ಒಂದನೇ ಸಮುವೇಲ 4:1-22

  • ಮಂಜೂಷ ಫಿಲಿಷ್ಟಿಯರ ವಶವಾಯ್ತು (1-11)

  • ಏಲಿ ಮತ್ತು ಅವನ ಮಕ್ಕಳ ಮರಣ (12-22)

4  ದೇವರು ಸಮುವೇಲನ ಮೂಲಕ ಇಡೀ ಇಸ್ರಾಯೇಲಿಗೆ ಸಂದೇಶ ಕೊಡ್ತಾ ಇದ್ದನು. ಆಮೇಲೆ ಇಸ್ರಾಯೇಲ್ಯರು ಫಿಲಿಷ್ಟಿಯರ ವಿರುದ್ಧ ಯುದ್ಧಕ್ಕೆ ಹೋದ್ರು. ಅವರು ಎಬೆನೆಜೆರಿನ ಹತ್ರ ಪಾಳೆಯ ಹಾಕಿ, ಫಿಲಿಷ್ಟಿಯರು ಅಫೇಕಿನಲ್ಲಿ ಪಾಳೆಯ ಹಾಕಿದ್ರು.  ಫಿಲಿಷ್ಟಿಯರು ಇಸ್ರಾಯೇಲ್ಯರ ವಿರುದ್ಧ ಸೈನ್ಯ ಕಟ್ಟಿದ್ರು. ದೊಡ್ಡ ಯುದ್ಧ ನಡಿತು. ಯುದ್ಧದಲ್ಲಿ ಇಸ್ರಾಯೇಲ್ಯರು ಸೋತು ಹೋದ್ರು. ಫಿಲಿಷ್ಟಿಯರು ಯುದ್ಧ ಭೂಮಿಯಲ್ಲಿ ಸುಮಾರು 4,000 ಗಂಡಸ್ರನ್ನ ಕೊಂದ್ರು.  ಜನ್ರು ಪಾಳೆಯಕ್ಕೆ ವಾಪಸ್‌ ಬಂದಾಗ ಇಸ್ರಾಯೇಲಿನ ಹಿರಿಯರು “ಈ ದಿನ ನಾವು ಫಿಲಿಷ್ಟಿಯರಿಂದ ಸೋಲೋ ತರ ಯೆಹೋವ ಯಾಕೆ ಬಿಟ್ಟನು?*+ ನಾವು ಶೀಲೋನಿಂದ ಯೆಹೋವನ ಒಪ್ಪಂದದ ಮಂಜೂಷ ತಗೊಂಡು ಬರೋಣ.+ ಅದು ನಮ್ಮ ಜೊತೆ ಇದ್ರೆ ಶತ್ರುಗಳ ಕೈಯಿಂದ ನಮ್ಮನ್ನ ಕಾಪಾಡುತ್ತೆ” ಅಂದ್ರು.  ಆಗ ಜನ ಸ್ವಲ್ಪ ಗಂಡಸ್ರನ್ನ ಶೀಲೋಗೆ ಕಳಿಸಿದ್ರು. ಕೆರೂಬಿಯರ ಮೇಲೆ* ಕೂತಿರೋ+ ಸೈನ್ಯಗಳ ದೇವರಾದ ಯೆಹೋವನ ಒಪ್ಪಂದದ ಮಂಜೂಷನ ಅಲ್ಲಿಂದ ಅವರು ಎತ್ಕೊಂಡು ಬಂದ್ರು. ಏಲಿಯ ಇಬ್ರು ಮಕ್ಕಳು ಹೊಫ್ನಿ ಮತ್ತು ಫೀನೆಹಾಸ+ ಕೂಡ ಸತ್ಯ ದೇವರ ಒಪ್ಪಂದದ ಮಂಜೂಷದ ಜೊತೆ ಬಂದ್ರು.  ಯೆಹೋವನ ಒಪ್ಪಂದದ ಮಂಜೂಷ ಪಾಳೆಯದ ಒಳಗೆ ಬಂದ ತಕ್ಷಣ ಇಸ್ರಾಯೇಲ್ಯರೆಲ್ಲ ಜೋರಾಗಿ ಕೂಗಿದ್ರು. ಆಗ ಭೂಮಿ ನಡುಗ್ತು.  