ಎರಡನೇ ಸಮುವೇಲ 19:1-43

  • ದಾವೀದ ಅಬ್ಷಾಲೋಮನಿಗಾಗಿ ಗೋಳಾಡಿದ (1-4)

  • ಯೋವಾಬ ದಾವೀದನನ್ನ ತಿದ್ದಿದ (5-8ಎ)

  • ದಾವೀದ ಯೆರೂಸಲೇಮಿಗೆ ವಾಪಸ್‌ (8ಬಿ-15)

  • ಶಿಮ್ಮಿ ಕ್ಷಮೆ ಕೇಳಿದ (16-23)

  • ಮೆಫೀಬೋಶೆತ ನಿರಪರಾಧಿ ಅಂತ ಸಾಬೀತಾಯ್ತು (24-30)

  • ಬರ್ಜಿಲೈಯನ್ನ ಗೌರವಿಸಲಾಯ್ತು (31-40)

  • ಕುಲಗಳ ಮಧ್ಯ ಭಿನ್ನಾಭಿಪ್ರಾಯ (41-43)

19  “ಅಬ್ಷಾಲೋಮನಿಗಾಗಿ ರಾಜ ಅಳ್ತಿದ್ದಾನೆ, ಗೋಳಾಡ್ತಾ ಇದ್ದಾನೆ”+ ಅಂತ ಯೋವಾಬನಿಗೆ ಗೊತ್ತಾಯ್ತು.  ರಾಜ ತನ್ನ ಮಗನಿಗಾಗಿ ಗೋಳಾಡ್ತಾ ಇದ್ದಾನೆ ಅನ್ನೋ ಸುದ್ದಿ ಜನ್ರ ಕಿವಿಗೆ ಬಿದ್ದಾಗ ಯುದ್ಧದ ಗೆಲುವಿನ* ಸಂಭ್ರಮ ಮಾಡೋ ಬದ್ಲು ಅವರು ಸಹ ಗೋಳಾಡಿದ್ರು.  ಯುದ್ಧದಲ್ಲಿ ಸೋತು ನಾಚಿಕೆಯಿಂದ ಪಟ್ಟಣಕ್ಕೆ ಓಡಿಹೋಗುವವರ ತರ ಅವರು ಮೌನವಾಗಿ ಪಟ್ಟಣಕ್ಕೆ ವಾಪಸ್‌ ಬಂದ್ರು.+  ರಾಜ ತನ್ನ ಮುಖ ಮುಚ್ಕೊಂಡು “ಅಯ್ಯೋ! ನನ್ನ ಮಗನೇ, ಅಬ್ಷಾಲೋಮನೇ! ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನೇ!” ಅಂತ ಗಟ್ಟಿಯಾಗಿ ಅಳ್ತಿದ್ದ.+  ಆಮೇಲೆ ಯೋವಾಬ ರಾಜನ ಮನೆಗೆ ಬಂದು ಅವನಿಗೆ “ನಿನ್ನ ಸೇವಕರು ನಿನ್ನ, ನಿನ್ನ ಮಕ್ಕಳ,+ ನಿನ್ನ ಹೆಂಡತಿಯರ, ಉಪಪತ್ನಿಯರ+ ಜೀವ ಉಳಿಸಿದ್ರು. ಆದ್ರೆ ನೀನು ಇವತ್ತು ಅವರು ತಲೆತಗ್ಗಿಸೋ ತರ ಮಾಡಿದೆ.  