ಎರಡನೇ ಪೂರ್ವಕಾಲವೃತ್ತಾಂತ 36:1-23

  • ಯೆಹೋವಾಹಾಜ ಯೆಹೂದದ ರಾಜನಾದ (1-3)

  • ಯೆಹೋಯಾಕೀಮ ಯೆಹೂದದ ರಾಜನಾದ (4-8)

  • ಯೆಹೋಯಾಖೀನ ಯೆಹೂದದ ರಾಜನಾದ (9, 10)

  • ಚಿದ್ಕೀಯ ಯೆಹೂದದ ರಾಜನಾದ (11-14)

  • ಯೆರೂಸಲೇಮಿನ ನಾಶನ (15-21)

  • ಪುನಃ ಆಲಯ ಕಟ್ಟೋಕೆ ಕೋರೆಷನ ಆಜ್ಞೆ (22, 23)

36  ಆಮೇಲೆ ಯೆಹೂದದ ಜನ ಯೋಷೀಯನ ಮಗ ಯೆಹೋವಾಹಾಜನನ್ನ+ ಯೆರೂಸಲೇಮಲ್ಲಿ ಅವನ ತಂದೆ ಸ್ಥಾನದಲ್ಲಿ ರಾಜನಾಗಿ ಮಾಡಿದ್ರು.+  ಯೆಹೋವಾಹಾಜ ರಾಜ ಆದಾಗ ಅವನಿಗೆ 23 ವರ್ಷ. ಅವನು ಯೆರೂಸಲೇಮಿಂದ ಮೂರು ತಿಂಗಳು ಆಳಿದ.  ಆದ್ರೆ ಈಜಿಪ್ಟಿನ ರಾಜ ಯೆರೂಸಲೇಮಲ್ಲಿ ಅವನನ್ನ ರಾಜನ ಸ್ಥಾನದಿಂದ ಕೆಳಗಿಳಿಸಿದ ಮತ್ತು ದೇಶದ ಮೇಲೆ 100 ತಲಾಂತು* ಬೆಳ್ಳಿ ಮತ್ತು ಒಂದು ತಲಾಂತು ಬಂಗಾರವನ್ನ ದಂಡವಾಗಿ ವಿಧಿಸಿದ.+  ಅಷ್ಟೇ ಅಲ್ಲ ಈಜಿಪ್ಟಿನ ರಾಜ ಯೆಹೋವಾಹಾಜನ ಸಹೋದರ ಎಲ್ಯಕೀಮನನ್ನ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ರಾಜನನ್ನಾಗಿ ಮಾಡಿದ. ಎಲ್ಯಕೀಮನ ಹೆಸ್ರನ್ನ ಯೆಹೋಯಾಕೀಮ್‌ ಅಂತ ಬದಲಾಯಿಸಿದ. ಆದ್ರೆ ನೆಕೋ+ ಯೆಹೋಯಾಕೀಮನ ಸಹೋದರ ಯೆಹೋವಾಹಾಜನನ್ನ ಈಜಿಪ್ಟಿಗೆ ಕರ್ಕೊಂಡು ಬಂದ.+  ಯೆಹೋಯಾಕೀಮ+ ರಾಜನಾದಾಗ ಅವನಿಗೆ 25 ವರ್ಷ. ಅವನು ಯೆರೂಸಲೇಮಿಂದ 11 ವರ್ಷ ಆಳಿದ. ತನ್ನ ದೇವರಾದ ಯೆಹೋವನಿಗೆ ಇಷ್ಟ ಆಗದೇ ಇರೋದನ್ನೇ ಮಾಡ್ತಿದ್ದ.+  ಬಾಬೆಲಿನ ರಾಜ ನೆಬೂಕದ್ನೆಚ್ಚರ+ ಯೆಹೋಯಾಕೀಮನ ವಿರುದ್ಧ ಬಂದು, ಅವನನ್ನ ಬಾಬೆಲಿಗೆ ಕರ್ಕೊಂಡು ಹೋಗೋಕೆ ತಾಮ್ರದ ಎರಡು ಬೇಡಿಗಳಿಂದ ಬಂಧಿಸಿದ.+  ನೆಬೂಕದ್ನೆಚ್ಚರ ಯೆಹೋವನ ಆಲಯದಿಂದ ಕೆಲವು ಪಾತ್ರೆಗಳನ್ನ ಬಾಬೆಲಿಗೆ ತಗೊಂಡು ಹೋಗಿ ತನ್ನ ಅರಮನೆಯಲ್ಲಿ ಇಟ್ಟುಕೊಂಡ.