ಎರಡನೇ ಸಮುವೇಲ 10:1-19
-
ಅಮ್ಮೋನ್ಯರ, ಅರಾಮ್ಯರ ವಿರುದ್ಧ ಗೆಲುವು (1-19)
10 ಆಮೇಲೆ ಅಮ್ಮೋನಿಯರ+ ರಾಜ ಸತ್ತುಹೋದ. ಅವನ ಜಾಗದಲ್ಲಿ ಅವನ ಮಗ ಹಾನೂನ ರಾಜನಾದ.+
2 ಆಗ ದಾವೀದ “ನಾನು ನಾಹಾಷನ ಮಗ ಹಾನೂನನಿಗೆ ಶಾಶ್ವತ ಪ್ರೀತಿ ತೋರಿಸ್ತೀನಿ. ಯಾಕಂದ್ರೆ ಅವನ ಅಪ್ಪ ನನಗೂ ಅಂಥ ಪ್ರೀತಿ ತೋರಿಸಿದ್ದ” ಅಂದ. ಹಾಗಾಗಿ ಅಪ್ಪನ ಕಳ್ಕೊಂಡಿದ್ದ ಹಾನೂನನಿಗೆ ಸಮಾಧಾನ ಮಾಡೋಕೆ ದಾವೀದ ತನ್ನ ಸೇವಕರನ್ನ ಕಳಿಸಿದ. ಆದ್ರೆ ದಾವೀದನ ಸೇವಕರು ಅಮ್ಮೋನಿಯರ ದೇಶಕ್ಕೆ ಬಂದಾಗ
3 ಅಮ್ಮೋನಿಯರ ಅಧಿಕಾರಿಗಳು ಅವ್ರ ಒಡೆಯ ಹಾನೂನನಿಗೆ “ಸಮಾಧಾನ ಮಾಡೋರನ್ನ ಕಳಿಸಿ ದಾವೀದ ನಿನ್ನ ಅಪ್ಪನನ್ನ ಗೌರವಿಸ್ತಿದ್ದಾನೆ ಅಂತ ಅಂದ್ಕೊಂಡಿದ್ದೀಯಾ? ಇಡೀ ಪಟ್ಟಣವನ್ನ ಗೂಢಚಾರಿಕೆ ಮಾಡಿ ಅದನ್ನ ವಶ ಮಾಡ್ಕೊಳ್ಳೋಕೆ ದಾವೀದ ತನ್ನ ಸೇವಕರನ್ನ ಕಳಿಸಿದ್ದಾನೆ” ಅಂತ ಹೇಳಿದ್ರು.
4 ಹಾಗಾಗಿ ಹಾನೂನ ದಾವೀದನ ಸೇವಕರನ್ನ ಕರ್ಕೊಂಡು ಹೋಗಿ ಅವ್ರ ಅರ್ಧ ಗಡ್ಡ ಬೋಳಿಸಿ+ ಸೊಂಟದ ಕೆಳಭಾಗ ಕಾಣೋ ತರ ಅವ್ರ ಬಟ್ಟೆ ಕತ್ತರಿಸಿ ಕಳಿಸಿಬಿಟ್ಟ.
5 ಅವನ ಸೇವಕರಿಗೆ ತುಂಬ ಅವಮಾನ ಆಗಿದೆ ಅಂತ ದಾವೀದನಿಗೆ ಗೊತ್ತಾದಾಗ ಅವ್ರನ್ನ ಭೇಟಿ ಮಾಡೋಕೆ ಕೆಲವು ಗಂಡಸ್ರನ್ನ ಕಳಿಸಿ ರಾಜ ಅವ್ರಿಗೆ “ನಿಮ್ಮ ಗಡ್ಡ ಮತ್ತೆ ಬೆಳೆಯೋ ತನಕ ಯೆರಿಕೋನಲ್ಲೇ+ ಇರಿ. ಆಮೇಲೆ ವಾಪಸ್ ಬನ್ನಿ” ಅಂದ.