ಯಾರು ನಿನ್ನನ್ನ ದ್ವೇಷಿಸ್ತಾರೋ ಅವ್ರನ್ನ ಪ್ರೀತಿಸ್ತೀಯ, ಯಾರು ನಿನ್ನನ್ನ ಪ್ರೀತಿಸ್ತಾರೋ ಅವ್ರನ್ನ ದ್ವೇಷಿಸ್ತೀಯ. ನಿನ್ನ ಅಧಿಪತಿಗಳು, ಸೇವಕರು ನಿನ್ನ ದೃಷ್ಟಿಯಲ್ಲಿ ಏನೂ ಅಲ್ಲ ಅಂತ ಇವತ್ತು ತೋರಿಸ್ಕೊಟ್ಟೆ. ಇವತ್ತು ಅಬ್ಷಾಲೋಮ ಬದುಕಿ ನಾವೆಲ್ಲ ಸತ್ತುಹೋಗಿದ್ರೆ ಆಗ ನಿನಗೆ ಸಂತೋಷ ಆಗ್ತಿತ್ತು.  ಈಗ ಹೊರಗೆ ಹೋಗಿ ನಿನ್ನ ಸೇವಕರಿಗೆ ಧೈರ್ಯ ಹೇಳು. ಯೆಹೋವನ ಮೇಲೆ ಆಣೆ ಮಾಡಿ ಹೇಳ್ತೀನಿ, ನೀನು ಹೋಗದಿದ್ರೆ ಇವತ್ತು ರಾತ್ರಿ ಆಗುವಷ್ಟರಲ್ಲಿ ಎಲ್ರೂ ನಿನ್ನನ್ನ ಬಿಟ್ಟುಹೋಗ್ತಾರೆ. ಆಗ ನೀನು ಯೌವನದಿಂದ ಇಲ್ಲಿ ತನಕ ಅನುಭವಿಸಿದ ಎಲ್ಲ ನೋವಿಗಿಂತ ಹೆಚ್ಚಿನ ನೋವು ಅನುಭವಿಸ್ತೀಯ” ಅಂದ.  ಹಾಗಾಗಿ ರಾಜ ಪಟ್ಟಣದ ಬಾಗಿಲಲ್ಲಿ ಕೂತ. ರಾಜ ಪಟ್ಟಣದ ಬಾಗಿಲಲ್ಲಿ ಕೂತಿದ್ದಾನೆ ಅನ್ನೋ ವಿಷ್ಯ ಜನ್ರಿಗೆ ಗೊತ್ತಾಯ್ತು. ಎಲ್ರೂ ರಾಜನ ಮುಂದೆ ಬಂದ್ರು. ಆದ್ರೆ ಯುದ್ಧದಲ್ಲಿ ಸೋತುಹೋಗಿದ್ದ ಇಸ್ರಾಯೇಲ್ಯರು ತಮ್ಮತಮ್ಮ ಮನೆಗಳಿಗೆ ಓಡಿಹೋದ್ರು.+  ಇಸ್ರಾಯೇಲಿನ ಎಲ್ಲ ಕುಲಗಳ ಜನ್ರಲ್ಲಿ ವಾದವಿವಾದಗಳಾಗಿ ಅವರು “ರಾಜ ನಮ್ಮನ್ನ ಶತ್ರುಗಳ ಕೈಯಿಂದ ಕಾಪಾಡಿದ,+ ಫಿಲಿಷ್ಟಿಯರಿಂದ ಕಾಪಾಡಿದ. ಆದ್ರೆ ಈಗ ಅಬ್ಷಾಲೋಮನ ಸಲುವಾಗಿ ಅವನು ದೇಶ ಬಿಟ್ಟು ಓಡಿಹೋಗಬೇಕಾಯ್ತು.+ 10  ನಾವು ಅಭಿಷೇಕಿಸಿ ನಮ್ಮ ಮೇಲೆ ರಾಜನಾಗಿ ಮಾಡ್ಕೊಂಡ ಅಬ್ಷಾಲೋಮ+ ಯುದ್ಧದಲ್ಲಿ ಸತ್ತ.