ಒಂದನೇ ಸಮುವೇಲ 21:1-15

  • ನೋಬಿನಲ್ಲಿ ದಾವೀದ ಪವಿತ್ರ ರೊಟ್ಟಿ ತಿಂದ (1-9)

  • ದಾವೀದ ಗತ್‌ ಊರಲ್ಲಿ ಹುಚ್ಚನ ತರ ನಟಿಸಿದ (10-15)

21  ಆಮೇಲೆ ದಾವೀದ ನೋಬ್‌+ ನಗರದಲ್ಲಿದ್ದ ಪುರೋಹಿತ ಅಹೀಮೆಲೆಕನ ಹತ್ರ ಬಂದ. ಅಹೀಮೆಲೆಕ ದಾವೀದನನ್ನ ಭೇಟಿಯಾದಾಗ ಭಯದಿಂದ ನಡುಗ್ತಾ “ನಿನ್ನ ಜೊತೆ ಯಾರೂ ಇಲ್ವಲ್ಲಾ, ಒಬ್ಬನೇ ಯಾಕೆ ಬಂದಿದ್ದೀಯಾ?”+ ಅಂತ ಕೇಳಿದ.  ಅದಕ್ಕೆ ದಾವೀದ ಪುರೋಹಿತ ಅಹೀಮೆಲೆಕನಿಗೆ “ರಾಜ ನನಗೆ ಒಂದು ಕೆಲಸ ಕೊಟ್ಟು ‘ನಾನು ನಿನ್ನನ್ನ ಕಳಿಸ್ತಿರೋ ಈ ಕೆಲಸದ ಬಗ್ಗೆ, ನಿನಗೆ ಕೊಟ್ಟಿರೋ ಸೂಚನೆಗಳ ಬಗ್ಗೆ ಯಾರಿಗೂ ಹೇಳಬಾರದು’ ಅಂತ ಹೇಳಿದ್ದಾನೆ. ನನ್ನ ಯುವಕರಿಗೆ ಒಂದು ಸ್ಥಳಕ್ಕೆ ಬರೋಕೆ ಹೇಳಿದ್ದೀನಿ. ಅಲ್ಲಿ ಅವ್ರನ್ನ ಭೇಟಿ ಆಗ್ತೀನಿ.  ನಿನ್ನ ಹತ್ರ ಐದು ರೊಟ್ಟಿಗಳಿದ್ರೆ ನನಗೆ ಕೊಡು ಅಥವಾ ಬೇರೆ ಏನೇ ಇದ್ರೂ ಕೊಡು” ಅಂದ.  ಆದ್ರೆ ಪುರೋಹಿತ ದಾವೀದನಿಗೆ “ನನ್ನ ಹತ್ರ ಮಾಮೂಲಿ ರೊಟ್ಟಿ ಇಲ್ಲ. ಪವಿತ್ರ ರೊಟ್ಟಿ ಮಾತ್ರ ಇದೆ.+ ಯುವಕರು ಸ್ತ್ರೀಯರನ್ನ ದೂರ ಇಟ್ಟಿರೋದಾದ್ರೆ*+ ಮಾತ್ರ ಅವರು ತಿನ್ನಬಹುದು” ಅಂದ.  ದಾವೀದ ಪುರೋಹಿತನಿಗೆ “ನಾವು ಈ ಮುಂಚೆ ಯುದ್ಧಕ್ಕೆ ಹೋದಾಗೆಲ್ಲ ಹೇಗೆ ಸ್ತ್ರೀಯರಿಂದ ದೂರ ಇದ್ವೋ ಈಗ್ಲೂ ಹಾಗೇ ದೂರ ಇದ್ದೀವಿ.+ ಸಾಧಾರಣ ಕೆಲಸದಲ್ಲೇ ಯುವಕರು ತಮ್ಮ ದೇಹಗಳನ್ನ ಶುದ್ಧವಾಗಿ ಇಟ್ಕೊಂಡಿರುವಾಗ ಇವತ್ತು ಇನ್ನೆಷ್ಟು ಶುದ್ಧವಾಗಿ ಇಟ್ಕೊಂಡಿರಬೇಕು!” ಅಂದ.  ಹಾಗಾಗಿ ಪುರೋಹಿತ ಅವನಿಗೆ ಪವಿತ್ರ ರೊಟ್ಟಿಯನ್ನೇ ಕೊಟ್ಟ.+ ಯಾಕಂದ್ರೆ ಯೆಹೋವನ ಮುಂದೆ ಇಟ್ಟು ಈಗಾಗ್ಲೇ ತೆಗೆದಿದ್ದ ಆ ರೊಟ್ಟಿ ಬಿಟ್ರೆ ಬೇರೆ ಯಾವ ರೊಟ್ಟಿನೂ ಅಲ್ಲಿ ಇರಲಿಲ್ಲ. ಆ ರೊಟ್ಟಿಯನ್ನ ಅದೇ ದಿನ ತೆಗೆದು ಹೊಸ ಪವಿತ್ರ ರೊಟ್ಟಿಯನ್ನ ಇಟ್ಟಿದ್ರು.  ಅವತ್ತು ಸೌಲನ ಸೇವಕನೊಬ್ಬ ಸಹ ಅಲ್ಲಿದ್ದ. ಏನೋ ಕಾರಣದಿಂದ ಅವನು ಯೆಹೋವನ ಆಲಯದಲ್ಲಿ ಉಳ್ಕೊಂಡಿದ್ದ. ಅವನ ಹೆಸ್ರು ದೋಯೇಗ.+ ಎದೋಮ್ಯನಾಗಿದ್ದ+ ಅವನು ಸೌಲನ ಕುರುಬರ ಮುಖ್ಯಸ್ಥನಾಗಿದ್ದ.  ಆಮೇಲೆ ದಾವೀದ ಅಹೀಮೆಲೆಕನಿಗೆ “ನಿನ್ನ ಹತ್ರ ಈಟಿ ಅಥವಾ ಕತ್ತಿ ಇದ್ಯಾ? ರಾಜ ಕೊಟ್ಟಿದ್ದು ತುಂಬ ತುರ್ತಿನ ಕೆಲಸ ಆಗಿದ್ರಿಂದ ನಾನು ಕತ್ತಿಯಾಗ್ಲಿ ಆಯುಧಗಳಾಗ್ಲಿ ತಗೊಂಡು ಬರೋಕ್ಕಾಗಲಿಲ್ಲ” ಅಂದ.  ಅದಕ್ಕೆ ಪುರೋಹಿತ “ಏಲಾ ಕಣಿವೆಯಲ್ಲಿ+ ನೀನು ಕೊಂದು ಹಾಕಿದ ಫಿಲಿಷ್ಟಿಯನಾದ ಗೊಲ್ಯಾತನ ಕತ್ತಿ+ ಇಲ್ಲಿದೆ. ಅದನ್ನ ಬಟ್ಟೆಯಿಂದ ಸುತ್ತಿ ಏಫೋದಿನ+ ಹಿಂಭಾಗದಲ್ಲಿ ಇಡಲಾಗಿದೆ. ಅದನ್ನ ತಗೊ. ಇಲ್ಲಿರೋದು ಅದೊಂದೇ” ಅಂದ. ಆಗ ದಾವೀದ “ಅದಕ್ಕಿಂತ ಒಳ್ಳೇ ಆಯುಧ ಬೇರೆ ಯಾವುದೂ ಇಲ್ಲ. ಅದನ್ನೇ ಕೊಡು” ಅಂದ. 10  ಸೌಲನಿಂದ ಓಡಿ ಬಂದಿದ್ದ ದಾವೀದ, ಅವತ್ತು ಪ್ರಯಾಣ ಮುಂದುವರಿಸಿ+ ಗತ್‌+ ಊರಿನ ರಾಜ ಆಕೀಷನ ಹತ್ರ ಬಂದ. 11  ಆಕೀಷನ ಸೇವಕರು “ಇವನು ಆ ದೇಶದ ರಾಜ ದಾವೀದ ಅಲ್ವಾ? ಅಲ್ಲಿನ ಜನರು ಹಾಡ್ತಾ ಕುಣಿತಾ,‘ಸೌಲ ಸಾವಿರಗಟ್ಟಲೆ ಶತ್ರುಗಳನ್ನ ಕೊಂದ,ದಾವೀದ ಹತ್ತು ಸಾವಿರಗಟ್ಟಲೆ ಶತ್ರುಗಳನ್ನ ಕೊಂದ’+ ಅಂತ ಹೇಳಿದ್ದು ಇವನ ಬಗ್ಗೆ ಅಲ್ವಾ?” ಅಂತ ರಾಜನಿಗೆ ಹೇಳಿದ್ರು. 12  ಅವರ ಈ ಮಾತುಗಳ ಬಗ್ಗೆ ದಾವೀದ ಚೆನ್ನಾಗಿ ಯೋಚಿಸಿದ. ಗತ್‌ ಊರಿನ ರಾಜ ಆಕೀಷನಿಗೆ ತುಂಬ ಹೆದರಿದ.+ 13  ಹಾಗಾಗಿ ದಾವೀದ ಬುದ್ಧಿ ಇಲ್ಲದವನ ತರ ತೋರಿಸ್ಕೊಳ್ತಾ ಅವ್ರ ಮಧ್ಯ* ಹುಚ್ಚನ ತರ ನಟಿಸಿದ.+ ಅವನು ಬಾಗಿಲುಗಳನ್ನ ಕೆರೆಯುತ್ತಾ ತನ್ನ ಗಡ್ಡದ ಮೇಲೆ ಜೊಲ್ಲು ಸುರಿಸ್ತಿದ್ದ. 14  ಕೊನೆಗೆ ಆಕೀಷ ತನ್ನ ಸೇವಕರಿಗೆ “ಇವನೊಬ್ಬ ಹುಚ್ಚ ಅಂತ ನಿಮಗೆ ಕಾಣ್ತಿಲ್ವಾ? ಇವನನ್ನ ನನ್ನ ಹತ್ರ ಯಾಕೆ ಕರ್ಕೊಂಡು ಬಂದಿದ್ದೀರಾ? 15  ನನ್ನ ಹತ್ರ ಹುಚ್ಚರು ಕಡಿಮೆ ಇದ್ದಾರೆ ಅಂತನಾ? ಇವನನ್ನ ನನ್ನ ಮನೆಗೆ ಕರ್ಕೊಂಡು ಹೋಗಬೇಕಾ?” ಅಂತ ಕೇಳಿದ.

ಪಾದಟಿಪ್ಪಣಿ

ಅಥವಾ “ಯುವಕರು ಲೈಂಗಿಕ ಸಂಪರ್ಕದಿಂದ ದೂರ ಇರೋದಾದ್ರೆ.”
ಅಕ್ಷ. “ಅವ್ರ ಕೈಯಲ್ಲಿ.”