತ 13:1-14

  • ಕಿರ್ಯತ್ಯಾರೀಮಿನಿಂದ ಮಂಜೂಷ ತರಲಾಯ್ತು (1-14)

    • ಉಜ್ಜನ ಸಾವು (9, 10)

13  ದಾವೀದ ಸಾವಿರ ಜನ್ರ ಮೇಲೆ, ನೂರು ಜನ್ರ ಮೇಲೆ ಮುಖ್ಯಸ್ಥರಾಗಿದ್ದ+ ಎಲ್ಲ ನಾಯಕರ ಜೊತೆ ಮಾತಾಡಿದ.  ಆಮೇಲೆ ದಾವೀದ ಎಲ್ಲ ಇಸ್ರಾಯೇಲ್ಯರ ಮುಂದೆ ಹೀಗಂದ: “ನಿಮಗೆ ಇದು ಒಳ್ಳೇದಂತ ಅನಿಸಿದ್ರೆ, ನಮ್ಮ ದೇವರಾದ ಯೆಹೋವನಿಗೆ ಇಷ್ಟ ಇದ್ರೆ ಎಲ್ಲ ಪ್ರದೇಶಗಳಲ್ಲಿರೋ ನಮ್ಮ ಸಹೋದರರಾದ ಬೇರೆ ಇಸ್ರಾಯೇಲ್ಯರಿಗೂ, ಪುರೋಹಿತರಿಗೂ, ಹುಲ್ಲುಗಾವಲುಗಳಿರೋ ಪಟ್ಟಣಗಳಲ್ಲಿ ವಾಸ ಮಾಡ್ತಿರೋ ಲೇವಿಯರಿಗೂ+ ಸಂದೇಶ ಕಳಿಸೋಣ. ಅವರೂ ಬಂದು ನಮ್ಮ ಜೊತೆ ಸೇರಲಿ.  ಆಗ ನಾವು ಹೋಗಿ ದೇವರ ಮಂಜೂಷವನ್ನ+ ವಾಪಸ್‌ ತರೋಣ.” ಯಾಕಂದ್ರೆ ಸೌಲ+ ಇದ್ದಾಗ ಅವರು ಅದನ್ನ ಚೆನ್ನಾಗಿ ನೋಡ್ಕೊಳ್ಳಲಿಲ್ಲ.  ದಾವೀದನ ಮಾತುಗಳನ್ನ ಎಲ್ಲ ಜನ್ರೂ ಒಪ್ಪಿದ್ರು. ಯಾಕಂದ್ರೆ ಅದು ಅವ್ರಿಗೆಲ್ಲ ಸರಿ ಅನಿಸ್ತು.  ಹಾಗಾಗಿ ದಾವೀದ ಕಿರ್ಯತ್‌-ಯಾರೀಮಿಂದ+ ಸತ್ಯ ದೇವರ ಮಂಜೂಷವನ್ನ ತರೋಕೆ ಈಜಿಪ್ಟಿನ ನದಿಯಿಂದ* ಹಿಡಿದು ಲೆಬೋ-ಹಾಮಾತಿನ ತನಕ*+ ಇದ್ದ ಎಲ್ಲ ಇಸ್ರಾಯೇಲ್ಯರನ್ನ ಒಟ್ಟುಸೇರಿಸಿದ.  ಕೆರೂಬಿಯರ ಮೇಲೆ* ಕೂತಿರೋ ಸತ್ಯ ದೇವರ ಮಂಜೂಷವನ್ನ+ ಅಂದ್ರೆ ಜನ್ರು ಯಾವುದ್ರ ಮುಂದೆ ನಿಂತು ಯೆಹೋವನ ಹೆಸ್ರಲ್ಲಿ ಪ್ರಾರ್ಥನೆ ಮಾಡ್ತಿದ್ರೋ ಆ ಮಂಜೂಷವನ್ನ ಯೆಹೂದಕ್ಕೆ ಸೇರಿದ ಬಾಳಾ+ ಅನ್ನೋ ಜಾಗ ಅಂದ್ರೆ ಕಿರ್ಯತ್‌-ಯಾರೀಮಿಂದ ತಗೊಂಡು ಬರೋಕೆ ದಾವೀದ ಮತ್ತು ಇಸ್ರಾಯೇಲ್ಯರೆಲ್ಲ ಅಲ್ಲಿಗೆ ಹೋದ್ರು.  ಅವರು ಸತ್ಯ ದೇವರ ಮಂಜೂಷವನ್ನ ಅಬೀನಾದಾಬನ ಮನೆಯಿಂದ ತಗೊಂಡು ಬರೋಕೆ ಒಂದು ಹೊಸ ಬಂಡಿ ತಂದ್ರು.