ಕೂಗಿದ ಶಬ್ದ ಫಿಲಿಷ್ಟಿಯರ ಕಿವಿಗೆ ಬಿದ್ದಾಗ “ಇಬ್ರಿಯರ ಪಾಳೆಯದಲ್ಲಿ ಯಾಕೆ ಹಾಗೆ ಕೂಗಾಡ್ತಿದ್ದಾರೆ?” ಅಂತ ಮಾತಾಡ್ಕೊಂಡ್ರು. ಯೆಹೋವನ ಮಂಜೂಷ ಪಾಳೆಯದ ಒಳಗೆ ಬಂದಿದೆ ಅಂತ ಕೊನೆಗೂ ಅವ್ರಿಗೆ ಗೊತ್ತಾಯ್ತು.  ಫಿಲಿಷ್ಟಿಯರು ಹೆದರಿ “ದೇವರು ಪಾಳೆಯದ ಒಳಗೆ ಬಂದಿದ್ದಾನೆ!”+ ಅನ್ನುತ್ತಾ “ಇದ್ರಿಂದ ನಮಗೆ ನಿಜವಾಗ್ಲೂ ಒಳ್ಳೇದಾಗಲ್ಲ. ಯಾಕಂದ್ರೆ ಈ ತರ ಯಾವತ್ತೂ ಆಗಿರಲಿಲ್ಲ!  ಇದ್ರಿಂದ ನಮಗೆ ಕೆಟ್ಟದಾಗುತ್ತೆ! ತುಂಬ ಶಕ್ತಿ ಇರೋ ಈ ದೇವರ ಕೈಯಿಂದ ನಮ್ಮನ್ನ ಕಾಪಾಡೋರು ಯಾರು? ಕಾಡಲ್ಲಿ ಈಜಿಪ್ಟನ್ನ ಎಲ್ಲ ರೀತಿಯ ಕಷ್ಟಗಳಿಂದ ಸಾಯಿಸಿದವನು ಈ ದೇವರೇ.+  ಫಿಲಿಷ್ಟಿಯರೇ ಧೈರ್ಯವಾಗಿರಿ, ನಿಮ್ಮ ಧೈರ್ಯ ತೋರಿಸಿ. ಇಲ್ಲಾಂದ್ರೆ ಇಬ್ರಿಯರು ನಿಮಗೆ ಸೇವೆ ಮಾಡಿರೋ ತರ ನೀವು ಅವ್ರಿಗೆ ಸೇವೆ ಮಾಡೋ ಪರಿಸ್ಥಿತಿ ಬರುತ್ತೆ.+ ಹಾಗಾಗಿ ಗಂಡಸ್ರ ತರ ಯುದ್ಧ ಮಾಡಿ” ಅಂದ್ರು. 10  ಹೀಗೆ ಫಿಲಿಷ್ಟಿಯರು ಯುದ್ಧ ಮಾಡಿ ಇಸ್ರಾಯೇಲ್ಯರನ್ನ ಸೋಲಿಸಿದ್ರು.+ ಪ್ರತಿಯೊಬ್ಬ ಇಸ್ರಾಯೇಲ್ಯನು ತನ್ನ ಡೇರೆಗೆ ಓಡಿಹೋದ. ತುಂಬ ಜನ ಸತ್ತು ಹೋದ್ರು. ಇಸ್ರಾಯೇಲ್ಯರ ಕಡೆಯಲ್ಲಿ ಇದ್ದ 30,000 ಕಾಲಾಳುಗಳು ಸತ್ರು. 11  ಅಷ್ಟೇ ಅಲ್ಲ ದೇವರ ಮಂಜೂಷ ಫಿಲಿಷ್ಟಿಯರ ವಶ ಆಯ್ತು. ಏಲಿಯ ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸ ಇಬ್ರೂ ಸತ್ತೋದ್ರು.