+ ರಾಜನನ್ನ ಯಾಕೆ ವಾಪಸ್‌ ಕರ್ಕೊಂಡು ಬರ್ತಿಲ್ಲಾ?” ಅಂದ್ರು. 11  ರಾಜ ದಾವೀದ ಪುರೋಹಿತರಾಗಿದ್ದ ಚಾದೋಕ,+ ಎಬ್ಯಾತಾರಗೆ+ ಈ ಸಂದೇಶ ಕಳಿಸಿದ: “ನೀವು ಯೆಹೂದದ ಹಿರಿಯರ+ ಜೊತೆ ಮಾತಾಡಿ ನನ್ನ ಈ ಮಾತುಗಳನ್ನ ಹೇಳಿ: ‘ರಾಜನನ್ನ ವಾಪಸ್‌ ಅರಮನೆಗೆ ಕರ್ಕೊಂಡು ಬರಬೇಕಂತ ಇಡೀ ಇಸ್ರಾಯೇಲಿನವರು ಮಾತಾಡ್ಕೊಳ್ತಿರೋದು ರಾಜನಿಗೆ ಗೊತ್ತಾಗಿದೆ. ರಾಜನನ್ನ ಕರ್ಕೊಂಡು ಬರೋಕೆ ಯಾಕೆ ಹಿಂದೆ ಮುಂದೆ ನೋಡ್ತಾ ಇದ್ದೀರಾ? 12  ನೀವು ನನ್ನ ಸಹೋದರರು, ನನ್ನ ರಕ್ತಸಂಬಂಧಿಗಳು. ರಾಜನನ್ನ ವಾಪಸ್‌ ಕರ್ಕೊಂಡು ಬರೋಕೆ ಎಲ್ರಿಗಿಂತ ಮೊದ್ಲು ನೀವು ಬರಬೇಕಿತ್ತು. ಆದ್ರೆ ಯಾಕೆ ಹಿಂದೆ ಉಳ್ಕೊಂಡ್ರಿ?’ 13  ಆಮೇಲೆ ಅಮಾಸನಿಗೆ+ ನನ್ನ ಈ ಮಾತುಗಳನ್ನ ಹೇಳಿ ‘ನೀನು ನನ್ನ ರಕ್ತ ಸಂಬಂಧಿ. ಹಾಗಾಗಿ ಇವತ್ತಿಂದ ಯೋವಾಬನ+ ಬದ್ಲು ನೀನು ನನ್ನ ಸೇನಾಪತಿ. ನಾನು ನಿನ್ನನ್ನ ನನ್ನ ಸೇನಾಪತಿಯಾಗಿ ಮಾಡ್ಕೊಳ್ಳದಿದ್ರೆ ದೇವರು ನನಗೆ ದೊಡ್ಡ ಶಿಕ್ಷೆ ಕೊಡಲಿ.’” 14  ಹೀಗೆ ದಾವೀದ ಯೆಹೂದದ ಎಲ್ಲ ಗಂಡಸ್ರ ಮನಸ್ಸು ಗೆದ್ದ. ಅವರು ಒಗ್ಗಟ್ಟಾಗಿ ಬಂದು ರಾಜನಿಗೆ “ನಿನ್ನ ಎಲ್ಲ ಸೇವಕರನ್ನ ಕರ್ಕೊಂಡು ವಾಪಸ್‌ ಬಾ” ಅಂತ ಹೇಳಿ ಕಳಿಸಿದ್ರು. 15  ರಾಜ ಯೋರ್ದನ್‌ ನದಿ ತಲುಪಿದ. ರಾಜನನ್ನ ಭೇಟಿಯಾಗಿ ಅವನನ್ನ ಸುರಕ್ಷಿತವಾಗಿ ಯೋರ್ದನ್‌ ನದಿ ದಾಟಿಸೋಕೆ ಯೆಹೂದದ ಗಂಡಸ್ರು ಗಿಲ್ಗಾಲಿಗೆ+ ಬಂದ್ರು. 