ಎರಡನೇ ಸಮುವೇಲ 18:1-33

  • ಅಬ್ಷಾಲೋಮನ ಸೋಲು, ಸಾವು (1-18

  • ಅಬ್ಷಾಲೋಮನ ಸಾವಿನ ಸುದ್ದಿ ದಾವೀದನ ಕಿವಿಗೆ ಬಿತ್ತು (19-33)

18  ದಾವೀದ ತನ್ನ ಜೊತೆ ಇದ್ದ ಜನ್ರನ್ನ ಲೆಕ್ಕಮಾಡಿ ಅವ್ರಲ್ಲಿ ಕೆಲವ್ರನ್ನ 1,000 ಜನ್ರ ಮೇಲೆ ಅಧಿಪತಿಗಳಾಗಿ, ಇನ್ನು ಕೆಲವ್ರನ್ನ 100 ಜನ್ರ ಮೇಲೆ ಅಧಿಪತಿಗಳಾಗಿ ಮಾಡಿದ.+  ಆಮೇಲೆ ತನ್ನ ಜೊತೆ ಇದ್ದ ಜನ್ರನ್ನ ಮೂರು ಗುಂಪಾಗಿ ಮಾಡಿ, ಮೊದಲ್ನೇ ಗುಂಪನ್ನ ಯೋವಾಬನ+ ಕೈಗೆ ಒಪ್ಪಿಸಿದ. ಎರಡ್ನೇ ಗುಂಪನ್ನ ಚೆರೂಯಳ+ ಮಗನೂ ಯೋವಾಬನ ಸಹೋದರನೂ ಆದ ಅಬೀಷೈ+ ಕೈಗೆ ಒಪ್ಪಿಸಿದ. ಮೂರನೇ ಗುಂಪನ್ನ ಗಿತ್ತೀಯನಾದ ಇತೈ+ ಕೈಗೆ ಒಪ್ಪಿಸಿದ. ರಾಜ ಆ ಗಂಡಸರಿಗೆ “ನಾನೂ ನಿಮ್ಮ ಜೊತೆ ಬರ್ತಿನಿ” ಅಂದ.  ಆಗ ಅವರು “ನೀನು ನಮ್ಮ ಜೊತೆ ಬರೋದು ಬೇಡ.+ ನಾವು ಓಡಿಹೋದ್ರೂ ನಮ್ಮಲ್ಲಿ ಅರ್ಧದಷ್ಟು ಜನ ಸತ್ತುಬಿದ್ರೂ ಶತ್ರುಗಳ ಮೇಲೆ ಯಾವ ಪರಿಣಾಮನೂ ಆಗಲ್ಲ. ಯಾಕಂದ್ರೆ 10,000 ಗಂಡಸ್ರಿಗಿಂತ ನಿನಗೇ ಹೆಚ್ಚು ಬೆಲೆ.+ ನೀನು ಪಟ್ಟಣದಲ್ಲೇ ಇದ್ದು ಅಲ್ಲಿಂದ ನಮಗೆ ಸಹಾಯ ಮಾಡಿದ್ರೆ ಸಾಕು” ಅಂದ್ರು.  ರಾಜ ಅವ್ರಿಗೆ “ನೀವು ಹೇಳಿದ ಹಾಗೇ ಮಾಡ್ತೀನಿ” ಅಂದ. ಹಾಗಾಗಿ ರಾಜ ಪಟ್ಟಣದ ಬಾಗಿಲು ಪಕ್ಕದಲ್ಲಿ ನಿಂತ್ಕೊಂಡ, ಗಂಡಸ್ರೆಲ್ಲ ನೂರುನೂರು ಜನ್ರಾಗಿ ಸಾವಿರಸಾವಿರ ಜನ್ರಾಗಿ ಹೋದ್ರು.  