+  ಯೆಹೋಯಾಕೀಮನ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಮಾಡಿದ ನೀಚ ಕೆಲಸಗಳ ಬಗ್ಗೆ ಮತ್ತು ಅವನಲ್ಲಿದ್ದ ಕೆಟ್ಟ ವಿಷ್ಯಗಳ ಬಗ್ಗೆ ಇಸ್ರಾಯೇಲ್‌ ಮತ್ತು ಯೆಹೂದದ ರಾಜರ ಪುಸ್ತಕದಲ್ಲಿ ಇದೆ. ಅವನ ನಂತ್ರ ಅವನ ಮಗ ಯೆಹೋಯಾಖೀನ ರಾಜನಾದ.+  ಯೆಹೋಯಾಖೀನ+ ರಾಜನಾದಾಗ ಅವನಿಗೆ 18 ವರ್ಷ. ಅವನು ಯೆರೂಸಲೇಮಿಂದ ಮೂರು ತಿಂಗಳು ಹತ್ತು ದಿನ ಆಳ್ವಿಕೆಮಾಡಿದ. ಅವನು ಯೆಹೋವನಿಗೆ ಇಷ್ಟ ಆಗದೇ ಇರೋದನ್ನೇ ಮಾಡ್ತಿದ್ದ.+ 10  ವರ್ಷದ ಆರಂಭದಲ್ಲಿ* ರಾಜ ನೆಬೂಕದ್ನೆಚ್ಚರ ಯೆಹೋಯಾಖೀನನ್ನ ಬಾಬೆಲಿಗೆ ಕರ್ಕೊಂಡು ಬರೋಕೆ ತನ್ನ ಸೇವಕರನ್ನ ಕಳಿಸಿದ.+ ಜೊತೆಗೆ ಯೆಹೋವನ ಆಲಯದ ಅಮೂಲ್ಯ ವಸ್ತುಗಳನ್ನ+ ತಗೊಂಡು ಬರೋಕೆ ಹೇಳಿದ. ನೆಬೂಕದ್ನೆಚ್ಚರ ಅವನ ತಂದೆಯ ಸಹೋದರ ಚಿದ್ಕೀಯನನ್ನ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ರಾಜನಾಗಿ ಮಾಡಿದ.+ 11  ಚಿದ್ಕೀಯ+ ರಾಜನಾದಾಗ ಅವನಿಗೆ 21 ವರ್ಷ. ಅವನು ಯೆರೂಸಲೇಮಿಂದ 11 ವರ್ಷ ಆಳಿದ.+ 12  ಚಿದ್ಕೀಯ ತನ್ನ ದೇವರಾದ ಯೆಹೋವನಿಗೆ ಇಷ್ಟ ಆಗದೇ ಇರೋದನ್ನೇ ಮಾಡ್ತಿದ್ದ. ಯೆಹೋವನ ಆಜ್ಞೆ ಪ್ರಕಾರ ಮಾತಾಡಿದ ಪ್ರವಾದಿ ಯೆರೆಮೀಯನ ಮುಂದೆ ಅವನು ತನ್ನನ್ನ ತಗ್ಗಿಸಿಕೊಳ್ಳಲಿಲ್ಲ.+ 13  ದೇವರ ಹೆಸ್ರಲ್ಲಿ ತನ್ನಿಂದ ಆಣೆ ಮಾಡಿಸಿದ್ದ ರಾಜ ನೆಬೂಕದ್ನೆಚ್ಚರನ ವಿರುದ್ಧ ಸಹ ಚಿದ್ಕೀಯ ತಿರುಗಿಬಿದ್ದ.