16  ಅವ್ರ ಜೊತೆ ಗೇರನ ಮಗ ಶಿಮ್ಮಿ+ ಕೂಡ ರಾಜ ದಾವೀದನನ್ನ ಭೇಟಿ ಮಾಡೋಕೆ ಬೇಗ ಬೇಗ ಬಂದ. ಬಹುರೀಮಲ್ಲಿ ವಾಸವಾಗಿದ್ದ ಇವನು ಬೆನ್ಯಾಮೀನ್ಯನಾಗಿದ್ದ. 17  ಅವನ ಜೊತೆ ಬೆನ್ಯಾಮೀನಿಂದ ಬಂದಿದ್ದ 1,000 ಗಂಡಸರಿದ್ರು. ಅಷ್ಟೇ ಅಲ್ಲ ಸೌಲನ ಕುಟುಂಬದ ಸೇವಕನಾಗಿದ್ದ ಚೀಬ+ ಕೂಡ ಬಂದಿದ್ದ. ಅವನು ತನ್ನ 15 ಗಂಡು ಮಕ್ಕಳ ಜೊತೆ, 20 ಸೇವಕರ ಜೊತೆ ತರಾತುರಿಯಿಂದ ಹೊರಟು ರಾಜನಿಗಿಂತ ಮೊದ್ಲೇ ಯೋರ್ದನ್‌ ನದಿ ಹತ್ರ ಬಂದಿದ್ದ. 18  ಅವನು* ರಾಜನ ಕುಟುಂಬದವ್ರನ್ನ ನದಿ ದಾಟಿಸೋಕೆ, ರಾಜ ಹೇಳೋ ಎಲ್ಲ ವಿಷ್ಯಗಳನ್ನ ಮಾಡೋಕೆ ಕಣಿವೆ ಇಳಿದು ನದಿಯ ಆಕಡೆ ಹೋದ. ಆದ್ರೆ ರಾಜ ಇನ್ನೇನು ಯೋರ್ದನ್‌ ನದಿ ದಾಟಬೇಕಂತ ಇರುವಾಗ ಗೇರನ ಮಗ ಶಿಮ್ಮಿ ರಾಜನ ಮುಂದೆ ಅಡ್ಡಬಿದ್ದು 19  “ನನ್ನ ಒಡೆಯನಾದ ರಾಜನೇ, ದಯವಿಟ್ಟು ನನ್ನ ಅಪರಾಧ ಕ್ಷಮಿಸು. ನೀನು ಯೆರೂಸಲೇಮನ್ನ ಬಿಟ್ಟುಹೋಗ್ತಿದ್ದ ದಿನ ನಾನು ಮಾಡಿದ ಆ ತಪ್ಪನ್ನ ಮರೆತುಬಿಡು.+ ಅದನ್ನ ಮನಸ್ಸಿಗೆ ತಗೋಬೇಡ. 20  ಯಾಕಂದ್ರೆ ನಾನು ಪಾಪ ಮಾಡಿದ್ದೀನಿ ಅಂತ ನನಗೆ ಮನವರಿಕೆ ಆಗಿದೆ. ಅದಕ್ಕೇ ಇವತ್ತು ನನ್ನ ಒಡೆಯನಾದ ರಾಜನನ್ನ ಭೇಟಿ ಮಾಡೋಕೆ ನಾನೇ ಯೋಸೇಫನ ಇಡೀ ಮನೆತನದಿಂದ ಮೊದ್ಲು ಬಂದವನು” ಅಂತ ಹೇಳಿದ. 21  ಕೂಡ್ಲೇ ಚೆರೂಯಳ+ ಮಗ ಅಬೀಷೈ+ “ಯೆಹೋವನ ಅಭಿಷಿಕ್ತನನ್ನ ಶಪಿಸಿದ್ದಕ್ಕಾಗಿ ಶಿಮ್ಮಿಯನ್ನ ಸಾಯಿಸಬೇಕು”+ ಅಂದ. 22  ಆದ್ರೆ ದಾವೀದ “ಚೆರೂಯಳ+ ಮಕ್ಕಳೇ, ನೀವ್ಯಾಕೆ ತಲೆಕೆಡಿಸ್ಕೊಳ್ತೀರ? ನನ್ನ ಇಷ್ಟದ ವಿರುದ್ಧ ಯಾಕೆ ಹೋಗ್ತೀರಾ? ಇವತ್ತು ನಾನು ಇಡೀ ಇಸ್ರಾಯೇಲಿನ ರಾಜ. ಇವತ್ತೇ ಇಸ್ರಾಯೇಲಲ್ಲಿ ಯಾರನ್ನಾದ್ರೂ ಸಾಯಿಸೋದು ಸರಿನಾ?” ಅಂದ. 23  ಆಮೇಲೆ ರಾಜ ಶಿಮ್ಮಿಗೆ “ನಿನ್ನನ್ನ ಸಾಯಿಸಲ್ಲ” ಅಂತ ಹೇಳಿ ಮಾತು ಕೊಟ್ಟ.+ 24  ಸೌಲನ ಮೊಮ್ಮಗ ಮೆಫೀಬೋಶೆತ+ ಸಹ ರಾಜನನ್ನ ಭೇಟಿ ಮಾಡೋಕೆ ಬಂದ. ರಾಜ ಅವನನ್ನ ಬಿಟ್ಟುಹೋಗಿದ್ದ ದಿನದಿಂದ ಹಿಡಿದು ಸಮಾಧಾನದಿಂದ ವಾಪಸ್‌ ಬಂದ ದಿನದ ತನಕ ಮೆಫೀಬೋಶೆತ ತನ್ನ ಕಾಲುಗಳನ್ನ ತೊಳ್ಕೊಂಡಿರಲಿಲ್ಲ, ಮೀಸೆ ಕತ್ತರಿಸಿರಲಿಲ್ಲ, ಬಟ್ಟೆ ಒಗೆದಿರಲಿಲ್ಲ. 25  ಅವನು ರಾಜನನ್ನ ಭೇಟಿ ಮಾಡೋಕೆ ಯೆರೂಸಲೇಮಿಗೆ ಬಂದಾಗ ರಾಜ ಅವನಿಗೆ “ಮೆಫೀಬೋಶೆತ, ನನ್ನ ಜೊತೆ ನೀನ್ಯಾಕೆ ಬರ್ಲಿಲ್ಲ?” ಅಂತ ಕೇಳಿದ. 26  ಅದಕ್ಕೆ ಅವನು “ನನ್ನ ಒಡೆಯನಾದ ರಾಜ, ನನ್ನ ಸೇವಕ+ ನನಗೆ ಮೋಸ ಮಾಡಿಬಿಟ್ಟ. ನಾನು ಕುಂಟ ಆಗಿರೋದ್ರಿಂದ+ ‘ನಾನು ಕತ್ತೆ ಮೇಲೆ ಸವಾರಿಮಾಡ್ತಾ ರಾಜನ ಜೊತೆ ಹೋಗ್ತೀನಿ, ಕತ್ತೆನ ಸಿದ್ಧ ಮಾಡು’ ಅಂತ ಹೇಳಿದ್ದೆ. 27  ಆದ್ರೆ ಅವನು ನನ್ನ ಒಡೆಯನಾದ ರಾಜನ ಹತ್ರ ನನ್ನ ಬಗ್ಗೆ ಸುಳ್ಳು ಹೇಳಿ+ ನನ್ನ ಮೇಲೆ ಆರೋಪ ಹಾಕಿದ್ದಾನೆ. ಹಾಗಿದ್ರೂ ನನ್ನ ಒಡೆಯನಾದ ರಾಜನೇ, ನೀನು ಸತ್ಯ ದೇವರ ದೂತ ಇದ್ದ ಹಾಗೆ. ನಿನಗೇನು ಸರಿ ಅನಿಸುತ್ತೋ ಅದನ್ನೇ ಮಾಡು. 