+ ಆ ಬಂಡಿಯನ್ನ ಉಜ್ಜ, ಅಹಿಯೋವ ಮುನ್ನಡಿಸ್ತಿದ್ರು.+  ದಾವೀದ, ಎಲ್ಲ ಇಸ್ರಾಯೇಲ್ಯರು ಹಾಡು ಹಾಡ್ತಾ, ತಂತಿವಾದ್ಯಗಳನ್ನ, ದಮ್ಮಡಿಗಳನ್ನ,+ ಝಲ್ಲರಿಗಳನ್ನ ಬಾರಿಸ್ತಾ,+ ತುತ್ತೂರಿಗಳನ್ನ+ ಊದ್ತಾ ತಮ್ಮೆಲ್ಲ ಶಕ್ತಿಯಿಂದ ಸತ್ಯ ದೇವರ ಮುಂದೆ ಸಂತೋಷಪಡ್ತಿದ್ರು.  ಆದ್ರೆ ಅವರು ಕೀದೋನನ ಕಣಕ್ಕೆ ಬಂದಾಗ ಎತ್ತುಗಳು ಬಂಡಿಯನ್ನ ಇನ್ನೇನು ಮಗುಚಿ ಹಾಕುತ್ತೆ ಅನ್ನುವಾಗ ಉಜ್ಜ ಸತ್ಯ ದೇವರ ಮಂಜೂಷದ ಕಡೆಗೆ ಕೈಚಾಚಿ ಹಿಡಿದ. 10  ಆಗ ಉಜ್ಜನ ಮೇಲೆ ಯೆಹೋವನಿಗೆ ತುಂಬ ಕೋಪ ಬಂತು. ಅವನು ಕೈಚಾಚಿ ಮಂಜೂಷವನ್ನ ಹಿಡಿದಿದ್ರಿಂದ ದೇವರು ಅವನನ್ನ ಅಲ್ಲೇ ಕೊಂದುಬಿಟ್ಟನು.+ ದೇವರ ಮುಂದೆನೇ ಉಜ್ಜ ಸತ್ತುಹೋದ.+ 11  ಯೆಹೋವನ ಕೋಪ ಉಜ್ಜನ ಮೇಲೆ ಬಂದಿದ್ರಿಂದ ದಾವೀದನಿಗೆ ಸಿಟ್ಟು ಬಂತು.* ಹಾಗಾಗಿ ಆ ಜಾಗವನ್ನ ಇವತ್ತಿಗೂ ಪೆರೆಚ್‌-ಉಜ್ಜ* ಅಂತ ಕರಿತಾರೆ. 12  ಆ ದಿನ ದಾವೀದ ಸತ್ಯ ದೇವರಿಗೆ ಹೆದರಿ “ಸತ್ಯ ದೇವರ ಮಂಜೂಷವನ್ನ ನಾನು ಹೇಗೆ ತಗೊಂಡು ಹೋಗ್ಲಿ?”+ ಅಂದ. 13  ಅವನು ತಾನಿದ್ದ ದಾವೀದಪಟ್ಟಣಕ್ಕೆ ಮಂಜೂಷವನ್ನ ತಗೊಂಡು ಹೋಗಲಿಲ್ಲ. ಅದನ್ನ ಗಿತ್ತೀಯನಾದ ಓಬೇದೆದೋಮನ ಮನೆಗೆ ಕಳಿಸ್ಕೊಟ್ಟ. 14  ಸತ್ಯ ದೇವರ ಮಂಜೂಷ ಮೂರು ತಿಂಗಳು ಗಿತ್ತೀಯನಾದ ಓಬೇದೆದೋಮನ ಮನೆಯಲ್ಲೇ ಇತ್ತು. ಯೆಹೋವ ಓಬೇದೆದೋಮನನ್ನ, ಅವನಿಗಿದ್ದ ಎಲ್ಲವನ್ನ ಆಶೀರ್ವದಿಸ್ತಾ ಹೋದನು.+

ಪಾದಟಿಪ್ಪಣಿ

ಅಥವಾ “ಶೀಹೋರಿನಿಂದ.”
ಅಥವಾ “ಹಾಮಾತಿನ ಬಾಗಿಲ ತನಕ.”
ಬಹುಶಃ, “ಮಧ್ಯ.”
ಅಥವಾ “ಬೇಜಾರಾಯ್ತು.”
ಅರ್ಥ “ಉಜ್ಜನ ವಿರುದ್ಧ ಸಿಡಿದ ಕಡುಕೋಪ.”