+ ಅವನು ಹಠಹಿಡಿದು ಕಠಿಣ ಹೃದಯ ಮಾಡ್ಕೊಂಡು ಇಸ್ರಾಯೇಲ್‌ ದೇವರಾದ ಯೆಹೋವನ ಕಡೆ ತಿರುಗಿಕೊಳ್ಳೋಕೆ ನಿರಾಕರಿಸಿದ. 14  ಪುರೋಹಿತರ ಎಲ್ಲ ಪ್ರಧಾನರು ಮತ್ತು ಜನ್ರು ಸಹ ದೇವರಿಗೆ ನಂಬಿಕೆ ದ್ರೋಹ ಮಾಡಿದ್ರು. ಬೇರೆ ದೇಶದವರು ಮಾಡ್ತಿದ್ದ ಎಲ್ಲ ನೀಚ ಕೆಲಸಗಳನ್ನ ಅವರೂ ಮಾಡಿದ್ರು. ದೇವರು ಯೆರೂಸಲೇಮಲ್ಲಿ ಪವಿತ್ರಗೊಳಿಸಿದ್ದ ಯೆಹೋವನ ಆಲಯವನ್ನ ಅವರು ಅಪವಿತ್ರಗೊಳಿಸಿದ್ರು.+ 15  ಅವ್ರ ಪೂರ್ವಜರ ದೇವರಾದ ಯೆಹೋವ ಸಂದೇಶವಾಹಕರ ಮೂಲಕ ಅವ್ರಿಗೆ ಎಚ್ಚರಿಕೆಯನ್ನ ಕೊಡ್ತಾ ಇದ್ದ. ಆತನಿಗೆ ತನ್ನ ಜನ್ರ ಮೇಲೆ ಮತ್ತು ತನ್ನ ನಿವಾಸದ ಮೇಲೆ ಕನಿಕರ ಇದ್ದಿದ್ರಿಂದ ಆತನು ಅವ್ರನ್ನ ಪದೇಪದೇ ಎಚ್ಚರಿಸಿದ. 16  ಆದರೆ ಅವರು ಸತ್ಯ ದೇವರ ಸಂದೇಶವಾಹಕರನ್ನ ಹೀಯಾಳಿಸ್ತಾ ಇದ್ರು.+ ಅವರು ಆತನ ಮಾತುಗಳನ್ನ ತುಚ್ಛವಾಗಿ ಕಂಡ್ರು.+ ಆತನ ಪ್ರವಾದಿಗಳನ್ನ ಗೇಲಿಮಾಡಿದ್ರು.+ ಯೆಹೋವನ ಕೋಪ ಆತನ ಜನ್ರ ಮೇಲೆ ಬರೋ ತನಕ+ ಸನ್ನಿವೇಶ ಕೈಮೀರಿ ಹೋಗೋ ತನಕ ಅವರು ಹೀಗೇ ಮಾಡಿದ್ರು. 17  ಹಾಗಾಗಿ ದೇವರು ಅವ್ರ ಮೇಲೆ ಕಸ್ದೀಯರ+ ರಾಜ ಆಕ್ರಮಣಮಾಡೋ ತರ ಮಾಡಿದನು. ಆ ರಾಜ ಬಂದು ಅವ್ರ ಆರಾಧನಾ ಸ್ಥಳದಲ್ಲೇ+ ಅವ್ರ ಯುವಕರನ್ನ ಕತ್ತಿಯಿಂದ ಕೊಂದುಹಾಕಿದ.+ ಅವನು ಹುಡುಗರನ್ನ, ಕನ್ಯೆಯರನ್ನ, ವಯಸ್ಸಾದವರನ್ನ ಮತ್ತು ಅಸ್ವಸ್ಥರನ್ನ ಹೀಗೆ ಎಲ್ರನ್ನೂ ಕೊಂದುಹಾಕಿದ. ಯಾರಿಗೂ ಕರುಣೆ ತೋರಿಸಲಿಲ್ಲ.+ ದೇವರು ಎಲ್ಲವನ್ನೂ ಅವನ ಕೈಗೆ ಒಪ್ಪಿಸಿದ.+ 18  ಸತ್ಯ ದೇವರ ಆಲಯದಲ್ಲಿದ್ದ ಚಿಕ್ಕ ದೊಡ್ಡ ಹೀಗೆ ಎಲ್ಲ ಪಾತ್ರೆಗಳನ್ನ, ಯೆಹೋವನ ಆಲಯದಲ್ಲಿದ್ದ ನಿಕ್ಷೇಪಗಳನ್ನ, ರಾಜನ ಮತ್ತು ಅವನ ಅಧಿಕಾರಿಗಳ ನಿಕ್ಷೇಪಗಳನ್ನ ಕಸ್ದೀಯರ ರಾಜ ಬಾಬೆಲಿಗೆ ತಗೊಂಡು ಹೋದ.+ 19  ಅವನು ಸತ್ಯ ದೇವರ ಆಲಯವನ್ನ ಸುಟ್ಟುಹಾಕಿದ.+ ಯೆರೂಸಲೇಮಿನ ಗೋಡೆಗಳನ್ನ ಕೆಡವಿಹಾಕಿದ.