28  ನೀನು ಮನಸ್ಸು ಮಾಡಿದ್ರೆ ನನ್ನ ತಂದೆಯ ಇಡೀ ಮನೆತನವನ್ನೇ ನಾಶ ಮಾಡಬಹುದಿತ್ತು. ಆದ್ರೆ ನೀನು ಹಾಗೆ ಮಾಡದೆ ಈ ನಿನ್ನ ಸೇವಕನಿಗೆ ನಿನ್ನ ಮೇಜಲ್ಲಿ ಕೂತು ಊಟ ಮಾಡೋ ಅವಕಾಶ ಕೊಟ್ಟೆ.+ ಹಾಗಿರುವಾಗ ರಾಜನ ಮುಂದೆ ಬೇರೆ ಬೇಡಿಕೆ ಇಡೋಕೆ ನನಗೇನು ಹಕ್ಕಿದೆ?” ಅಂದ. 29  ಹಾಗಿದ್ರೂ ರಾಜ “ಸಾಕು, ಇದ್ರ ಬಗ್ಗೆ ಮತ್ತೆ ಮಾತಾಡಬೇಡ! ಜಮೀನನ್ನ ನೀನು, ಚೀಬ ಇಬ್ರೂ ಹಂಚ್ಕೊಳ್ಳಬೇಕು ಅನ್ನೋದೇ ನನ್ನ ತೀರ್ಮಾನ”+ ಅಂದ. 30  ಅದಕ್ಕೆ ಮೆಫೀಬೋಶೆತ “ಅವನೇ ಎಲ್ಲಾ ತಗೊಳ್ಳಲಿ. ನನ್ನ ಒಡೆಯನಾದ ರಾಜ ಸಮಾಧಾನವಾಗಿ ಮನೆಗೆ ವಾಪಸ್‌ ಬಂದಿದ್ದಾನಲ್ಲಾ, ನನಗೆ ಅಷ್ಟೇ ಸಾಕು” ಅಂದ. 31  ರಾಜ ಯೋರ್ದನ್‌ ನದಿ ದಾಟುವಾಗ ಅವನ ಜೊತೆ ಇರೋಕೆ ಗಿಲ್ಯಾದ್ಯನಾದ ಬರ್ಜಿಲೈ+ ರೋಗೆಲೀಮಿಂದ ಯೋರ್ದನ್‌ ಹತ್ರ ಬಂದ. 32  ಬರ್ಜಿಲೈಗೆ ತುಂಬ ವಯಸ್ಸಾಗಿತ್ತು, 80 ವರ್ಷ. ಅವನು ಬಹಳ ಶ್ರೀಮಂತ ಆಗಿದ್ರಿಂದ ರಾಜ ಮಹನಯಿಮಲ್ಲಿ ಇದ್ದಾಗ ಅವನಿಗೆ ಊಟ ಕೊಟ್ಟಿದ್ದ.+ 33  ಹಾಗಾಗಿ ರಾಜ ಬರ್ಜಿಲೈಗೆ “ನೀನೂ ಯೋರ್ದನ್‌ ನದಿ ದಾಟಿ ನನ್ನ ಜೊತೆ ಯೆರೂಸಲೇಮಿಗೆ ಬಂದು ನನ್ನ ಮೇಜಲ್ಲಿ ಕೂತು ಊಟ ಮಾಡು”+ ಅಂದ. 34  ಆದ್ರೆ ಬರ್ಜಿಲೈ “ಇನ್ನೆಷ್ಟು ದಿನ ಬದುಕ್ತೀನಿ ಅಂತ ರಾಜನ ಜೊತೆ ಯೆರೂಸಲೇಮಿಗೆ ಬರ್ಲಿ? 