ಎರಡನೇ ಸಮುವೇಲ 6:1-23

  • ಮಂಜೂಷವನ್ನ ಯೆರೂಸಲೇಮಿಗೆ ತಂದ್ರು (1-23)

    • ಉಜ್ಜ ಮಂಜೂಷ ಹಿಡಿದ, ಪ್ರಾಣಕಳ್ಕೊಂಡ (6-8)

    • ಮೀಕಲ ದಾವೀದನನ್ನ ಮನಸ್ಸಲ್ಲೇ ತಿರಸ್ಕರಿಸಿದಳು (16, 20-23)

6  ದಾವೀದ ಇಸ್ರಾಯೇಲಲ್ಲಿ ಇದ್ದಂಥ ಉತ್ತಮವಾದ ಸೈನ್ಯವನ್ನೆಲ್ಲ ಮತ್ತೆ ಒಟ್ಟುಸೇರಿಸಿದ. ಆ ಸೈನ್ಯದಲ್ಲಿ 30,000 ಗಂಡಸ್ರು ಇದ್ರು.  ದಾವೀದ, ಅವನ ಜೊತೆಯಿದ್ದ ಎಲ್ಲ ಗಂಡಸ್ರು ಸತ್ಯ ದೇವರ ಮಂಜೂಷವನ್ನ+ ತರೋಕೆ ಯೆಹೂದ ದೇಶದ ಬಾಳಾ ಅನ್ನೋ ಜಾಗಕ್ಕೆ ಹೋದ್ರು. ಜನ್ರು ಈ ಮಂಜೂಷದ ಮುಂದೆ ನಿಂತು ಕೆರೂಬಿಯರ ಮೇಲೆ* ಕೂತಿರೋ+ ಸೈನ್ಯಗಳ ದೇವರಾದ ಯೆಹೋವನ ಹೆಸ್ರಲ್ಲಿ ಬೇಡ್ಕೊಳ್ತಿದ್ರು.+  ಗುಡ್ಡದ ಮೇಲಿದ್ದ ಅಬೀನಾದಾಬನ ಮನೆಯಿಂದ+ ಸತ್ಯ ದೇವರ ಮಂಜೂಷವನ್ನ ಸಾಗಿಸೋಕೆ ಒಂದು ಹೊಸ ಬಂಡಿ ತಂದ್ರು.+ ಅದ್ರಲ್ಲಿ ಮಂಜೂಷ ಇಟ್ರು. ಆ ಹೊಸ ಬಂಡಿಯನ್ನ ಅಬೀನಾದಾಬನ ಮಕ್ಕಳಾಗಿದ್ದ ಉಜ್ಜ, ಅಹಿಯೋವ ಮುನ್ನಡೆಸ್ತಿದ್ರು.  ಹೀಗೆ ಅವರು ಗುಡ್ಡದ ಮೇಲಿದ್ದ ಅಬೀನಾದಾಬನ ಮನೆಯಿಂದ ಸತ್ಯ ದೇವರ ಮಂಜೂಷವನ್ನ ಸಾಗಿಸ್ತಿದ್ದಾಗ ಅಹಿಯೋವ ಮಂಜೂಷದ ಮುಂದೆಮುಂದೆ ನಡಿತಿದ್ದ.  ದಾವೀದ, ಇಸ್ರಾಯೇಲ್ಯರ ಎಲ್ಲ ಮನೆತನದವರು ಮರದಿಂದ ಮಾಡಿದ ಎಲ್ಲ ತರದ ಸಂಗೀತ ಸಾಧನಗಳನ್ನ, ತಂತಿವಾದ್ಯಗಳನ್ನ,+ ದಮ್ಮಡಿಗಳನ್ನ,+ ಕಿಂಕಿಣಿ, ಝಲ್ಲರಿಗಳನ್ನ+ ಬಾರಿಸ್ತಾ ಯೆಹೋವನ ಮುಂದೆ ಸಂಭ್ರಮಿಸ್ತಿದ್ರು.  