ಒಂದನೇ ಸಮುವೇಲ 6:1-21

  • ಮಂಜೂಷ ಇಸ್ರಾಯೇಲ್ಯರಿಗೆ ವಾಪಸ್‌ (1-21)

6  ಯೆಹೋವನ ಮಂಜೂಷ+ ಏಳು ತಿಂಗಳು ಫಿಲಿಷ್ಟಿಯರ ಪ್ರಾಂತ್ಯದಲ್ಲಿತ್ತು.  ಫಿಲಿಷ್ಟಿಯರು ತಮ್ಮ ಪುರೋಹಿತರನ್ನ, ಕಣಿ ಹೇಳುವವರನ್ನ+ ಕರೆಸಿ “ಯೆಹೋವನ ಮಂಜೂಷವನ್ನ ಏನು ಮಾಡೋಣ? ಅದನ್ನ ಅದ್ರ ಜಾಗಕ್ಕೆ ಹೇಗೆ ಕಳಿಸೋದು ಅಂತ ನಮಗೆ ಹೇಳಿ” ಅಂತ ಕೇಳಿದ್ರು.  ಅದಕ್ಕೆ ಅವರು “ಇಸ್ರಾಯೇಲ್‌ ದೇವರಾದ ಯೆಹೋವನ ಮಂಜೂಷವನ್ನ ನೀವು ವಾಪಸ್‌ ಕಳಿಸೋದಾದ್ರೆ ಬರಿಗೈಯಲ್ಲಿ ಕಳಿಸಬೇಡಿ. ದೋಷಪರಿಹಾರಕ ಬಲಿ ಜೊತೆ ಅದನ್ನ ಆತನಿಗೆ ವಾಪಸ್‌ ಕೊಡಿ.+ ಹಾಗೆ ಮಾಡಿದ್ರೆ ನಿಮಗೆ ವಾಸಿ ಆಗುತ್ತೆ. ಆತನು ನಿಮಗೆ ಇನ್ನೂ ಯಾಕೆ ಶಿಕ್ಷೆ ಕೊಡ್ತಿದ್ದಾನೆ ಅಂತ ಗೊತ್ತಾಗುತ್ತೆ” ಅಂದ್ರು.  ಆಗ ಫಿಲಿಷ್ಟಿಯರು “ದೋಷಪರಿಹಾರಕ ಬಲಿಯಾಗಿ ನಾವು ಆತನಿಗೆ ಏನು ಕಳಿಸಬೇಕು?” ಅಂತ ಕೇಳಿದ್ರು. ಅದಕ್ಕೆ ಅವರು “ನಿಮಗೂ, ನಿಮ್ಮ ಪ್ರಭುಗಳಿಗೂ ಒಂದೇ ತರದ ಶಿಕ್ಷೆ ಸಿಕ್ಕಿದೆ. ಹಾಗಾಗಿ ಫಿಲಿಷ್ಟಿಯರ ಪ್ರಭುಗಳ ಸಂಖ್ಯೆಗೆ ಸರಿಯಾಗಿ+ ಚಿನ್ನದ ಐದು ಮೂಲವ್ಯಾಧಿಯ ಗಡ್ಡೆಗಳನ್ನ, ಚಿನ್ನದ ಐದು ಇಲಿಗಳನ್ನ ಕಳಿಸ್ಕೊಡಿ.  ನಿಮ್ಮ ದೇಶವನ್ನ ಹಾಳು ಮಾಡ್ತಿರೋ ಮೂಲವ್ಯಾಧಿಯ ಗಡ್ಡೆಗಳ, ಇಲಿಗಳ ಆಕೃತಿಗಳನ್ನ ನೀವು ಮಾಡಿಸಬೇಕು.+ ಇಸ್ರಾಯೇಲ್‌ ದೇವ್ರಿಗೆ ಗೌರವ ಕೊಡಬೇಕು. ಆಗ ಆತನು ನಿಮಗೆ, ನಿಮ್ಮ ದೇವ್ರಿಗೆ, ನಿಮ್ಮ ದೇಶಕ್ಕೆ ಕೊಡ್ತಿರೋ ಶಿಕ್ಷೆಯನ್ನ ನಿಲ್ಲಿಸಬಹುದು.