+ 12  ಅದೇ ದಿನ ಬೆನ್ಯಾಮೀನ್‌ ಕುಲದ ವ್ಯಕ್ತಿಯೊಬ್ಬ ಬಟ್ಟೆ ಹರ್ಕೊಂಡು, ತಲೆ ಮೇಲೆ ಮಣ್ಣು ಹಾಕಿ+ ರಣರಂಗದಿಂದ ಶೀಲೋಗೆ ಓಡಿ ಬಂದ. 13  ಆ ವ್ಯಕ್ತಿ ಅಲ್ಲಿಗೆ ಬಂದಾಗ ಏಲಿ ದಾರಿ ಬದಿಯಲ್ಲಿದ್ದ ಕುರ್ಚಿಯಲ್ಲಿ ಕೂತು ನೋಡ್ತಾ ಇದ್ದ. ಯಾಕಂದ್ರೆ ಸತ್ಯ ದೇವರ ಮಂಜೂಷದ ಬಗ್ಗೆ ಅವನ ಹೃದಯ ಕಳವಳದಿಂದ ಬಡ್ಕೊಳ್ತಿತ್ತು.+ ಓಡಿ ಬಂದ ಆ ವ್ಯಕ್ತಿ ನಡೆದ ಘಟನೆ ಬಗ್ಗೆ ಹೇಳೋಕೆ ಪಟ್ಟಣದ ಒಳಗೆ ಹೋದ. ಪಟ್ಟಣದ ಜನ ಈ ಘಟನೆ ಬಗ್ಗೆ ಕೇಳಿ ಜೋರಾಗಿ ಅಳೋಕೆ ಶುರು ಮಾಡಿದ್ರು. 14  ಅವ್ರ ಗೋಳಾಟ ಕೇಳಿಸ್ಕೊಂಡ ಏಲಿ “ಯಾಕಿಷ್ಟು ಅಳ್ತಾ ಇದ್ದಾರೆ?” ಅಂತ ಕೇಳಿದ. ಆಗ ಅದೇ ವ್ಯಕ್ತಿ ಓಡೋಡಿ ಬಂದು ನಡೆದ ಘಟನೆಯನ್ನ ಏಲಿಗೆ ಹೇಳಿದ. 15  (ಆಗ ಏಲಿಗೆ 98 ವರ್ಷ ವಯಸ್ಸಾಗಿತ್ತು. ಅವನ ಕಣ್ಣುಗಳು ಮಂಜಾಗಿದ್ರಿಂದ ಅವನಿಗೆ ಕಾಣಿಸ್ತಿರಲಿಲ್ಲ.)+ 16  ಆ ವ್ಯಕ್ತಿ ಏಲಿಗೆ “ರಣರಂಗದಿಂದ ಬಂದವನು ನಾನೇ. ಇವತ್ತೇ ನಾನು ಅಲ್ಲಿಂದ ಓಡಿ ಬಂದೆ” ಅಂದ. ಅದಕ್ಕೆ ಏಲಿ “ನನ್ನ ಮಗನೇ ಏನಾಯ್ತು?” ಅಂತ ಕೇಳಿದ. 17  ಆಗ ಅವನು “ಇಸ್ರಾಯೇಲ್ಯರು ಫಿಲಿಷ್ಟಿಯರಿಂದ ಸೋತು ಓಡಿ ಹೋಗಿದ್ದಾರೆ. ಜನ್ರ ಮಧ್ಯ ತುಂಬ ದೊಡ್ಡ ಯುದ್ಧ ನಡಿತು.+ ಅದ್ರಲ್ಲಿ ನಿನ್ನ ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸ ಪ್ರಾಣ ಕಳ್ಕೊಂಡ್ರು.