ಅವರು ನಾಕೋನನ ಕಣಕ್ಕೆ ಬಂದಾಗ ಎತ್ತುಗಳು ಬಂಡಿಯನ್ನ ಇನ್ನೇನು ಮಗುಚಿ ಹಾಕುತ್ತೆ ಅನ್ನುವಾಗ ಉಜ್ಜ ಸತ್ಯ ದೇವರ ಮಂಜೂಷದ ಕಡೆಗೆ ಕೈಚಾಚಿ ಅದನ್ನ ಹಿಡಿದ.+  ಆಗ ಉಜ್ಜನ ಮೇಲೆ ಯೆಹೋವನಿಗೆ ತುಂಬ ಕೋಪ ಬಂತು. ಅವನು ದೇವರ ನಿಯಮಕ್ಕೆ ಅಗೌರವ ತೋರಿಸಿದ್ರಿಂದ+ ಸತ್ಯ ದೇವರು ಅವನನ್ನ ಅಲ್ಲೇ ಸಾಯಿಸಿದನು.+ ಉಜ್ಜ ಸತ್ಯ ದೇವರ ಮಂಜೂಷದ ಪಕ್ಕದಲ್ಲೇ ಸತ್ತುಹೋದ.  ಯೆಹೋವನ ಕೋಪ ಉಜ್ಜನ ಮೇಲೆ ಬಂದಿದ್ರಿಂದ ದಾವೀದನಿಗೆ ಸಿಟ್ಟು* ಬಂತು. ಹಾಗಾಗಿ ಆ ಜಾಗವನ್ನ ಇವತ್ತಿಗೂ ಪೆರೆಚ್‌-ಉಜ್ಜ* ಅಂತ ಕರಿತಾರೆ.  ಆ ದಿನ ದಾವೀದ ಯೆಹೋವನಿಗೆ ಹೆದರಿ+ “ಯೆಹೋವನ ಮಂಜೂಷವನ್ನ ನಾನಿರೋ ಪಟ್ಟಣಕ್ಕೆ ಹೇಗೆ ತಗೊಂಡು ಹೋಗ್ಲಿ?”+ ಅಂದ. 10  ಅವನು ತಾನು ಇದ್ದ ದಾವೀದಪಟ್ಟಣಕ್ಕೆ+ ಯೆಹೋವನ ಮಂಜೂಷವನ್ನ ತಗೊಂಡು ಹೋಗೋಕೆ ಇಷ್ಟಪಡದೆ ಗಿತ್ತೀಯನಾದ ಓಬೇದೆದೋಮನ ಮನೆಗೆ ಕಳಿಸ್ಕೊಟ್ಟ.+ 11  ಯೆಹೋವನ ಮಂಜೂಷ ಗಿತ್ತೀಯನಾದ ಓಬೇದೆದೋಮನ ಮನೇಲಿ ಮೂರು ತಿಂಗಳು ಇತ್ತು. ಯೆಹೋವ ಓಬೇದೆದೋಮನನ್ನ, ಅವನ ಕುಟುಂಬದವ್ರನ್ನ ಆಶೀರ್ವದಿಸ್ತಾ ಹೋದನು.+ 12  ರಾಜ ದಾವೀದನಿಗೆ “ಸತ್ಯ ದೇವರ ಮಂಜೂಷದಿಂದಾಗಿ ಓಬೇದೆದೋಮನ ಮನೆಯನ್ನ, ಅವನಿಗೆ ಸೇರಿದ ಎಲ್ಲವನ್ನ ಯೆಹೋವ ಆಶೀರ್ವದಿಸಿದ್ದಾನೆ” ಅಂತ ಯಾರೋ ಹೇಳಿದ್ರು. ಆಗ ದಾವೀದ ಸತ್ಯ ದೇವರ ಮಂಜೂಷವನ್ನ ಓಬೇದೆದೋಮನ ಮನೆಯಿಂದ ದಾವೀದಪಟ್ಟಣಕ್ಕೆ ಸಂಭ್ರಮದಿಂದ ತಗೊಂಡು ಬರೋಕೆ ಹೋದ.+ 13  ಯೆಹೋವನ ಮಂಜೂಷವನ್ನ ಹೊತ್ಕೊಂಡವರು+ ಆರು ಹೆಜ್ಜೆ ಇಟ್ಟ ಮೇಲೆ ದಾವೀದ ಒಂದು ಹೋರಿಯನ್ನ, ಕೊಬ್ಬಿದ ಪ್ರಾಣಿಯನ್ನ ಬಲಿಯಾಗಿ ಅರ್ಪಿಸಿದ. 14  ದಾವೀದ ನಾರಿನ ಏಫೋದನ್ನ ಹಾಕೊಂಡು ಯೆಹೋವನ ಮುಂದೆ ತನ್ನ ಪೂರ್ಣಶಕ್ತಿಯಿಂದ ನೃತ್ಯಮಾಡ್ತಿದ್ದ.+ 15  ದಾವೀದ, ಇಸ್ರಾಯೇಲಿನ ಎಲ್ಲ ಮನೆತನದವರು ಸಂತೋಷದಿಂದ ಕೂಗ್ತಾ+ ಕೊಂಬು ಊದ್ತಾ+ ಯೆಹೋವನ ಮಂಜೂಷವನ್ನ+ ತಗೊಂಡು ಬರ್ತಿದ್ರು. 16  ಆದ್ರೆ ಯೆಹೋವನ ಮಂಜೂಷ ದಾವೀದಪಟ್ಟಣದ ಒಳಗೆ ಬಂದಾಗ ಸೌಲನ ಮಗಳಾದ ಮೀಕಲ+ ಕಿಟಕಿಯಿಂದ ಕೆಳಗೆ ನೋಡಿದಳು. ರಾಜ ದಾವೀದ ಯೆಹೋವನ ಮುಂದೆ ಕುಣಿದು ನೃತ್ಯಮಾಡ್ತಾ ಇರೋದನ್ನ ನೋಡಿ ತನ್ನ ಹೃದಯದಲ್ಲಿ ಅವನನ್ನ ತಿರಸ್ಕರಿಸಿದಳು.+ 17  ದಾವೀದ ಮಂಜೂಷವನ್ನ ಇಡೋಕೆ ಒಂದು ಡೇರೆ ಮಾಡಿಸಿದ್ದ. ಅವರು ಯೆಹೋವನ ಮಂಜೂಷವನ್ನ ಒಳಗೆ ತಂದು ಅದ್ರ ಜಾಗದಲ್ಲಿಟ್ರು.+ ಆಮೇಲೆ ದಾವೀದ ಯೆಹೋವನ ಮುಂದೆ ಸರ್ವಾಂಗಹೋಮ ಬಲಿಗಳನ್ನ,+ ಸಮಾಧಾನ ಬಲಿಗಳನ್ನ+ ಅರ್ಪಿಸಿದ.+ 18  ದಾವೀದ ಸರ್ವಾಂಗಹೋಮ ಬಲಿ, ಸಮಾಧಾನ ಬಲಿಗಳನ್ನ ಅರ್ಪಿಸಿದ ಮೇಲೆ ಸೈನ್ಯಗಳ ದೇವರಾದ ಯೆಹೋವನ ಹೆಸ್ರಲ್ಲಿ ಜನ್ರನ್ನ ಆಶೀರ್ವದಿಸಿದ. 19  ಇದಾದ್ಮೇಲೆ ಅವನು ಎಲ್ಲ ಜನ್ರಿಗೆ, ಇಸ್ರಾಯೇಲಿನ ಇಡೀ ಜನ್ರಿಗೆ, ಪ್ರತಿಯೊಬ್ಬ ಗಂಡಸು, ಸ್ತ್ರೀಗೆ ಬಳೆಯಾಕಾರದ ಒಂದೊಂದು ರೊಟ್ಟಿ, ಖರ್ಜೂರದ ಬಿಲ್ಲೆ, ಒಣದ್ರಾಕ್ಷಿ ಬಿಲ್ಲೆ ಕೊಟ್ಟ. ಜನ್ರೆಲ್ಲ ತಮ್ಮತಮ್ಮ ಮನೆಗೆ ಹೋದ್ರು. 