ಆಗ ರಾಜನು ಯೋವಾಬನಿಗೆ, ಅಬೀಷೈಗೆ, ಇತೈಗೆ “ನನಗೋಸ್ಕರ ಯುವ ಅಬ್ಷಾಲೋಮನ ಜೊತೆ ಪ್ರೀತಿಯಿಂದ ನಡ್ಕೊಳ್ಳಿ”+ ಅಂತ ಹೇಳಿ ಕಳಿಸಿದ. ರಾಜ ಅಬ್ಷಾಲೋಮನ ವಿಷ್ಯದಲ್ಲಿ ಎಲ್ಲ ಅಧಿಪತಿಗಳಿಗೆ ಕೊಟ್ಟ ಆಜ್ಞೆಯನ್ನ ಗಂಡಸ್ರೆಲ್ಲ ಕೇಳಿಸ್ಕೊಂಡ್ರು.  ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡೋಕೆ ಗಂಡಸ್ರು ಯುದ್ಧ ಭೂಮಿಗೆ ಬಂದ್ರು. ಎಫ್ರಾಯೀಮ್‌ ಕಾಡಲ್ಲಿ ಯುದ್ಧ ನಡಿತು.+  ಅಲ್ಲಿ ದಾವೀದನ ಸೇವಕರು ಇಸ್ರಾಯೇಲ್‌ ಜನ್ರನ್ನ+ ಸಾಯಿಸಿದ್ರು.+ ಅವತ್ತು ತುಂಬ ಜನ ಸತ್ತು ಬಿದ್ರು. 20,000 ಗಂಡಸ್ರು ಸತ್ರು.  ಯುದ್ಧ ಇಡೀ ಪ್ರಾಂತ್ಯಕ್ಕೆ ಹಬ್ಬಿಕೊಳ್ತು. ಅಷ್ಟೇ ಅಲ್ಲ ಆ ದಿನ ಕತ್ತಿಯಿಂದ ಸತ್ತವ್ರಿಗಿಂತ ಕಾಡಲ್ಲಿ ಆಗಿದ್ದ ಅಪಾಯಗಳಿಂದ ಸತ್ತುಹೋದವ್ರ ಸಂಖ್ಯೆನೇ ಜಾಸ್ತಿ.  ಸ್ವಲ್ಪ ಸಮಯ ಆದ್ಮೇಲೆ ಅಬ್ಷಾಲೋಮ ದಾವೀದನ ಸೇವಕರ ಕಣ್ಣಿಗೆ ಬಿದ್ದ. ಅವನು ಹೇಸರಗತ್ತೆ ಮೇಲೆ ಸವಾರಿ ಮಾಡ್ಕೊಂಡು ಹೋಗ್ತಿದ್ದ. ಆ ಹೇಸರಗತ್ತೆ ತುಂಬ ಕೊಂಬೆಗಳಿದ್ದ ದೊಡ್ಡ ಮರದ ಕೆಳಗೆ ಹೋಯ್ತು. ಆಗ ಅವನ ಕೂದ್ಲು ಆ ದೊಡ್ಡ ಮರಕ್ಕೆ ಸಿಕ್ಕಿಹಾಕೊಂಡಿತು. ಅವನು ಸವಾರಿ ಮಾಡ್ತಿದ್ದ ಹೇಸರಗತ್ತೆ ಮುಂದೆ ಹೋದದ್ರಿಂದ ಅವನು ಗಾಳಿಯಲ್ಲಿ* ನೇತಾಡ್ತಿದ್ದ. 10  ಆಮೇಲೆ ಯಾರೋ ಒಬ್ಬ ಅವನನ್ನ ನೋಡಿ ಯೋವಾಬನ+ ಹತ್ರ ಬಂದು “ಅಬ್ಷಾಲೋಮ ದೊಡ್ಡ ಮರಕ್ಕೆ ಸಿಕ್ಕಿಹಾಕೊಂಡು ನೇತಾಡ್ತಾ ಇದ್ದಾನೆ” ಅಂದ. 11  ಯೋವಾಬ ಅವನಿಗೆ “ನೀನು ಅವನನ್ನ ನೋಡಿದ ಕೂಡ್ಲೇ ಯಾಕೆ ಸಾಯಿಸಲಿಲ್ಲ? ಅವನನ್ನ ಸಾಯಿಸಿದ್ರೆ ನಾನು ಸಂತೋಷದಿಂದ ನಿನಗೆ ಹತ್ತು ಬೆಳ್ಳಿ ಶೆಕೆಲ್‌ಗಳನ್ನ, ಸೊಂಟಪಟ್ಟಿಯನ್ನ ಕೊಡ್ತಿದ್ದೆ” ಅಂದ. 12  ಆದ್ರೆ ಅವನು ಯೋವಾಬನಿಗೆ “ನೀನು ನನಗೆ 1,000 ಬೆಳ್ಳಿ ಶೆಕೆಲ್‌ಗಳನ್ನ ಕೊಟ್ರೂ* ನಾನು ರಾಜಕುಮಾರನ ವಿರುದ್ಧ ಕೈಯೆತ್ತಲ್ಲ. ಯಾಕಂದ್ರೆ ‘ಅಬ್ಷಾಲೋಮನಿಗೆ ಯಾರೂ ಹಾನಿ ಮಾಡದ ಹಾಗೆ ಜಾಗ್ರತೆಯಿಂದ ನೋಡ್ಕೊಳ್ಳಿ’+ ಅಂತ ರಾಜ ನಿನಗೆ, ಅಬೀಷೈಗೆ, ಇತೈಗೆ ಹೇಳಿದ್ದನ್ನ ನಾವು ಕೇಳಿಸ್ಕೊಂಡ್ವಿ. 13  ರಾಜನ ಮಾತು ಮೀರಿ ನಾನು ಅವನ ಪ್ರಾಣ ತೆಗೆದ್ರೆ ಆ ವಿಷ್ಯ ರಾಜನಿಗೆ ಗೊತ್ತಾಗದ ಹಾಗೆ ಮುಚ್ಚಿಡೋಕೆ ಆಗಲ್ಲ, ನೀನು ಸಹ ನನ್ನನ್ನ ಕಾಪಾಡೋಕೆ ಆಗಲ್ಲ” ಅಂದ. 14  ಅದಕ್ಕೆ ಯೋವಾಬ “ನಾನು ನಿನ್ನ ಜೊತೆ ಮಾತಾಡ್ತಾ ಸಮಯ ಹಾಳು ಮಾಡಲ್ಲ!” ಅಂದ. ಮೂರು ಚೂಪಾದ ಕಂಬಿಗಳನ್ನ* ಕೈಯಲ್ಲಿ ತಗೊಂಡು ಹೋಗಿ ಆ ದೊಡ್ಡ ಮರದಲ್ಲಿ ನೇತಾಡ್ತಿದ್ದ ಅಬ್ಷಾಲೋಮನ ಹೃದಯಕ್ಕೆ ಚುಚ್ಚಿದ. 15  ಆಮೇಲೆ ಯೋವಾಬನ ಆಯುಧಗಳನ್ನ ಹೊರೋ 10 ಸೇವಕರು ಬಂದು ಅಬ್ಷಾಲೋಮ ಸಾಯೋ ತನಕ ಹೊಡೆದ್ರು.+ 16  ಆಮೇಲೆ ಯೋವಾಬ ಕೊಂಬು ಊದಿ ಜನ್ರು ಇಸ್ರಾಯೇಲ್ಯರನ್ನ ಅಟ್ಟಿಸ್ಕೊಂಡು ಹೋಗೋದನ್ನ ನಿಲ್ಲಿಸಿ ಹಿಂದೆ ಬರೋ ತರ ಮಾಡಿದ. ಹೀಗೆ ಅವನು ಆ ಜನ್ರನ್ನ ತಡೆದ. 17  ಅವರು ಅಬ್ಷಾಲೋಮನ ಶವ ತಗೊಂಡು ಹೋಗಿ ಕಾಡಲ್ಲಿದ್ದ ಒಂದು ದೊಡ್ಡ ಹಳ್ಳಕ್ಕೆ ಹಾಕಿ ಅದ್ರ ಮೇಲೆ ಕಲ್ಲುಗಳನ್ನ ಎಸೆದು ಕಲ್ಲುಗಳ ದೊಡ್ಡ ರಾಶಿಯನ್ನೇ ಮಾಡಿದ್ರು.+ ಆಗ ಅಬ್ಷಾಲೋಮನ ಜೊತೆ ಬಂದಿದ್ದ ಎಲ್ಲ ಇಸ್ರಾಯೇಲ್ಯರು ತಮ್ಮತಮ್ಮ ಮನೆಗಳಿಗೆ ಓಡಿಹೋದ್ರು. 