+ ಸತ್ಯ ದೇವರ ಮಂಜೂಷ ಶತ್ರುಗಳ ವಶವಾಯ್ತು”+ ಅಂದ. 18  ಸತ್ಯ ದೇವರ ಮಂಜೂಷದ ಬಗ್ಗೆ ಆ ವ್ಯಕ್ತಿ ಹೇಳಿದ ತಕ್ಷಣ ಏಲಿ ಬಾಗಿಲು ಪಕ್ಕದಲ್ಲಿದ್ದ ತನ್ನ ಕುರ್ಚಿಯಿಂದ ಹಿಂದಕ್ಕೆ ಬಿದ್ದು ಕತ್ತುಮುರಿದು ಸತ್ತುಹೋದ. ಯಾಕಂದ್ರೆ ಅವನಿಗೆ ತುಂಬ ವಯಸ್ಸಾಗಿತ್ತು, ತುಂಬ ದಪ್ಪ ಇದ್ದ. ಅವನು 40 ವರ್ಷ ಇಸ್ರಾಯೇಲ್ಯರಿಗೆ ನ್ಯಾಯತೀರಿಸಿದ. 19  ಅವನ ಸೊಸೆ ಅಂದ್ರೆ ಫೀನೆಹಾಸನ ಹೆಂಡತಿ ತುಂಬು ಗರ್ಭಿಣಿ ಆಗಿದ್ದಳು. ಸತ್ಯ ದೇವರ ಮಂಜೂಷವನ್ನ ವಶ ಮಾಡ್ಕೊಂಡಿರೋ ವಿಷ್ಯವನ್ನ, ಅವಳ ಮಾವ ಮತ್ತು ಗಂಡ ತೀರಿಹೋದ ವಿಷ್ಯವನ್ನ ಕೇಳಿಸ್ಕೊಂಡಾಗ ಅವಳಿಗೆ ಹೆರಿಗೆ ನೋವು ಬಂದು, ಮಗು ಆಯ್ತು. 20  ಇನ್ನೇನು ಅವಳ ಪ್ರಾಣ ಹೋಗುತ್ತೆ ಅನ್ನುವಾಗ ಅವಳ ಪಕ್ಕದಲ್ಲಿ ನಿಂತಿದ್ದ ಸ್ತ್ರೀಯರು “ಹೆದರಬೇಡ. ನಿನಗೊಬ್ಬ ಮಗ ಹುಟ್ಟಿದ್ದಾನೆ” ಅಂದ್ರು. ಆದ್ರೆ ಅವಳು ಅವ್ರ ಮಾತಿಗೆ ಉತ್ತರ ಕೊಡ್ಲೂ ಇಲ್ಲ, ಗಮನ ಕೊಡ್ಲೂ ಇಲ್ಲ.* 21  ಆದ್ರೆ ಸತ್ಯ ದೇವರ ಮಂಜೂಷ ಶತ್ರು ವಶ ಆಗಿದ್ದಕ್ಕಾಗಿ, ತನ್ನ ಮಾವ ಮತ್ತು ಗಂಡ ತೀರಿಹೋಗಿದ್ದಕ್ಕಾಗಿ,+ “ಇಸ್ರಾಯೇಲಿನ ಗೌರವ ಮಣ್ಣುಪಾಲಾಯ್ತು”+ ಅಂತ ಹೇಳಿ ಆ ಮಗುಗೆ ಈಕಾಬೋದ್‌*+ ಅಂತ ಹೆಸ್ರು ಇಟ್ಟಳು. 22  “ಸತ್ಯ ದೇವರ ಮಂಜೂಷ ಶತ್ರು ವಶ ಆಗಿದ್ರಿಂದ ಇಸ್ರಾಯೇಲಿನ ಗೌರವ ಮಣ್ಣುಪಾಲಾಯ್ತು”+ ಅಂದಳು.

ಪಾದಟಿಪ್ಪಣಿ

ಅಕ್ಷ. “ಯೆಹೋವ ಯಾಕೆ ನಮ್ಮನ್ನ ಸೋಲಿಸಿದನು?”
ಬಹುಶಃ, “ಮಧ್ಯ.”
ಅಥವಾ “ಅವಳ ಮನಸ್ಸನ್ನ ಅದ್ರ ಕಡೆ ಕೊಡಲಿಲ್ಲ.”
ಅರ್ಥ “ಗೌರವ ಎಲ್ಲಿ?”