6 ಅದೇ ಸಮಯಕ್ಕೆ ದಾವೀದನಿಗೆ ತಮ್ಮ ಮೇಲೆ ತುಂಬ ದ್ವೇಷ ಇದೆ ಅಂತ ಅಮ್ಮೋನಿಯರಿಗೆ ಗೊತ್ತಾಯ್ತು. ಹಾಗಾಗಿ ಅಮ್ಮೋನಿಯರು ಬೇತ್-ರೆಹೋಬಿನ+ ಮತ್ತು ಚೋಬದ+ ಅರಾಮ್ಯರಿಂದ 20,000 ಕಾಲಾಳುಗಳನ್ನ, ಮಾಕಾ+ ರಾಜನ ಹತ್ರದಿಂದ 1,000 ಗಂಡಸ್ರನ್ನ ಮತ್ತು ಇಷ್ಟೋಬಿನಿಂದ* 12,000 ಗಂಡಸ್ರನ್ನ ಹಣ ಕೊಟ್ಟು ಕರೆಸಿದ್ರು.+
7 ಈ ಸುದ್ದಿ ಕೇಳಿಸ್ಕೊಂಡಾಗ ದಾವೀದ ಯೋವಾಬನನ್ನ, ಶಕ್ತಿಶಾಲಿ ಸೈನಿಕರಿದ್ದ ತನ್ನ ಇಡೀ ಸೈನ್ಯ ಕಳಿಸಿದ.+
8 ಅಮ್ಮೋನಿಯರು ಪಟ್ಟಣದ ಬಾಗಿಲ ಹತ್ರ ಸೈನ್ಯ ಕಟ್ಟಿದ್ರು. ಆಗ ಚೋಬದ ಮತ್ತು ರೆಹೋಬದ ಅರಾಮ್ಯರು, ಇಷ್ಟೋಬಿನ* ಮತ್ತು ಮಾಕಾದ ಜನ್ರು ಬಯಲಲ್ಲಿ ಇದ್ರು.
9 ಯೋವಾಬ ತನ್ನ ಹಿಂದೆ ಮುಂದೆ ವೇಗವಾಗಿ ಬರ್ತಿದ್ದ ಸೈನ್ಯವನ್ನ ನೋಡಿ ಇಸ್ರಾಯೇಲಿನಲ್ಲಿ ಇದ್ದ ಉತ್ತಮ ಸೈನಿಕರನ್ನ ಆರಿಸ್ಕೊಂಡು ಅರಾಮ್ಯರ ವಿರುದ್ಧ ಹೋಗೋಕೆ ಸೈನ್ಯ ಕಟ್ಟಿದ.+
10 ಉಳಿದ ಗಂಡಸ್ರನ್ನ ಅಣ್ಣನಾದ ಅಬೀಷೈಯ+ ವಶಕ್ಕೆ ಕೊಟ್ಟು ಸೈನ್ಯ ಕಟ್ಕೊಂಡು ಅಮ್ಮೋನಿಯರ+ ವಿರುದ್ಧ ಹೋಗೋಕೆ ಹೇಳಿದ.
11 ಆಮೇಲೆ ಯೋವಾಬ “ಅರಾಮ್ಯರು ನನ್ನನ್ನ ಸೋಲಿಸ್ತಿದ್ದಾರೆ ಅಂತ ನಿನಗೆ ಗೊತ್ತಾದ್ರೆ ನೀನು ನನ್ನ ಸಹಾಯಕ್ಕೆ ಬರಬೇಕು, ಅಮ್ಮೋನಿಯರು ನಿನ್ನನ್ನ ಸೋಲಿಸ್ತಿದ್ದಾರೆ ಅಂತ ನನಗೆ ಗೊತ್ತಾದ್ರೆ ನಾನು ನಿನ್ನ ಸಹಾಯಕ್ಕೆ ಬರ್ತೀನಿ.
12 ನಾವು ದೃಢವಾಗಿರಬೇಕು. ಧೈರ್ಯದಿಂದ+ ನಮ್ಮ ಜನ್ರಿಗಾಗಿ, ನಮ್ಮ ದೇವರ ಪಟ್ಟಣಗಳಿಗಾಗಿ ಹೋರಾಡಬೇಕು. ತನಗೆ ಯಾವುದು ಒಳ್ಳೇದು ಅಂತ ಅನಿಸುತ್ತೋ ಯೆಹೋವ ಅದನ್ನೇ ಮಾಡ್ತಾನೆ”+ ಅಂದ.