+  ಈಜಿಪ್ಟಿನವರು, ಫರೋಹ ತಮ್ಮ ಹೃದಯಗಳನ್ನ ಕಲ್ಲು ಮಾಡ್ಕೊಂಡ+ ಹಾಗೇ ನೀವ್ಯಾಕೆ ನಿಮ್ಮ ಹೃದಯ ಕಲ್ಲು ಮಾಡ್ಕೊಂಡಿದ್ದೀರಾ? ದೇವರು ಅವ್ರಿಗೆ ಚೆನ್ನಾಗಿ ಶಿಕ್ಷೆ ಕೊಟ್ಟಾಗ+ ಅವರು ಇಸ್ರಾಯೇಲ್ಯರನ್ನ ಕಳಿಸ್ಲೇಬೇಕಾಯ್ತು. ಅವರು ಈಜಿಪ್ಟನ್ನ ಬಿಟ್ಟು ಬಂದ್ರು.+  ಈಗ ನೀವು ಒಂದು ಹೊಸ ಬಂಡಿ ಮಾಡಿಸಿ. ಕರುಗಳಿರೋ, ಇಲ್ಲಿ ತನಕ ನೊಗವನ್ನ ಹೊರದಿರೋ ಎರಡು ಹಸುಗಳನ್ನ ತಗೊಂಡು ಬನ್ನಿ. ಆ ಹಸುಗಳನ್ನ ಬಂಡಿಗೆ ಕಟ್ಟಿ. ಆದ್ರೆ ಅವುಗಳ ಕರುಗಳನ್ನ ಮನೆಗೆ ಕರ್ಕೊಂಡು ಹೋಗಿ.  ಯೆಹೋವನ ಮಂಜೂಷ ತಗೊಂಡು ಬಂಡಿಯಲ್ಲಿಡಿ. ದೋಷಪರಿಹಾರಕ ಬಲಿಯಾಗಿ ನೀವು ಆತನಿಗೆ ಕಳಿಸಬೇಕಂತಿರೋ ಚಿನ್ನದ ವಸ್ತುಗಳನ್ನ ಒಂದು ಪೆಟ್ಟಿಗೆಯಲ್ಲಿಟ್ಟು ಮಂಜೂಷದ ಪಕ್ಕದಲ್ಲಿಡಿ.+ ಆಮೇಲೆ ಅದನ್ನ ಕಳಿಸಿಬಿಡಿ.  ಅದು ಯಾವ ಕಡೆ ಹೋಗುತ್ತೆ ಅಂತ ನೋಡ್ತಾ ಇರಿ. ಅದು ತನ್ನ ಜಾಗಕ್ಕೆ ಅಂದ್ರೆ ಬೇತ್‌-ಷೆಮೆಷಿಗೆ+ ಹೋಗೋ ದಾರೀಲಿ ಹೋದ್ರೆ ಈ ದೊಡ್ಡ ಕಷ್ಟವನ್ನ ತಂದವನು ಇಸ್ರಾಯೇಲ್‌ ದೇವರೇ ಅಂತ ಗೊತ್ತಾಗುತ್ತೆ. ಅದು ಹೋಗದಿದ್ರೆ ನಮಗೆ ಶಿಕ್ಷೆ ಕೊಟ್ಟವನು ಆತನಲ್ಲ, ಇದೆಲ್ಲ ಆಕಸ್ಮಿಕವಾಗಿ ಆಯ್ತು ಅಂತ ನಮಗೆ ಗೊತ್ತಾಗುತ್ತೆ.” 10  ಆಗ ಜನ ಅವರು ಹೇಳಿದ ಹಾಗೇ ಮಾಡಿದ್ರು. ಅವರು ಕರುಗಳಿರೋ ಎರಡು ಹಸುಗಳನ್ನ ತಗೊಂಡ್ರು. ಅವುಗಳನ್ನ ಬಂಡಿಗೆ ಕಟ್ಟಿ ಕರುಗಳನ್ನ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ರು. 11  ಆಮೇಲೆ ಅವರು ಯೆಹೋವನ ಮಂಜೂಷವನ್ನ ಬಂಡಿಯಲ್ಲಿ ಇಟ್ರು. ಅದ್ರ ಜೊತೆ ಚಿನ್ನದ ಇಲಿಗಳಿದ್ದ, ಅವ್ರ ಮೂಲವ್ಯಾಧಿಯ ಗಡ್ಡೆಗಳ ಚಿನ್ನದ ಆಕೃತಿಗಳಿದ್ದ ಪೆಟ್ಟಿಗೆಯನ್ನ ಇಟ್ರು. 