35  ನನಗೀಗ 80 ವರ್ಷ.+ ಈ ವಯಸ್ಸಲ್ಲಿ ನಿನ್ನ ಸೇವಕನಾದ ನನಗೆ ಒಳ್ಳೇದು ಯಾವುದು, ಕೆಟ್ಟದು ಯಾವುದು ಅಂತ ಗೊತ್ತಾಗುತ್ತಾ? ತಿನ್ನೋದ್ರಲ್ಲಿ ಕುಡಿಯೋದ್ರಲ್ಲಿ ಏನಾದ್ರೂ ರುಚಿ ಸಿಗುತ್ತಾ? ಗಾಯಕ ಗಾಯಕಿಯರ ಸುಮಧುರ ಸಂಗೀತ ಕೇಳಿಸ್ಕೊಳ್ಳೋಕೆ ಆಗುತ್ತಾ?+ ಹೀಗಿರುವಾಗ ನನ್ನ ಒಡೆಯನಾದ ರಾಜನಿಗೆ ನಾನ್ಯಾಕೆ ಭಾರ ಆಗಿರಬೇಕು? 36  ರಾಜ ನದಿ ದಾಟುವಾಗ ಅವನ ಜೊತೆ ಇರೋಕೆ ಸಿಕ್ಕಿದ ಅವಕಾಶನೇ ಈ ನಿನ್ನ ಸೇವಕನಿಗೆ ಸಿಕ್ಕಿದ ದೊಡ್ಡ ಸೌಭಾಗ್ಯ. ಅಷ್ಟೇ ಸಾಕು. ರಾಜ ನನಗೆ ಬೇರೇನೂ ಬಹುಮಾನವಾಗಿ ಕೊಡೋ ಅಗತ್ಯ ಇಲ್ಲ. 37  ದಯವಿಟ್ಟು ನನಗೆ ವಾಪಸ್‌ ಹೋಗೋಕೆ ಅನುಮತಿ ಕೊಡು. ನಾನು ನನ್ನ ಪಟ್ಟಣದಲ್ಲಿ ನನ್ನ ಅಪ್ಪಅಮ್ಮನ ಸಮಾಧಿ ಹತ್ರ ಸಾಯ್ತೀನಿ.+ ನೋಡು, ನಿನ್ನ ಸೇವಕನಾದ ಕಿಮ್ಹಾಮ ಇಲ್ಲಿದ್ದಾನೆ.+ ನನ್ನ ಒಡೆಯನಾದ ರಾಜ, ನಿನ್ನ ಜೊತೆ ನದಿ ದಾಟೋಕೆ ಅವನಿಗೆ ಅನುಮತಿ ಕೊಡು. ನಿನಗೆ ಸರಿ ಅನಿಸಿದ್ದನ್ನ ಅವನಿಗೆ ಮಾಡು” ಅಂದ. 38  ಅದಕ್ಕೆ ರಾಜ “ಸರಿ, ಕಿಮ್ಹಾಮ ನನ್ನ ಜೊತೆ ನದಿ ದಾಟ್ಲಿ. ನಿನಗೆ ಏನು ಒಳ್ಳೇದು ಅಂತ ಅನಿಸುತ್ತೋ ಅದನ್ನೇ ಅವನಿಗೆ ಮಾಡ್ತೀನಿ. ನೀನು ಏನೇ ಹೇಳಿದ್ರೂ ನಾನು ನಿನಗಾಗಿ ಮಾಡ್ತೀನಿ” ಅಂದ. 39  ಆಮೇಲೆ ಎಲ್ರು ಯೋರ್ದನ್‌ ದಾಟೋಕೆ ಶುರು ಮಾಡಿದ್ರು. ರಾಜ ನದಿ ದಾಟೋ ಮೊದ್ಲು ಬರ್ಜಿಲೈಗೆ ಮುತ್ತು