13 ಆಮೇಲೆ ಯೋವಾಬ, ಅವನ ಸೈನಿಕರು ಅರಾಮ್ಯರ ವಿರುದ್ಧ ಯುದ್ಧಕ್ಕೆ ಹೋದ್ರು. ಅರಾಮ್ಯರು ಅವನಿಗೆ ಹೆದರಿ ಓಡಿಹೋದ್ರು.+
14 ಅರಾಮ್ಯರು ಓಡಿಹೋಗಿರೋದನ್ನ ನೋಡಿದಾಗ ಅಮ್ಮೋನಿಯರೂ ಅಬೀಷೈಗೆ ಹೆದರಿ ಪಟ್ಟಣಕ್ಕೆ ಓಡಿ ಹೋದ್ರು. ಆಮೇಲೆ ಯೋವಾಬ ಅಮ್ಮೋನಿಯರನ್ನ ಬಿಟ್ಟು ಯೆರೂಸಲೇಮಿಗೆ ವಾಪಸ್ ಬಂದ.
15 ಇಸ್ರಾಯೇಲ್ಯರಿಂದ ಸೋತು ಹೋಗಿದ್ದೀವಿ ಅಂತ ಅರಾಮ್ಯರಿಗೆ ಗೊತ್ತಾದಾಗ ಅವರು ಮತ್ತೆ ಗುಂಪಾಗಿ ಸೇರಿಬಂದ್ರು.+
16 ಹದದೆಜೆರ+ ನದಿ*+ ಪ್ರದೇಶದಲ್ಲಿದ್ದ ಅರಾಮ್ಯರಿಗೆ ಬರೋಕೆ ಹೇಳಿದ. ಆಗ ಅವರು ಹದದೆಜೆರನ ಸೇನಾಪತಿಯಾಗಿದ್ದ ಶೋಬಕನ ಜೊತೆ ಹೇಲಾಮಿಗೆ ಬಂದ್ರು.
17 ಈ ಸುದ್ದಿ ದಾವೀದನಿಗೆ ಮುಟ್ಟಿದ ತಕ್ಷಣ ಅವನು ಎಲ್ಲ ಇಸ್ರಾಯೇಲ್ಯರನ್ನ ಒಟ್ಟು ಸೇರಿಸಿ ಯೋರ್ದನ್ ದಾಟಿ ಹೇಲಾಮಿಗೆ ಬಂದ. ಆಗ ಅರಾಮ್ಯರು ದಾವೀದನ ವಿರುದ್ಧ ಸೈನ್ಯ ಕಟ್ಕೊಂಡು ಬಂದು ಅವನ ವಿರುದ್ಧ ಯುದ್ಧ ಮಾಡಿದ್ರು.+
18 ಆದ್ರೆ ಅರಾಮ್ಯರು ಇಸ್ರಾಯೇಲ್ಯರಿಗೆ ಹೆದರಿ ಓಡಿಹೋದ್ರು. ದಾವೀದ ಅರಾಮ್ಯರ 700 ಸಾರಥಿಗಳನ್ನ, 40,000 ಕುದುರೆ ಸವಾರರನ್ನ ಸಾಯಿಸಿದ. ಅಷ್ಟೇ ಅಲ್ಲ ಅವ್ರ ಸೇನಾಪತಿ ಶೋಬಕನ ಮೇಲೆ ದಾಳಿ ಮಾಡಿದ. ಅವನು ಅಲ್ಲೇ ಸತ್ತುಹೋದ.+
19 ನಾವು ಇಸ್ರಾಯೇಲ್ಯರ ಕೈಯಲ್ಲಿ ಸೋತು ಹೋಗ್ತಾ ಇದ್ದೀವಿ ಅಂತ ಎಲ್ಲ ರಾಜರು, ಹದದೆಜೆರನ ಸೇವಕರು ನೋಡಿದ ತಕ್ಷಣ ಅವರು ಇಸ್ರಾಯೇಲ್ಯರ ಜೊತೆ ಸಮಾಧಾನ ಮಾಡ್ಕೊಂಡು ಅವ್ರಿಗೆ ಅಧೀನರಾದ್ರು.+ ಇನ್ನು ಮುಂದಕ್ಕೆ ಅಮ್ಮೋನಿಯರಿಗೆ ಸಹಾಯ ಮಾಡೋಕೆ ಅರಾಮ್ಯರಿಗೆ ಭಯ ಆಯ್ತು.