12  ಆ ಹಸುಗಳು ನೇರವಾಗಿ ಬೇತ್‌-ಷೆಮೆಷಿಗೆ+ ಹೋಗೋ ದಾರಿಯಲ್ಲಿ ಹೋದ್ವು. ಅದೇ ಹೆದ್ದಾರಿಯಲ್ಲಿ ಕೂಗುತ್ತಾ ಮುಂದೆ ಹೋದ್ವು. ಅವು ಬಲಕ್ಕಾಗ್ಲಿ ಎಡಕ್ಕಾಗ್ಲಿ ತಿರುಗಲಿಲ್ಲ. ಆ ಹಸುಗಳು ಬೇತ್‌-ಷೆಮೆಷಿನ ಗಡಿಯನ್ನ ತಲುಪೋ ತನಕ ಫಿಲಿಷ್ಟಿಯರ ಪ್ರಭುಗಳು ಅವುಗಳ ಹಿಂದೆನೇ ನಡ್ಕೊಂಡು ಹೋದ್ರು. 13  ಬೇತ್‌-ಷೆಮೆಷಿನ ಜನ ಕಣಿವೆ ಬಯಲಲ್ಲಿ ಗೋದಿ ಬೆಳೆ ಕೊಯ್ತಿದ್ರು. ಅವರು ಕಣ್ಣೆತ್ತಿ ನೋಡಿದಾಗ ಮಂಜೂಷ ಅವ್ರಿಗೆ ಕಾಣಿಸ್ತು. ಅದನ್ನ ನೋಡಿ ಅವ್ರಿಗೆ ತುಂಬ ಖುಷಿಯಾಯ್ತು. 14  ಬಂಡಿ ಬೇತ್‌-ಷೆಮೆಷಿನವನಾದ ಯೆಹೋಶುವನ ಹೊಲಕ್ಕೆ ಬಂದು ದೊಡ್ಡ ಕಲ್ಲಿನ ಹತ್ರ ನಿಲ್ತು. ಆಗ ಅವರು ಬಂಡಿಯ ಕಟ್ಟಿಗೆ ಒಡೆದು ಹಸುಗಳನ್ನ+ ಯೆಹೋವನಿಗೆ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಿದ್ರು. 15  ಲೇವಿಯರು+ ಯೆಹೋವನ ಮಂಜೂಷವನ್ನ, ಚಿನ್ನದ ಆಕೃತಿಗಳಿದ್ದ ಪೆಟ್ಟಿಗೆಯನ್ನ ಕೆಳಗೆ ಇಳಿಸಿ ಅವುಗಳನ್ನ ದೊಡ್ಡ ಕಲ್ಲಿನ ಮೇಲೆ ಇಟ್ರು. ಆ ದಿನ ಬೇತ್‌-ಷೆಮೆಷಿನ+ ಜನ ಯೆಹೋವನಿಗೆ ಸರ್ವಾಂಗಹೋಮ ಬಲಿಗಳನ್ನ, ಬೇರೆ ಬಲಿಗಳನ್ನ ಅರ್ಪಿಸಿದ್ರು. 16  ಇದನ್ನೆಲ್ಲಾ ನೋಡಿದ ಮೇಲೆ ಫಿಲಿಷ್ಟಿಯರ ಐದು ಪ್ರಭುಗಳು ಆ ದಿನಾನೇ ಎಕ್ರೋನಿಗೆ ವಾಪಸ್‌ ಹೋದ್ರು. 17  ಯೆಹೋವನಿಗೆ ದೋಷಪರಿಹಾರಕ ಬಲಿಯಾಗಿ+ ಫಿಲಿಷ್ಟಿಯರು ಅಷ್ಡೋದಿಗಾಗಿ+ ಒಂದು, ಗಾಜಾಗಾಗಿ ಒಂದು, ಅಷ್ಕೆಲೋನಿಗಾಗಿ ಒಂದು, ಗತ್‌ಗಾಗಿ+ ಒಂದು, ಎಕ್ರೋನಿಗಾಗಿ+ ಒಂದು ಅನ್ನೋ ತರ ಮೂಲವ್ಯಾಧಿಯ ಚಿನ್ನದ ಐದು ಗಡ್ಡೆಗಳ ಆಕೃತಿಗಳನ್ನ ಕಳಿಸಿಕೊಟ್ಟಿದ್ರು. 