18  ಅಬ್ಷಾಲೋಮ ಬದುಕಿದ್ದಾಗ “ನನ್ನ ಹೆಸ್ರನ್ನ ಉಳಿಸೋಕೆ ನನಗೆ ಒಬ್ಬ ಮಗನೂ ಇಲ್ಲ”+ ಅಂತ ಹೇಳಿ ರಾಜನ ಕಣಿವೆಯಲ್ಲಿ+ ತನಗಾಗಿ ಒಂದು ಸ್ಮಾರಕ ಸ್ಥಾಪಿಸಿದ್ದ. ಅವನು ಆ ಸ್ಮಾರಕಕ್ಕೆ ತನ್ನ ಹೆಸ್ರನ್ನೇ ಇಟ್ಟ. ಇವತ್ತಿಗೂ ಅದನ್ನ ಅಬ್ಷಾಲೋಮ ಸ್ಮಾರಕ ಅಂತಾನೇ ಕರಿತಾರೆ. 19  ಚಾದೋಕನ ಮಗ ಅಹೀಮಾಚ+ ಯೋವಾಬನಿಗೆ “ನಾನು ಓಡಿಹೋಗಿ ರಾಜನಿಗೆ ಈ ಸುದ್ದಿ ಮುಟ್ಟಿಸೋಕೆ ದಯವಿಟ್ಟು ನನಗೆ ಅಪ್ಪಣೆಕೊಡು. ಯಾಕಂದ್ರೆ ಯೆಹೋವ ಅವನನ್ನ ಶತ್ರುಗಳಿಂದ ಬಿಡಿಸಿ ಅವನಿಗೆ ನ್ಯಾಯ ಸಿಗೋ ತರ ಮಾಡಿದ್ದಾನೆ”+ ಅಂದ. 20  ಆದ್ರೆ ಯೋವಾಬ “ಅದು ಸಾಧ್ಯ ಇಲ್ಲ! ಬೇಕಾದ್ರೆ ಇನ್ನೊಂದು ದಿನ ನೀನು ಸುದ್ದಿ ತಗೊಂಡು ಹೋಗು. ಆದ್ರೆ ಇವತ್ತು ಮಾತ್ರ ಬೇಡ. ಯಾಕಂದ್ರೆ ತೀರಿಹೋಗಿರೋದು ರಾಜನ ಸ್ವಂತ ಮಗ”+ ಅಂದ. 21  ಆಮೇಲೆ ಯೋವಾಬ ಒಬ್ಬ ಕೂಷ್ಯನಿಗೆ+ “ಹೋಗು, ನೀನು ನೋಡಿದ್ದನ್ನ ರಾಜನಿಗೆ ಹೇಳು” ಅಂದ. ಅದಕ್ಕೆ ಆ ಕೂಷ್ಯ ಯೋವಾಬನಿಗೆ ನಮಸ್ಕರಿಸಿ ಓಡೋಕೆ ಶುರು ಮಾಡಿದ. 22  ಚಾದೋಕನ ಮಗ ಅಹೀಮಾಚ ಯೋವಾಬನಿಗೆ “ಏನಾದ್ರೂ ಪರ್ವಾಗಿಲ್ಲ, ದಯವಿಟ್ಟು ಆ ಕೂಷ್ಯನ ಹಿಂದೆನೇ ಓಡೋಕೆ ಅನುಮತಿ ಕೊಡು” ಅಂದ. ಆಗ ಯೋವಾಬ “ನನ್ನ ಮಗನೇ, ಹೇಳೋಕೆ ನಿನ್ನ ಹತ್ರ ಯಾವುದೇ ಸುದ್ದಿ ಇಲ್ಲಾಂದ್ರೆ, ನೀನ್ಯಾಕೆ ಓಡಬೇಕು?” ಅಂದ. 23  ಹಾಗಿದ್ರೂ ಅಹೀಮಾಚ “ಏನಾದ್ರೂ ಸರಿ, ನನಗೆ ಓಡೋಕೆ ಅನುಮತಿ ಕೊಡು” ಅಂದ. ಆಗ ಯೋವಾಬ “ಸರಿ ಓಡು” ಅಂದ. ಅಹೀಮಾಚ ಯೋರ್ದನ್‌ ಕಣಿವೆ ಪಕ್ಕದಲ್ಲಿರೋ ದಾರಿ ಹಿಡಿದು ಆ ಕೂಷ್ಯನಿಗಿಂತ ಮುಂದಾಗಿ ಓಡಿದ. 24  ದಾವೀದ ಪಟ್ಟಣದ ಎರಡು ಬಾಗಿಲು ಮಧ್ಯ+ ಕೂತಿದ್ದ. ಕಾವಲುಗಾರ+ ಎದ್ದು ಗೋಡೆ ಹತ್ತಿ ಪ್ರವೇಶದ್ವಾರದ ಮಾಳಿಗೆಗೆ ಹೋದ. ಒಬ್ಬ ವ್ಯಕ್ತಿ ಒಂಟಿಯಾಗಿ ಓಡಿ ಬರೋದನ್ನ ನೋಡಿದ. 25  ಆಗ ಕಾವಲುಗಾರ ರಾಜನನ್ನ ಕೂಗಿ ಅವನಿಗೆ ಈ ವಿಷ್ಯ ಹೇಳಿದ. ಅದಕ್ಕೆ ರಾಜ “ಅವನು ಒಬ್ಬನೇ ಬರ್ತಾ ಇರೋದಾದ್ರೆ ಏನಾದ್ರೂ ಸುದ್ದಿ ಇರಬೇಕು” ಅಂದ. ಅವನು ಹತ್ತತ್ರ ಬಂದ ಹಾಗೆ 26  ಇನ್ನೊಬ್ಬ ವ್ಯಕ್ತಿ ಓಡಿಬರೋದನ್ನ ಕಾವಲುಗಾರ ನೋಡಿದ. ಆಮೇಲೆ ಕಾವಲುಗಾರ ಬಾಗಿಲು ಕಾಯುವವನನ್ನ ಕರೆದು “ನೋಡು ಇನ್ನೊಬ್ಬ ವ್ಯಕ್ತಿ ಒಬ್ಬನೇ ಓಡಿ ಬರ್ತಿದ್ದಾನೆ” ಅಂದ. ಅದಕ್ಕೆ ರಾಜ “ಇವನೂ ಸುದ್ದಿ ತರ್ತಿದ್ದಾನೆ” ಅಂದ. 27  ಕಾವಲುಗಾರ ರಾಜನಿಗೆ “ಮೊದ್ಲು ಬರ್ತಿರೋ ವ್ಯಕ್ತಿ ಚಾದೋಕನ ಮಗ ಅಹೀಮಾಚನ+ ತರ ಓಡಿ ಬರ್ತಿದ್ದಾನೆ” ಅಂದ. ಅದಕ್ಕೆ ರಾಜ “ಅವನೊಬ್ಬ ಒಳ್ಳೇ ವ್ಯಕ್ತಿ, ಅವನು ಒಳ್ಳೇ ಸುದ್ದಿ ತಂದಿರಬೇಕು” ಅಂದ. 28  ಅಹೀಮಾಚ ರಾಜನನ್ನ ಕೂಗಿ “ಸಂತೋಷದ ಸುದ್ದಿ” ಅಂತ ಹೇಳಿ ನೆಲದ ತನಕ ಬಗ್ಗಿ ಅವನಿಗೆ ನಮಸ್ಕಾರ ಮಾಡಿದ. ಆಮೇಲೆ ಅವನು ರಾಜನಿಗೆ “ನಿನ್ನ ದೇವರಾದ ಯೆಹೋವನಿಗೆ ಹೊಗಳಿಕೆ ಸಿಗಲಿ! ಯಾಕಂದ್ರೆ ಆತನು ನನ್ನ ಒಡೆಯನಾದ ರಾಜನ ವಿರುದ್ಧ ತಿರುಗಿ ಬೀಳೋರನ್ನ* ನಮ್ಮ ಕೈಗೆ ಒಪ್ಪಿಸಿದ್ದಾನೆ”+ ಅಂದ. 29  ಆಗ ರಾಜ ಅಹೀಮಾಚನಿಗೆ “ಅಬ್ಷಾಲೋಮ ಚೆನ್ನಾಗಿ ಇದ್ದಾನಾ?” ಅಂತ ಕೇಳಿದ. ಅದಕ್ಕೆ ಅಹೀಮಾಚ “ಯೋವಾಬ ರಾಜನ ಸೇವಕನನ್ನ, ನನ್ನನ್ನ* ಕಳಿಸಿ ಕೊಡುವಾಗ ಅಲ್ಲಿ ದೊಡ್ಡ ಗಲಭೆ ಆಗ್ತಿದ್ದನ್ನ ನಾನು ನೋಡಿದೆ. ಆದ್ರೆ ಅದು ಏನಂತ ನಂಗೊತ್ತಿಲ್ಲ”+ ಅಂದ. 30  ಆಗ ರಾಜ “ಪಕ್ಕಕ್ಕೆ ಬಂದು ಇಲ್ಲಿ ನಿಂತ್ಕೊ” ಅಂದ. ಅವನು ಪಕ್ಕಕ್ಕೆ ಸರಿದು ಅಲ್ಲಿ ನಿಂತ್ಕೊಂಡ. 31  ಅಷ್ಟರಲ್ಲಿ ಆ ಕೂಷ್ಯ ಬಂದು+ “ನನ್ನ ಒಡೆಯನಾದ ರಾಜ ಈ ಸುದ್ದಿ ಸ್ವೀಕರಿಸಲಿ: ನಿನ್ನ ವಿರುದ್ಧ ದಂಗೆ ಎದ್ದಿದ್ದ ಎಲ್ರ ಕೈಯಿಂದ ನಿನ್ನನ್ನ ಬಿಡಿಸಿ, ಇವತ್ತು ಯೆಹೋವ ನಿನಗೆ ನ್ಯಾಯ ಕೊಟ್ಟಿದ್ದಾನೆ”+ ಅಂದ. 32  ಆದ್ರೆ ರಾಜ ಆ ಕೂಷ್ಯನಿಗೆ “ಅಬ್ಷಾಲೋಮ ಚೆನ್ನಾಗಿ ಇದ್ದಾನಾ?” ಅಂತ ಕೇಳಿದ. ಅದಕ್ಕೆ ಆ ಕೂಷ್ಯ “ನನ್ನ ಒಡೆಯನಾದ ರಾಜನ ಎಲ್ಲ ಶತ್ರುಗಳಿಗೂ ನಿನಗೆ ಹಾನಿ ಮಾಡಬೇಕಂತ ನಿನ್ನ ವಿರುದ್ಧ ಏಳೋ ಪ್ರತಿಯೊಬ್ರಿಗೂ ಆ ಯುವ ವ್ಯಕ್ತಿಗೆ ಆದ ಗತಿನೇ ಆಗಲಿ!”+ ಅಂದ. 33  ಈ ಸುದ್ದಿ ರಾಜನ ಮನಸ್ಸನ್ನ ಕಲಕಿತು. ಅವನು “ನನ್ನ ಮಗ ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗ ಅಬ್ಷಾಲೋಮನೇ! ನಿನ್ನ ಬದ್ಲು ನಾನು ಸತ್ತಿದ್ರೆ, ನನ್ನ ಮಗ ಅಬ್ಷಾಲೋಮನೇ, ನನ್ನ ಮಗನೇ!” ಅಂತ ಹೇಳಿ ಅಳ್ತಾ ಹೆಬ್ಬಾಗಿಲ ಮೇಲಿರೋ ಕೋಣೆಗೆ ಹೋದ.+

ಪಾದಟಿಪ್ಪಣಿ

ಅಕ್ಷ. “ಆಕಾಶಕ್ಕೂ ಭೂಮಿಗೂ ಮಧ್ಯ.”
ಅಕ್ಷ. “ಅಂಗೈಯಲ್ಲಿ ಇಟ್ರೂ.”
ಬಹುಶಃ, “ಈಟಿಗಳನ್ನ; ಬರ್ಜಿಗಳನ್ನ.”
ಅಕ್ಷ. “ಕೈಯೆತ್ತಿದವರನ್ನ.”
ಅಕ್ಷ. “ನಿನ್ನ ಸೇವಕನನ್ನ.”