20  ದಾವೀದ ತನ್ನ ಸ್ವಂತ ಕುಟುಂಬದವ್ರನ್ನ ಆಶೀರ್ವದಿಸೋಕೆ ಹೋದಾಗ ಸೌಲನ ಮಗಳಾದ ಮೀಕಲ+ ಅವನನ್ನ ಭೇಟಿಯಾಗೋಕೆ ಹೊರಗೆ ಬಂದಳು. ಅವನಿಗೆ “ತಲೆಕೆಟ್ಟ ವ್ಯಕ್ತಿಯೊಬ್ಬ ತನ್ನನ್ನೇ ಬೆತ್ತಲೆ ಮಾಡ್ಕೊಳ್ಳೋ ತರ, ಇವತ್ತು ಇಸ್ರಾಯೇಲ್‌ ರಾಜ ತನ್ನ ಸೇವಕರ ದಾಸಿಯರ ಕಣ್ಮುಂದೆ ಅರೆಬೆತ್ತಲೆಯಾಗಿ ತನಗೆ ತಾನೇ ಎಂಥ ಗೌರವ ತಂದ್ಕೊಂಡ!” ಅಂದಳು.+ 21  ಅದಕ್ಕೆ ದಾವೀದ “ನನ್ನ ಸಂಭ್ರಮ ಯೆಹೋವನ ಮುಂದೆ. ಆತನು ನಿನ್ನ ತಂದೆಯನ್ನ, ಅವನ ಕುಟುಂಬದವ್ರನ್ನ ಬಿಟ್ಟು ನನ್ನನ್ನ ಆರಿಸ್ಕೊಂಡನು. ಯೆಹೋವನ ಸ್ವಂತ ಜನ್ರಾದ ಇಸ್ರಾಯೇಲಿನ+ ಮೇಲೆ ನನ್ನನ್ನ ನಾಯಕ ಮಾಡಿದನು. ಹಾಗಾಗಿ ನಾನು ಯೆಹೋವನ ಮುಂದೆ ಸಂಭ್ರಮಿಸ್ತೀನಿ. 22  ಇದಕ್ಕಿಂತ ಇನ್ನೂ ಹೆಚ್ಚಾಗಿ ನಾನು ನನ್ನನ್ನ ತಗ್ಗಿಸ್ಕೊಳ್ತೀನಿ. ನನ್ನ ಸ್ವಂತ ದೃಷ್ಟಿಯಲ್ಲೂ ಅಲ್ಪನಾಗ್ತೀನಿ. ಆದ್ರೆ ನೀನು ಹೇಳಿದ ಆ ದಾಸಿಯರು ನನ್ನನ್ನ ಮಹಿಮೆಪಡಿಸ್ತಾರೆ” ಅಂದ. 23  ಹಾಗಾಗಿ ಸೌಲನ ಮಗಳಾದ ಮೀಕಲಗೆ+ ಅವಳು ಸಾಯೋ ತನಕ ಮಕ್ಕಳಾಗಲಿಲ್ಲ.

ಪಾದಟಿಪ್ಪಣಿ

ಬಹುಶಃ, “ಮಧ್ಯ.”
ಅಥವಾ “ಬೇಜಾರು.”
ಅರ್ಥ “ಉಜ್ಜನ ವಿರುದ್ಧ ಸ್ಪೋಟಗೊಂಡ ಕಡುಕೋಪ.”