ಕೊಟ್ಟು+ ಅವನನ್ನ ಆಶೀರ್ವದಿಸಿದ. ಬರ್ಜಿಲೈ ಮನೆಗೆ ಹೋದ. 40  ರಾಜ ನದಿ ದಾಟಿ ಗಿಲ್ಗಾಲಿಗೆ+ ಹೋದಾಗ ಕಿಮ್ಹಾಮ ಅವನ ಜೊತೆ ಹೋದ. ಯೆಹೂದದ ಎಲ್ಲ ಜನ್ರು, ಇಸ್ರಾಯೇಲಿನ ಅರ್ಧ ಜನ್ರು ರಾಜನ ಜೊತೆ ಹೋದ್ರು.+ 41  ಆಮೇಲೆ ಇಸ್ರಾಯೇಲಿನ ಎಲ್ಲ ಗಂಡಸ್ರು ರಾಜನಿಗೆ “ರಾಜ, ಯೆಹೂದದ ನಮ್ಮ ಸಹೋದರರು ನಿನ್ನನ್ನ, ನಿನ್ನ ಕುಟುಂಬದವ್ರನ್ನ, ನಿನ್ನ ಎಲ್ಲ ಗಂಡಸ್ರನ್ನ ನಮಗೂ ಹೇಳದೆ ಕಳ್ಳತನದಿಂದ ಯೋರ್ದನ್‌ ನದಿ ದಾಟಿಸಿ ಯಾಕೆ ಕರ್ಕೊಂಡು ಬಂದ್ರು?” ಅಂತ ಕೇಳಿದ್ರು.+ 42  ಇದಕ್ಕೆ ಯೆಹೂದದ ಗಂಡಸ್ರೆಲ್ಲ ಇಸ್ರಾಯೇಲಿನ ಗಂಡಸ್ರಿಗೆ “ರಾಜ ನಮ್ಮ ಸಂಬಂಧಿಕ.+ ನೀವ್ಯಾಕೆ ಕೋಪ ಮಾಡ್ಕೊಳ್ತೀರಾ? ರಾಜನಿಗೆ ಸೇರಿದ್ದನ್ನ ನುಂಗಿಹಾಕಿದ್ದೀವಾ? ಅಥವಾ ನಮಗೆ ಯಾವುದಾದ್ರೂ ಉಡುಗೊರೆ ಸಿಕ್ಕಿದ್ಯಾ?” ಅಂದ್ರು. 43  ಆದ್ರೂ ಇಸ್ರಾಯೇಲಿನ ಗಂಡಸ್ರು ಯೆಹೂದದ ಗಂಡಸ್ರಿಗೆ “ಈ ರಾಜ್ಯದ 10 ಭಾಗ ನಮ್ಮದು. ಹಾಗಾಗಿ ದಾವೀದನ ಮೇಲೆ ನಿಮಗಿಂತ ನಮಗೆ ಹಕ್ಕು ಜಾಸ್ತಿ. ನೀವ್ಯಾಕೆ ನಮ್ಮನ್ನ ಕೀಳಾಗಿ ನೋಡ್ತೀರಾ? ರಾಜನನ್ನ ಕರ್ಕೊಂಡು ಬರೋಕೆ ಮೊದ್ಲು ಹೋಗಬೇಕಾದವರು ನಾವು ಅಲ್ವಾ?” ಅಂತ ಹೇಳಿದ್ರು. ಇಷ್ಟೆಲ್ಲಾ ವಾದ ಆದ್ರೂ ಇಸ್ರಾಯೇಲಿನ ಗಂಡಸ್ರಿಗೆ ಯೆಹೂದದ ಗಂಡಸ್ರನ್ನ ಮಾತಲ್ಲಿ ಸೋಲಿಸೋಕೆ ಆಗಲಿಲ್ಲ.

ಪಾದಟಿಪ್ಪಣಿ

ಅಥವಾ “ಬಿಡುಗಡೆ.”
ಬಹುಶಃ, “ಅವರು.”