18  ಫಿಲಿಷ್ಟಿಯರ ಐದು ಪ್ರಭುಗಳಿಗೆ ಸೇರಿದ್ದ ಎಲ್ಲ ಪಟ್ಟಣಗಳ ಸಂಖ್ಯೆಗೆ ಸರಿಯಾಗಿ ಚಿನ್ನದ ಇಲಿಗಳನ್ನ ಕಳಿಸಿದ್ರು. ಆ ಪಟ್ಟಣಗಳಲ್ಲಿ ಭದ್ರ ಕೋಟೆಗಳಿದ್ದ ಪಟ್ಟಣಗಳು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿದ್ದ ಹಳ್ಳಿಗಳು ಇದ್ವು. ಯೆಹೋವನ ಮಂಜೂಷವನ್ನ ಇಟ್ಟಿದ್ದ ಆ ದೊಡ್ಡ ಕಲ್ಲು ಬೇತ್‌-ಷೆಮೆಷಿನ ಯೆಹೋಶುವನ ಹೊಲದಲ್ಲಿ ಇವತ್ತಿಗೂ ಹಾಗೇ ಇದೆ. ಅದು ಈ ಘಟನೆಗೆ ಸಾಕ್ಷಿ. 19  ಆದ್ರೆ ದೇವರು ಬೇತ್‌-ಷೆಮೆಷಿನ ಜನ್ರನ್ನ ಸಾಯಿಸಿದನು. ಯಾಕಂದ್ರೆ ಅವರು ಯೆಹೋವನ ಮಂಜೂಷವನ್ನ ದಿಟ್ಟಿಸಿ ನೋಡಿದ್ದರು. ಆತನು ಅವ್ರಲ್ಲಿ 50,070* ಜನ್ರನ್ನ ಸಾಯಿಸಿದನು.+ ಯೆಹೋವ ಭಾರಿ ಸಂಖ್ಯೆಯಲ್ಲಿ ತಮ್ಮವ್ರನ್ನ ಸಾಯಿಸಿದ್ರಿಂದ ಜನ ಗೋಳಾಡೋಕೆ ಶುರು ಮಾಡಿದ್ರು. 20  ಹಾಗಾಗಿ ಬೇತ್‌-ಷೆಮೆಷಿನ ಜನ “ಈ ಪವಿತ್ರ ದೇವರಾಗಿರೋ+ ಯೆಹೋವನ ಮುಂದೆ ಯಾರು ತಾನೇ ನಿಲ್ಲಕಾಗುತ್ತೆ? ಆತನು ನಮ್ಮನ್ನ ಬಿಟ್ಟು ಬೇರೆಯವ್ರ ಹತ್ರ ಹೋಗಬಾರದಾ?”+ ಅಂತ ಹೇಳೋಕೆ ಶುರು ಮಾಡಿದ್ರು. 21  ಅವರು ಸಂದೇಶವಾಹಕರ ಮೂಲಕ ಕಿರ್ಯತ್‌-ಯಾರೀಮಿನಲ್ಲಿ+ ಇರೋವ್ರಿಗೆ “ಯೆಹೋವನ ಮಂಜೂಷವನ್ನ ಫಿಲಿಷ್ಟಿಯರು ವಾಪಸ್‌ ಕೊಟ್ಟಿದ್ದಾರೆ. ನೀವು ಬಂದು ಅದನ್ನ ತಗೊಂಡು ಹೋಗಿ”+ ಅಂತ ಹೇಳಿ ಕಳಿಸಿದ್ರು.

ಪಾದಟಿಪ್ಪಣಿ

ಅಕ್ಷ. “70 ಗಂಡಸ್ರು, 50,000 ಗಂಡಸ್ರು.”