+ ಅದ್ರ ಎಲ್ಲ ಭದ್ರ ಕೋಟೆಗಳನ್ನ ಬೆಂಕಿಯಿಂದ ಸುಟ್ಟುಹಾಕಿದ. ಎಲ್ಲ ಅಮೂಲ್ಯ ವಸ್ತುಗಳನ್ನ ಹಾಳುಮಾಡಿದ.+ 20  ಕತ್ತಿಯಿಂದ ತಪ್ಪಿಸ್ಕೊಂಡವರನ್ನ ಬಾಬೆಲಿಗೆ ಸೆರೆಯಾಳುಗಳಾಗಿ ಕರ್ಕೊಂಡು ಹೋದ.+ ಪರ್ಶಿಯರ ಸಾಮ್ರಾಜ್ಯ* ಆಳ್ವಿಕೆಗೆ ಬರೋ ತನಕ+ ಅವರು ಅವನ ಮತ್ತು ಅವನ ಮಕ್ಕಳ ಸೇವಕರಾಗಿ ಕೆಲಸಮಾಡಿದ್ರು.+ 21  ಯೆಹೋವ ಯೆರೆಮೀಯನ ಮೂಲಕ ಹೇಳಿಸಿದ ಮಾತು ನಿಜ ಆಯ್ತು.+ ದೇಶ ಅಲ್ಲಿ ತನಕ ಆಚರಿಸದೆ ಬಿಟ್ಟಿದ್ದ ಸಬ್ಬತ್ತಿಗೆ ಬದಲಾಗಿ 70 ವರ್ಷ ಹಾಳುಬಿದ್ದಿತ್ತು.+ ಹೀಗೆ ದೇಶ ವಿಶ್ರಾಂತಿ ತಗೊಂಡು ಸಬ್ಬತ್ತನ್ನ ಆಚರಿಸ್ತು.+ 22  ಪರ್ಶಿಯ ರಾಜ ಕೋರೆಷ+ ಆಳ್ತಿದ್ದ ಮೊದಲ್ನೇ ವರ್ಷದಲ್ಲಿ ಯೆಹೋವನು ರಾಜ ಕೋರೆಷನ ಮನಸ್ಸನ್ನ ಪ್ರಚೋದಿಸಿದನು. ಒಂದು ಸಂದೇಶವನ್ನ ರಾಜ ಕೋರೆಷ ಇಡೀ ರಾಜ್ಯಕ್ಕೆ ಸಾರೋ ತರ ಮಾಡಿದನು. ಯೆರೆಮೀಯನ ಮೂಲಕ ಹೇಳಿಸಿದ ತನ್ನ ಮಾತುಗಳು+ ನಿಜ ಆಗಬೇಕು ಅಂತ ಯೆಹೋವ ಹೀಗೆ ಮಾಡಿದನು. ರಾಜ ಆ ಸಂದೇಶವನ್ನ ಪತ್ರಗಳ ಮೂಲಕ ಕಳಿಸಿದ.+ ಅದ್ರಲ್ಲಿ ಹೀಗಿತ್ತು 23  “ಪರ್ಶಿಯ ರಾಜ ಕೋರೆಷ ಅನ್ನೋ ನಾನು ಹೇಳೋದು ಏನಂದ್ರೆ ‘ಸ್ವರ್ಗದ ದೇವರಾದ ಯೆಹೋವ ಭೂಮಿ ಮೇಲಿರೋ ಎಲ್ಲ ರಾಜ್ಯಗಳನ್ನ ನನಗೆ ಕೊಟ್ಟಿದ್ದಾನೆ.+ ಯೆಹೂದ ದೇಶದ ಯೆರೂಸಲೇಮಲ್ಲಿ ಆತನಿಗಾಗಿ ಒಂದು ಆಲಯವನ್ನ ಕಟ್ಟಿಸಬೇಕಂತ ನನಗೆ ಆಜ್ಞೆ ಕೊಟ್ಟಿದ್ದಾನೆ.+ ಆತನಿಗೆ ಸೇರಿದ ಜನ ನಿಮ್ಮಲ್ಲಿ ಯಾರಾದ್ರೂ ಇದ್ದಾರಾ? ಇದ್ರೆ ಅವರು ಯೆರೂಸಲೇಮಿಗೆ ಹೋಗಲಿ.+ ಅವ್ರ ದೇವರಾದ ಯೆಹೋವ ಅವ್ರ ಜೊತೆ ಇರ್ತಾನೆ.’”

ಪಾದಟಿಪ್ಪಣಿ

ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.
ಬಹುಶಃ, ವಸಂತ ಕಾಲದಲ್ಲಿ.
ಅಥವಾ “ರಾಜ ಮನೆತನದವರು.”